ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2000ನೇ ಇಸವಿಯ ಆಸುಪಾಸು ಅತ್ಯಂತ ಕರಾಳ ಹಾಗೂ ವಿವಾದಾತ್ಮಕ ಘಟ್ಟವಾಗಿತ್ತು. ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಗಳು ಕ್ರೀಡಾ ಜಗತ್ತನ್ನೇ ಬೆಚ್ಚಿಬೀಳಿಸಿದ್ದವು. ಇದೀಗ ಎರಡು ದಶಕಗಳ ಬಳಿಕ, ಟೀಮ್ ಇಂಡಿಯಾದ ಯಶಸ್ವಿ ಮಾಜಿ ನಾಯಕ ಸೌರವ್ ಗಂಗೂಲಿ ಆ ಕರಾಳ ದಿನಗಳ ಬಗ್ಗೆ ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರುವ ಅವರು, ಫಿಕ್ಸಿಂಗ್ ಹಗರಣದ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಹೀಗಾಗಿ ತಂಡದ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರ ಬಳಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದರೇ ಎಂದು ನೇರವಾಗಿ ಪ್ರಶ್ನಿಸಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಗಂಗೂಲಿಯವರ ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಫಿಕ್ಸಿಂಗ್ ಬಗ್ಗೆ ನನಗೇನೂ ಗೊತ್ತಿರಲಿಲ್ಲ: ದಾದಾ
ಮ್ಯಾಚ್ ಫಿಕ್ಸಿಂಗ್ ಹಗರಣವು ಭಾರತೀಯ ಕ್ರಿಕೆಟ್ನ ವಿಶ್ವಾಸಾರ್ಹತೆಗೆ ತೀವ್ರ ಪೆಟ್ಟು ನೀಡಿತ್ತು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ, ಭಾರತದ ಮೊಹಮ್ಮದ್ ಅಜರುದ್ದೀನ್ ಹಾಗೂ ಅಜಯ್ ಜಡೇಜಾ ಅವರಂತಹ ದಿಗ್ಗಜರ ಹೆಸರುಗಳು ಈ ಹಗರಣದಲ್ಲಿ ತಳುಕುಹಾಕಿಕೊಂಡಿದ್ದವು. ಇದೇ ಸಂದರ್ಭದಲ್ಲಿ 27ನೇ ವಯಸ್ಸಿಗೆ ನಾಯಕತ್ವದ ಹೊಣೆ ಹೊತ್ತಿದ್ದ ಸೌರವ್ ಗಂಗೂಲಿ, ಆತಂಕದ ದಿನಗಳನ್ನು ಎದುರಿಸಿದ್ದರು. “ನಾನು ನಾಯಕನಾಗುವ ಮುನ್ನ ತಂಡದಲ್ಲಿದ್ದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಸಮಸ್ಯೆಗಳ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ. ಯಾರೂ ನನ್ನನ್ನು ಫಿಕ್ಸಿಂಗ್ಗಾಗಿ ಸಂಪರ್ಕಿಸಿರಲಿಲ್ಲ. ಹೀಗಾಗಿ ನಾನು ಸಚಿನ್ ಮತ್ತು ರಾಹುಲ್ ಅವರನ್ನು ‘ನಿಜಕ್ಕೂ ಹಾಗೆಲ್ಲ ನಡೆಯುತ್ತದೆಯೇ? ಯಾರಾದರೂ ನಿಮ್ಮನ್ನು ಕೇಳಿದ್ದರೇ?’ ಎಂದು ಪ್ರಶ್ನಿಸುತ್ತಿದ್ದೆ. ಸಚಿನ್ ಮತ್ತು ಅನಿಲ್ ಕುಂಬ್ಳೆ ಇಬ್ಬರೂ ಕೂಡ ‘ಇಲ್ಲ, ಯಾರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಉತ್ತರಿಸಿದ್ದರು. ಆ ಸಮಯದಲ್ಲಿ ನನಗೆ ನಾಯಕತ್ವದ ಜವಾಬ್ದಾರಿಯಷ್ಟೇ ಮುಖ್ಯವಾಗಿತ್ತು. ಬೇರೆ ವಿಷಯಗಳ ಕಡೆ ನಾನು ಗಮನ ಹರಿಸಿರಲಿಲ್ಲ” ಎಂದು ಗಂಗೂಲಿ ವಿವರಿಸಿದ್ದಾರೆ.
ಹಿರಿಯ ಆಟಗಾರರನ್ನು ಮುನ್ನಡೆಸುವ ಸವಾಲು
ಭಾರತೀಯ ಕ್ರಿಕೆಟ್ ಅತ್ಯಂತ ಕಠಿಣ ಸಂಕ್ರಮಣ ಕಾಲಘಟ್ಟವನ್ನು ಎದುರಿಸುತ್ತಿದ್ದಾಗ ಸೌರವ್ ಗಂಗೂಲಿ ತಂಡದ ಚುಕ್ಕಾಣಿ ಹಿಡಿದಿದ್ದರು. ಅಜರುದ್ದೀನ್ಗೆ ಆಜೀವ ನಿಷೇಧ ಹಾಗೂ ಜಡೇಜಾಗೆ ಐದು ವರ್ಷಗಳ ನಿಷೇಧ ಹೇರಲಾಗಿತ್ತು. ಕೇವಲ ತಂಡವನ್ನು ಕಟ್ಟುವುದಷ್ಟೇ ಅಲ್ಲದೆ, ಕ್ರಿಕೆಟ್ ಮೇಲಿನ ಅಭಿಮಾನಿಗಳ ವಿಶ್ವಾಸವನ್ನು ಮರಳಿ ಗಳಿಸುವ ದೊಡ್ಡ ಜವಾಬ್ದಾರಿ ಗಂಗೂಲಿ ಮೇಲಿತ್ತು. ತಮಗಿಂತ ಹಿರಿಯರಾದ ಹಾಗೂ ತಾವು ಯಾರ ನಾಯಕತ್ವದಲ್ಲಿ ಆಡಿದ್ದೆನೋ, ಅವರನ್ನೇ ಮುನ್ನಡೆಸಬೇಕಾದ ಸವಾಲಿನ ಬಗ್ಗೆಯೂ ಗಂಗೂಲಿ ಮಾತನಾಡಿದ್ದಾರೆ. “ಕೊಚ್ಚಿಯಲ್ಲಿ ನಡೆದ ನನ್ನ ಮೊದಲ ಪಂದ್ಯದ ಮುನ್ನಾದಿನದ ಸಭೆ ನನಗೆ ಇಂದಿಗೂ ನೆನಪಿದೆ. ಅಜರ್, ಸಚಿನ್ ಅವರಂತಹ ಹಿರಿಯರಿಗೆ ನಾನು ಹೇಗೆ ಸೂಚನೆಗಳನ್ನು ನೀಡುವುದು ಎಂದು ನನ್ನ ಪತ್ನಿ ಡೋನಾಗೆ ಹೇಳಿದ್ದೆ. ಹೆಚ್ಚು ಹೊತ್ತು ಮಾತನಾಡಲು ಸಾಧ್ಯವಾಗದ ಕಾರಣ ಕೇವಲ 15 ನಿಮಿಷಗಳಲ್ಲಿ ಸಭೆಯನ್ನು ಮುಗಿಸಿದ್ದೆ. ಮರುದಿನ ನಾವು ಪಂದ್ಯ ಗೆದ್ದೆವು, ಆ ಬಳಿಕ ಜಮ್ಶೆಡ್ಪುರದಲ್ಲಿ ನಾನು ಶತಕ ಸಿಡಿಸಿದೆ. ನಿಧಾನವಾಗಿ ಎಲ್ಲವೂ ಸರಿದಾರಿಗೆ ಬಂದಿತು” ಎಂದು ತಮ್ಮ ನಾಯಕತ್ವದ ಆರಂಭಿಕ ದಿನಗಳನ್ನು ದಾದಾ ಮೆಲುಕು ಹಾಕಿದ್ದಾರೆ.
ಭಾರತೀಯ ಕ್ರಿಕೆಟ್ನ ಹೊಸ ಶಕೆ ಆರಂಭ
ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಕಂಗೆಟ್ಟಿದ್ದ ಭಾರತೀಯ ಕ್ರಿಕೆಟ್ಗೆ ಸೌರವ್ ಗಂಗೂಲಿ ಹೊಸ ಜೀವ ತುಂಬಿದರು ಎಂದರೆ ತಪ್ಪಾಗಲಾರದು. ಯುವ ಆಟಗಾರರನ್ನು ಬೆಂಬಲಿಸಿ, ಬಲಿಷ್ಠ ತಂಡವನ್ನು ಕಟ್ಟಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2002ರ ನ್ಯಾಟ್ವೆಸ್ಟ್ ಟ್ರೋಫಿ ಜಯಿಸಿತು. 2003-04ರಲ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಡ್ರಾ ಮಾಡಿಕೊಂಡಿದ್ದಲ್ಲದೆ, ಪಾಕಿಸ್ತಾನದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತು. ಕೇವಲ ತವರಿನಲ್ಲಿ ಮಾತ್ರವಲ್ಲದೆ, ವಿದೇಶಿ ನೆಲದಲ್ಲೂ ಭಾರತದ ಪತಾಕೆ ಹಾರಿಸುವ ಮೂಲಕ ಗಂಗೂಲಿ ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.



















