ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಮುಂದಿನ 2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಇತ್ತೀಚೆಗಷ್ಟೇ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿರುವ ಈ ಇಬ್ಬರೂ ಹಿರಿಯ ಆಟಗಾರರು 2027ರ ವಿಶ್ವಕಪ್ವರೆಗೂ ಏಕದಿನ ಕ್ರಿಕೆಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದೆ.
ಬಿಬಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ತಂಡ ಭವಿಷ್ಯದ ಯೋಜನೆಗಳು, ಅದರಲ್ಲೂ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ 2027ರ ವಿಶ್ವಕಪ್ ಯೋಜನೆಗಳ ಕುರಿತು ಮಂಡಳಿಯಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಆಡಳಿತ ಮಂಡಳಿಯ ಆಂತರಿಕ ವಿಚಾರ. ನಮ್ಮಲ್ಲಿ ಉತ್ತಮ ತಂಡವಿದೆ ಮತ್ತು ಸಾಕಷ್ಟು ಪರಿಣತರಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ, ಆಯ್ಕೆದಾರರು, ಸಹಾಯಕ ಸಿಬ್ಬಂದಿ, ಮುಖ್ಯ ಕೋಚ್ ಮತ್ತು ಆಟಗಾರರನ್ನು ಒಳಗೊಂಡಂತೆ ಎಲ್ಲರ ನಿರ್ಧಾರಗಳನ್ನು ಒಟ್ಟಾಗಿ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ಹಾಗಾಗಿ ಮಾಧ್ಯಮಗಳ ಮುಂದೆ ಇದನ್ನು ಬಹಿರಂಗಪಡಿಸುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಆಯ್ಕೆ ಸಮಿತಿಯ ನಿಗೂಢ ಮೌನ
ಹಿರಿಯ ಆಟಗಾರರಿಬ್ಬರೂ 2027ರ ಏಕದಿನ ವಿಶ್ವಕಪ್ ಆಡಲು ತುದಿಗಾಲಲ್ಲಿ ನಿಂತಿದ್ದರೂ, ಈ ವಿಚಾರವಾಗಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಯಾವುದೇ ಭರವಸೆಯಾಗಲೀ ಅಥವಾ ಖಚಿತ ನಿರ್ಧಾರವಾಗಲೀ ಪ್ರಕಟಿಸಿಲ್ಲ. ಈ ರೀತಿಯ ಮಹತ್ವದ ರಣತಂತ್ರಗಳು, ಆಟಗಾರರ ನಿರ್ವಹಣೆಗಳು ಮತ್ತು ಮುಂಬರುವ ಟೂರ್ನಿಗಳಿಗೆ ತಂಡವನ್ನು ಕಟ್ಟುವ ಬಗ್ಗೆ ಆಡಳಿತ ಮಂಡಳಿಯ ಕೋಣೆಯಲ್ಲಿಯೇ ತೀರ್ಮಾನವಾಗಬೇಕು ಹೊರತು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಬಾರದು ಎನ್ನುವುದು ಬಿಸಿಸಿಐನ ದೃಢವಾದ ನಿಲುವಾಗಿದೆ.
ಬಾಂಗ್ಲಾದೇಶ ಪ್ರವಾಸ: ಸರ್ಕಾರದ ನಿರ್ಧಾರವೇ ಅಂತಿಮ
ಇದೇ ವೇಳೆ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಮುಂದೂಡಲ್ಪಟ್ಟಿರುವ ಭಾರತದ ಬಾಂಗ್ಲಾದೇಶ ಪ್ರವಾಸದ ಕುರಿತೂ ಸೈಕಿಯಾ ಪ್ರತಿಕ್ರಿಯಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯವಾಗಿ ಎಷ್ಟೇ ಬದಲಾವಣೆಗಳಿದ್ದರೂ, ಆ ದೇಶದ ಕ್ರಿಕೆಟ್ ಮಂಡಳಿಯ ನೇತೃತ್ವವನ್ನು ಇತ್ತೀಚೆಗಷ್ಟೇ ಮಾಜಿ ನಾಯಕ ತಮೀಮ್ ಇಕ್ಬಾಲ್ ವಹಿಸಿಕೊಂಡಿದ್ದರೂ, ಬಿಸಿಸಿಐ ಅವರ ದ್ವಿಪಕ್ಷೀಯ ಸರಣಿಯನ್ನು ಅಂತಿಮಗೊಳಿಸುವುದು ಕೇವಲ ಭಾರತ ಸರ್ಕಾರದ ನೀತಿ ನಿಯಮಗಳ ಅನ್ವಯ ಮಾತ್ರ ಎಂದು ಖಚಿತಪಡಿಸಿದ್ದಾರೆ.
“ಬಿಸಿಸಿಐ ಕೇವಲ ಒಂದು ಕ್ರಿಕೆಟ್ ಆಡಳಿತ ಮಂಡಳಿಯೇ ಹೊರತು, ಬೇರೆ ದೇಶಗಳಲ್ಲಿ ಏನಾಗುತ್ತಿದೆ ಅಥವಾ ಅಲ್ಲಿನ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ (ಪ್ರಜಾಸತ್ತಾತ್ಮಕವೋ, ಸರ್ವಾಧಿಕಾರವೋ) ಎನ್ನುವುದು ನಮಗೆ ಸಂಬಂಧಪಡದ ವಿಚಾರ. ದ್ವಿಪಕ್ಷೀಯ ಅಥವಾ ಬಹುರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕುರಿತಂತೆ ಭಾರತ ಸರ್ಕಾರ ಯಾವ ನೀತಿಯನ್ನು ರೂಪಿಸುತ್ತದೆಯೋ, ನಾವು ಕಟ್ಟುನಿಟ್ಟಾಗಿ ಅದನ್ನೇ ಪಾಲಿಸುತ್ತೇವೆ” ಎಂದು ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.



















