ನವದೆಹಲಿ : ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಮುಸ್ಲಿಂ ಬಹುಸಂಖ್ಯಾತರಿರುವಂಥ ಲಕ್ಷದ್ವೀಪದಲ್ಲಿ ಸುಮಾರು ಐದು ದಶಕಗಳಿಂದ ಜಾರಿಯಲ್ಲಿದ್ದ ಮದ್ಯ ನಿಷೇಧ ಕಾಯ್ದೆಯನ್ನು ಹಿಂಪಡೆದಿರುವ ಕೇಂದ್ರ ಸರ್ಕಾರ, ಇನ್ಮುಂದೆ ದ್ವೀಪದಲ್ಲಿ ಪರವಾನಗಿ ಆಧಾರಿತ ನಿಯಂತ್ರಿತ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೂನ್ 5 ರಂದು ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಪ್ರಕಾರ, ಲಕ್ಷದ್ವೀಪದ ಇತಿಹಾಸದಲ್ಲೇ ಮೊದಲ ಬಾರಿಗೆ ಪರವಾನಗಿ ಪಡೆದ ಮಳಿಗೆಗಳ ಮೂಲಕ ಮದ್ಯ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ.
ಲಕ್ಷದ್ವೀಪದಲ್ಲಿ 1979ರಿಂದ ಜಾರಿಯಲ್ಲಿದ್ದ ‘ಲಕ್ಷದ್ವೀಪ ಮದ್ಯ ನಿಷೇಧ ನಿಯಂತ್ರಣ’ ಕಾಯ್ದೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರ ಸ್ಥಾನದಲ್ಲಿ ‘ಲಕ್ಷದ್ವೀಪ ಅಬಕಾರಿ ನಿಯಂತ್ರಣ 2026’ ಎಂಬ ಹೊಸ ನಿಯಮಾವಳಿಯನ್ನು ತರಲಾಗಿದೆ. ಈ ಹೊಸ ನೀತಿಯು ಮದ್ಯದ ತಯಾರಿಕೆ, ಆಮದು, ರಫ್ತು, ಸಾಗಣೆ ಹಾಗೂ ಮಾರಾಟದ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಹೊಸ ಪರವಾನಗಿ ಚೌಕಟ್ಟಿನ ಅಡಿಯಲ್ಲಿ ತರಲಿದ್ದು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಮದ್ಯದ ಚಿಲ್ಲರೆ ಮಾರಾಟಕ್ಕೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸುತ್ತದೆ. ಆದರೆ, ಮದ್ಯದ ಮಾರುಕಟ್ಟೆಯನ್ನು ಅನಿಯಂತ್ರಿತಗೊಳಿಸದ ಸರ್ಕಾರ, ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಮೇಲೆ ಶೇ.400, ಬಿಯರ್ ಮೇಲೆ ಶೇ. 200 ಮತ್ತು ವೈನ್ ಮೇಲೆ ಶೇ.80ರಷ್ಟು ಅಬಕಾರಿ ಸುಂಕವನ್ನು ವಿಧಿಸಲಾಗಿದೆ. ಅಲ್ಲದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಲಕ್ಷದ್ವೀಪದಲ್ಲಿ ಮದ್ಯ ನಿಷೇಧದ ಹಿನ್ನೆಲೆ
2011ರ ಜನಗಣತಿಯ ಪ್ರಕಾರ, ಲಕ್ಷದ್ವೀಪದ ಒಟ್ಟು ಜನಸಂಖ್ಯೆಯಲ್ಲಿ ಶೇ.97ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಮದ್ಯಪಾನವನ್ನು ನಿಷೇಧಿಸಿರುವುದರಿಂದ, ಸ್ಥಳೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸಿ 1979ರಲ್ಲಿ ಅಂದಿನ ಆಡಳಿತ ಮಂಡಳಿ ಸಂಪೂರ್ಣ ಮದ್ಯ ನಿಷೇಧವನ್ನು ಜಾರಿಗೆ ತಂದಿತ್ತು. ಗುಜರಾತ್ ಹಾಗೂ ಬಿಹಾರ ರಾಜ್ಯಗಳಂತೆ ಲಕ್ಷದ್ವೀಪವೂ ಭಾರತದ ಅತ್ಯಂತ ಕಟ್ಟುನಿಟ್ಟಿನ ‘ಡ್ರೈ ಸ್ಟೇಟ್’ಗಳ ಸಾಲಿಗೆ ಸೇರಿತ್ತು. ಕೇವಲ ಬಂಗಾರಂ ಮತ್ತು ಕವರಟ್ಟಿ ದ್ವೀಪಗಳ ಸರ್ಕಾರಿ ರೆಸಾರ್ಟ್ಗಳಲ್ಲಿ ಪ್ರವಾಸಿಗರಿಗೆ ಮಾತ್ರ ಸೀಮಿತ ವಿನಾಯಿತಿ ನೀಡಲಾಗಿತ್ತು. ಸ್ಥಳೀಯ ರಾಜಕೀಯ ಪಕ್ಷಗಳು ಹಾಗೂ ಸಮುದಾಯಗಳು ಮದ್ಯದ ಲಭ್ಯತೆಯನ್ನು ಸದಾ ವಿರೋಧಿಸುತ್ತಲೇ ಬಂದಿದ್ದವು.
ನಿಯಮ ಬದಲಾವಣೆಯ ಹಿಂದಿರುವ ಅಸಲಿ ಕಾರಣ
ಲಕ್ಷದ್ವೀಪವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯೇ ಈ ನಿಯಮ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಮಾಲ್ಡೀವ್ಸ್ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಬೆಳೆಸಲು ಮದ್ಯದ ಮೇಲಿನ ಕಟ್ಟುನಿಟ್ಟಿನ ನಿರ್ಬಂಧಗಳು ಅಡ್ಡಿಯಾಗಿದ್ದವು ಎಂದು ಅಧಿಕಾರಿಗಳು ವಾದಿಸುತ್ತಿದ್ದರು. ಜೂನ್ 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯದ ಚಿತ್ರಗಳನ್ನು ಹಂಚಿಕೊಂಡ ನಂತರ ದ್ವೀಪಕ್ಕೆ ಪ್ರವಾಸಿಗರ ಹರಿವು ಶೇ.47 ರಷ್ಟು ಹೆಚ್ಚಾಗಿತ್ತು.
ಪ್ರವಾಸೋದ್ಯಮದ ಮೂಲಸೌಕರ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ 2020ರಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಫುಲ್ ಖೋಡಾ ಪಟೇಲ್ ಅವರು ಮದ್ಯ ನಿಷೇಧ ಸಡಿಲಿಕೆಗೆ ಚಾಲನೆ ನೀಡಿದ್ದರು. ಸ್ಥಳೀಯ ಸಾರ್ವಜನಿಕರು ಮತ್ತು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಮುಸ್ಲಿಂ ಬಹುಸಂಖ್ಯಾತವಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಮಾಲ್ಡೀವ್ಸ್ ದೇಶದ ಉದಾಹರಣೆಗಳನ್ನು ನೀಡಿ ಈ ಹೊಸ ನಿಯಂತ್ರಣ ವ್ಯವಸ್ಥೆಯನ್ನು ತರಲಾಗಿದೆ. ಕಟ್ಟುನಿಟ್ಟಾದ ನಿಯಮಗಳೊಂದಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದರಿಂದ ದ್ವೀಪದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿದೆ.
ಇದನ್ನೂ ಓದಿ : ‘ಅತಿಯಾದ ನಿರೀಕ್ಷೆ ಬೇಡ’ : ಟೀಮ್ ಇಂಡಿಯಾ ಪದಾರ್ಪಣೆ ಹೊಸ್ತಿಲಲ್ಲಿರುವ ಸೂರ್ಯವಂಶಿಗೆ ಗಂಗೂಲಿ ಕಿವಿಮಾತು


















