ನವದೆಹಲಿ : ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಟೀಮ್ ಇಂಡಿಯಾದ ಆಯ್ಕೆ ನೀತಿ ಹಾಗೂ ತಂಡದ ನಿರ್ವಹಣೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾಗೆ ಪದೇಪದೇ ಅವಕಾಶ ನೀಡುತ್ತಿರುವುದನ್ನು ಪ್ರಶ್ನಿಸಿರುವ ಶ್ರೀಕಾಂತ್, ವೇಗದ ಬೌಲಿಂಗ್ ಎದುರಿಸುವಲ್ಲಿ ತಿಲಕ್ ವರ್ಮಾ ಇನ್ನೂ ಆತ್ಮವಿಶ್ವಾಸದಿಂದ ಕಾಣುತ್ತಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿನ ಪ್ರದರ್ಶನದ ಬಳಿಕವೂ ಅವರನ್ನು ತಂಡದಲ್ಲಿ ಮುಂದುವರಿಸುತ್ತಿರುವುದಕ್ಕೆ ಯಾವುದೇ ಸ್ಪಷ್ಟ ಕಾರಣ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಶ್ರೀಕಾಂತ್, “ಈ ಕ್ಷಣಕ್ಕೆ ತಿಲಕ್ ವರ್ಮಾಗೆ ಪರಿಸ್ಥಿತಿಯ ಅರಿವೇ ಇಲ್ಲ. ವೇಗದ ಬೌಲರ್ಗಳನ್ನು ಎದುರಿಸಲು ಅವರು ಹಿಂಜರಿಯುತ್ತಿರುವಂತೆ ಕಾಣುತ್ತದೆ. ಸ್ಪಿನ್ನರ್ಗಳು ಬರುವವರೆಗೂ ಕಾಯುತ್ತಿರುವಂತೆ ಅವರ ಬ್ಯಾಟಿಂಗ್ ಗೋಚರಿಸುತ್ತಿದೆ. ಇಂತಹ ಸ್ಥಿತಿಯಲ್ಲಿರುವ ಆಟಗಾರನನ್ನು ನಿರಂತರವಾಗಿ ಬೆಂಬಲಿಸುವುದು ತಂಡದ ಹಿತದೃಷ್ಟಿಯಿಂದ ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.
ಶ್ರೀಕಾಂತ್ ಮತ್ತಷ್ಟು ಕಿಡಿಕಾರುತ್ತಾ, ತಿಲಕ್ ವರ್ಮಾರನ್ನು ತಂಡದ ಪ್ರಮುಖ ಬ್ಯಾಟರ್ ಹಾಗೂ ಉಪನಾಯಕನಾಗಿ ಪರಿಗಣಿಸಲಾಗುತ್ತಿದೆ. ಆದರೆ ವೇಗದ ಬೌಲರ್ಗಳ ವಿರುದ್ಧ ಅವರನ್ನು ರಕ್ಷಿಸುವ ರೀತಿಯಲ್ಲಿ ಬ್ಯಾಟಿಂಗ್ ಕ್ರಮ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು. ಅಕ್ಷರ್ ಪಟೇಲ್ ಅವರನ್ನು ತಿಲಕ್ ವರ್ಮಾಗಿಂತ ಮೊದಲು ಬ್ಯಾಟಿಂಗ್ಗೆ ಕಳುಹಿಸುವುದು ಇದೇ ಉದ್ದೇಶವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
“ವೇಗದ ಬೌಲಿಂಗ್ ಎದುರಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಕೆಳಕ್ರಮಾಂಕದಲ್ಲಿ ಆಡಿಸುವುದು ಸರಿಯಾದ ತಂತ್ರವಲ್ಲ” ಎಂದು ಟೀಕಿಸಿದರು. ತಿಲಕ್ ವರ್ಮಾಗೆ ಬದಲಾಗಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕೆಂದು ಶ್ರೀಕಾಂತ್ ಒತ್ತಾಯಿಸಿದರು. ಅನುಭವ ಹಾಗೂ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಸಂಜು ಅವರಲ್ಲಿದೆ. ಇಂತಹ ಸಂದರ್ಭಗಳಲ್ಲಿ ಅವರನ್ನು ಕಡೆಗಣಿಸುವುದು ಸಮರ್ಥನೀಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ತಂಡದಲ್ಲಿ ಸ್ಥಾನ ಪ್ರದರ್ಶನದ ಆಧಾರದ ಮೇಲೆ ಸಿಗಬೇಕು, ನಿರಂತರ ಅವಕಾಶ ಮಾತ್ರ ಮಾನದಂಡವಾಗಬಾರದು ಎಂದು ಅವರು ಹೇಳಿದರು.
ತಿಲಕ್ ವರ್ಮಾ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ ಎಂಬ ಟೀಕೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶ್ರೀಕಾಂತ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಅವರು ತಿಲಕ್ ಅವರ ಬ್ಯಾಟಿಂಗ್ ಧೋರಣೆಯನ್ನು ಪ್ರಶ್ನಿಸಿ, ತಂಡದ ಅಗತ್ಯಕ್ಕಿಂತ ವೈಯಕ್ತಿಕ ಇನ್ನಿಂಗ್ಸ್ಗೆ ಹೆಚ್ಚು ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಟೀಕಿಸಿದ್ದರು. ಇದೀಗ ಮತ್ತೊಮ್ಮೆ ಆಯ್ಕೆ ನೀತಿಯನ್ನೇ ಪ್ರಶ್ನಿಸುವ ಮೂಲಕ ಟೀಮ್ ಇಂಡಿಯಾ ನಿರ್ವಹಣೆಯ ಮೇಲೆ ಒತ್ತಡ ಹೆಚ್ಚಿಸಿದ್ದಾರೆ.
ಭಾರತ ತಂಡವು ಮುಂದಿನ ಸರಣಿಗಳ ಸಿದ್ಧತೆಯಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಶ್ರೀಕಾಂತ್ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತಿಲಕ್ ವರ್ಮಾಗೆ ಮತ್ತಷ್ಟು ಅವಕಾಶ ನೀಡಬೇಕೇ ಅಥವಾ ಉತ್ತಮ ಫಾರ್ಮ್ನಲ್ಲಿರುವ ಇತರ ಆಟಗಾರರಿಗೆ ಅವಕಾಶ ಕಲ್ಪಿಸಬೇಕೇ ಎಂಬ ಪ್ರಶ್ನೆ ಈಗ ಮತ್ತೆ ಕ್ರಿಕೆಟ್ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ : ಅಭಿಮಾನಿ ಯುವತಿಯೊಂದಿಗೆ ಶ್ರೇಯಸ್ ಅಯ್ಯರ್ ಮೋಜಿನ ಮಾತುಕತೆ ವೈರಲ್



















