ಪ್ರಯಾಗ್ರಾಜ್ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲೊಂದು ಭೀಕರ ನರಮೇಧ ನಡೆದಿದೆ. ಹಲವು ದಿನಗಳಿಂದ ಬೀಗ ಹಾಕಿದ್ದ ಮನೆಯೊಂದರಿಂದ ಬರುತ್ತಿದ್ದ ದುರ್ವಾಸನೆಯ ಜಾಡನ್ನು ಹಿಡಿದು ಹೋದ ಪೊಲೀಸರಿಗೆ ಒಂದೇ ಕುಟುಂಬದ ನಾಲ್ಕು ಜನರ ಮೃತದೇಹಗಳು ಆ ಮನೆಯೊಳಗೆ ಪತ್ತೆಯಾಗಿವೆ. ಕೆಲವು ದೇಹಗಳ ಶಿರಚ್ಛೇದ ಮಾಡಲಾಗಿದೆ ಎಂಬ ವರದಿಗಳ ನಡುವೆ, ಶವಗಳ ಬಳಿ ಸಿಕ್ಕಿರುವ ರಹಸ್ಯ ಕೈಬರಹದ ಚೀಟಿಯೊಂದು ಈ ಕೊಲೆ ರಹಸ್ಯವನ್ನು ಮತ್ತಷ್ಟು ನಿಗೂಢವಾಗಿಸಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಿವಾದ ಹಾಗೂ ಕುಟುಂಬದ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯಾಕಾಂಡ ನಡೆದಿರಬಹುದು ಎಂಬ ಶಂಕೆಯೂ ಇದೆ.

ಪ್ರಯಾಗ್ರಾಜ್ನ ಸಬ್ಜಿ ಮಂಡಿ ಜಂಕ್ಷನ್ ಬಳಿ ಇರುವ ಉದ್ಯಮಿ ವೀರೇಂದ್ರ ವೈಶ್ಯ ಅವರ ಮನೆಯಿಂದ ಇತ್ತೀಚೆಗೆ ಅತಿಯಾದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹೊರಗಿನಿಂದ ಲಾಕ್ ಮಾಡಲಾಗಿದ್ದ ಬಾಗಿಲನ್ನು ಮುರಿದು ಒಳಹೋದಾಗ ಬೇರೆ ಬೇರೆ ಕೋಣೆಗಳಲ್ಲಿ ಮೂರು ಶವಗಳು ಸಿಕ್ಕಿವೆ. ಇವುಗಳನ್ನು 70 ವರ್ಷದ ವೀರೇಂದ್ರ ವೈಶ್ಯ, ಅವರ ಪತ್ನಿ ಅನಿತಾ (65) ಮತ್ತು ಪುತ್ರಿ ಮೀನಾಕ್ಷಿ (45) ಎಂದು ಗುರುತಿಸಲಾಗಿದೆ. ಈ ವೇಳೆ ಶವಗಳ ಬಳಿ ಪತ್ತೆಯಾದ ಕಾರ್ಡ್ಬೋರ್ಡ್ ತುಂಡೊಂದರ ಮೇಲೆ, “ಬಂಟಿ ಮತ್ತು ಬಬ್ಲಿಯ ಸೊಸೆಯೇ ಇವರನ್ನು ಕೊಂದಿದ್ದಾಳೆ” ಎಂದು ಬರೆಯಲಾಗಿತ್ತು. ಈ ಸಂದೇಶವನ್ನು ಕೊಲೆಗಾರರೇ ಪೊಲೀಸರ ದಿಕ್ಕು ತಪ್ಪಿಸಲು ಬರೆದಿಟ್ಟಿದ್ದಾರೆಯೇ ಅಥವಾ ಸಂತ್ರಸ್ತರಲ್ಲೊಬ್ಬರು ಸಾಯುವ ಮುನ್ನ ಬರೆದಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಕೈಬರಹದ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ನಾಲ್ಕನೇ ಶವ ಪತ್ತೆ, ತನಿಖೆ ಚುರುಕು
ಆರಂಭದಲ್ಲಿ ವೀರೇಂದ್ರ ಅವರ 40 ವರ್ಷದ ಪುತ್ರ ಅಭಿಷೇಕ್ ವೈಶ್ಯ ನಾಪತ್ತೆಯಾಗಿದ್ದು, ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಇಡೀ ಮನೆ ಮತ್ತು ಅದಕ್ಕೆ ಹೊಂದಿಕೊಂಡಿದ್ದ ಅಂಗಡಿಯನ್ನು ಜಾಲಾಡಿದಾಗ ಅಲ್ಲಿ ಅಭಿಷೇಕ್ ಅವರ ನಾಲ್ಕನೇ ಮೃತದೇಹವೂ ಪತ್ತೆಯಾಗಿದೆ. ನಾಲ್ಕೂ ಶವಗಳ ಮೇಲೆ ತೀವ್ರವಾದ ಗಾಯದ ಗುರುತುಗಳಿದ್ದು, ಇವರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಕೊಲೆಗಾರರ ಪತ್ತೆಗಾಗಿ ಪೊಲೀಸರು ಸುಮಾರು 80ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಕೋಟ್ಯಂತರ ಮೌಲ್ಯದ ಆಸ್ತಿ, ಹಳೆಯ ಹಗೆತನದ ಶಂಕೆ
ಈ ಭೀಕರ ಹತ್ಯಾಕಾಂಡದ ಹಿಂದೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಿವಾದ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಡಿಸಿಪಿ ಮನೀಶ್ ಶಾಂಡಿಲ್ಯ ಹೇಳಿದ್ದಾರೆ. ಮೃತ ವೀರೇಂದ್ರ ವೈಶ್ಯ ಅವರಿಗೆ ಅಶ್ವಿನಿ ಎಂಬ ಮತ್ತೊಬ್ಬ ಮಗನಿದ್ದು, ಆತ ಕೌಶಂಬಿ ಜಿಲ್ಲೆಯ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಆತನ ಪತ್ನಿ ರಿತು ಕೂಡ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದಳು. ಇವರಿಬ್ಬರು ಸದ್ಯ ಜೈಲಿನಲ್ಲಿದ್ದಾರೆಯೇ ಅಥವಾ ಜಾಮೀನಿನ ಮೇಲೆ ಹೊರಬಂದಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಇವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದರೊಂದಿಗೆ ಕಳೆದ ವರ್ಷ ವೀರೇಂದ್ರ ಅವರ ತಂಗಿಯ ಕೊಲೆಯಾಗಿದ್ದು, ಆ ಘಟನೆಗೂ ಈ ನರಮೇಧಕ್ಕೂ ಏನಾದರೂ ಲಿಂಕ್ ಇದೆಯೇ ಎಂದೂ, ಅಭಿಷೇಕ್ ಅವರ ವೈಯಕ್ತಿಕ ಮತ್ತು ವ್ಯಾಪಾರ ವೈಷಮ್ಯಗಳ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ದೆಹಲಿಯ ಹೋಟೆಲ್ನಲ್ಲಿ ಭೀಕರ ಅಗ್ನಿ ದುರಂತ : 20 ಮಂದಿ ಸಜೀವ ದಹನ!



















