ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಕಳಪೆ ಫಾರ್ಮ್ ಮುಂದುವರಿದಿದ್ದು, ಅವರ ಬೆಂಬಲಕ್ಕೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ನಿಂತಿದ್ದಾರೆ.
ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬುಮ್ರಾ ತಮ್ಮ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ ಯಾವುದೇ ವಿಕೆಟ್ ಪಡೆಯದೆ ಬರೋಬ್ಬರಿ 54 ರನ್ ಚಚ್ಚಿಸಿಕೊಂಡಿದ್ದರು. 245 ರನ್ಗಳ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಬುಮ್ರಾ, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ಗೆ ತಲೆಬಾಗಬೇಕಾಯಿತು. ತಮ್ಮ ಯಾರ್ಕರ್ ಸ್ಪೆಷಲಿಸ್ಟ್ ಪಟ್ಟಕ್ಕೆ ವ್ಯತಿರಿಕ್ತವಾಗಿ, ಹೆನ್ರಿಕ್ ಕ್ಲಾಸೆನ್ ಹಾಗೂ ಯುವ ಆಟಗಾರ ಸಲಿಲ್ ಅರೋರಾ ಅವರಿಂದಲೂ ಭಾರೀ ಹೊಡೆತಗಳನ್ನು ತಿಂದ ಬುಮ್ರಾ ಅವರ ಈ ಪ್ರದರ್ಶನವು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೆಟ್ಟ ದಿನಗಳು ಎದುರಾಗಿದೆ
ಈ ಸಂದರ್ಭದಲ್ಲಿ ಬುಮ್ರಾ ಅವರ ಬೆಂಬಲಕ್ಕೆ ನಿಂತಿರುವ ಕೀರನ್ ಪೊಲಾರ್ಡ್, ಪ್ರತಿಯೊಬ್ಬ ಆಟಗಾರನಿಗೂ ಕೆಟ್ಟ ದಿನಗಳು ಎದುರಾಗುವುದು ಸಹಜ ಎಂದು ಹೇಳಿದ್ದಾರೆ. ಸಾಮಾನ್ಯ ಉದ್ಯೋಗಿಗಳು ಕೆಲಸದಲ್ಲಿ ತಪ್ಪು ಮಾಡಿದಾಗ ಅಥವಾ ತಪ್ಪಾದ ಇಮೇಲ್ ಕಳುಹಿಸಿದಾಗ ಅದನ್ನು ತಿದ್ದಿಕೊಳ್ಳಲು ಅವಕಾಶವಿರುತ್ತದೆ. ಆದರೆ ಕ್ರಿಕೆಟಿಗರು ನಿರಂತರವಾಗಿ ಸಾರ್ವಜನಿಕರ ಹಾಗೂ ಮಾಧ್ಯಮಗಳ ಕಣ್ಗಾವಲಿನಲ್ಲಿರುವುದರಿಂದ ಅವರಿಗೆ ಅಂತಹ ಅವಕಾಶಗಳಿರುವುದಿಲ್ಲ ಎಂದು ಪೊಲಾರ್ಡ್ ಮಾರ್ಮಿಕವಾಗಿ ನುಡಿದಿದ್ದಾರೆ.
ಒಬ್ಬ ಮನುಷ್ಯನಾಗಿ ಹಾಗೂ ಆಟಗಾರನಾಗಿ ಬುಮ್ರಾ ಅವರಿಗೂ ತಪ್ಪು ಮಾಡುವ ಹಕ್ಕಿದೆ, ಒಂದು ಕೆಟ್ಟ ದಿನ ಅಥವಾ ಒಂದು ಕಳಪೆ ಸೀಸನ್ ಹೊಂದುವುದು ಸಹಜ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ಹಾಗೂ ಭಾರತ ತಂಡಕ್ಕಾಗಿ ನೀಡಿದ ಅತ್ಯಮೂಲ್ಯ ಕೊಡುಗೆಗಳನ್ನು ಮತ್ತು ಮ್ಯಾಚ್-ವಿನ್ನಿಂಗ್ ಪ್ರದರ್ಶನಗಳನ್ನು ನಾವು ಈ ಹಂತದಲ್ಲಿ ಮರೆಯಬಾರದು ಎಂದು ಪೊಲಾರ್ಡ್ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ.
ಆಘಾತಕಾರಿ ಅಂಶ
ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಬುಮ್ರಾ ಅವರ ಅಂಕಿ-ಅಂಶಗಳು ನಿಜಕ್ಕೂ ಆಘಾತಕಾರಿಯಾಗಿವೆ. ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಅವರು ಕೇವಲ ಎರಡು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. 132ರ ಕಳಪೆ ಸರಾಸರಿ ಹಾಗೂ 8.80ರ ಎಕಾನಮಿ ರೇಟ್ ಹೊಂದಿರುವ ಅವರು, 2016ರಿಂದ ಪ್ರತಿ ಆವೃತ್ತಿಯಲ್ಲೂ ಕನಿಷ್ಠ 15 ವಿಕೆಟ್ ಪಡೆಯುತ್ತಿದ್ದ ತಮ್ಮ ಹಳೆಯ ಲಯವನ್ನು ಸಂಪೂರ್ಣವಾಗಿ ಕಳೆದುಕೊಂಡಂತೆ ಕಾಣುತ್ತಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಮ್ರಾ, ಇದೀಗ ಐಪಿಎಲ್ನಲ್ಲಿ ಮಂಕಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸತತ ಕ್ರಿಕೆಟ್ನಿಂದಾಗಿ ಎದುರಾಗಿರುವ ದೈಹಿಕ ಆಯಾಸ ಹಾಗೂ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಒಂಟಿಯಾಗಿ ಮುನ್ನಡೆಸುತ್ತಿರುವ ಮಾನಸಿಕ ಒತ್ತಡವೂ ಈ ಕಳಪೆ ಪ್ರದರ್ಶನಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದ್ದು, ಮೇ 2ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್ನಲ್ಲಿ ನಡೆಯಲಿರುವ ಮುಂದಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಬುಮ್ರಾ ಬಲವಾದ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ : IPL 2027ರ ಹರಾಜಿಗೆ ವೈಭವ್ ಸೂರ್ಯವಂಶಿ : ಇಂಗ್ಲೆಂಡ್ ದಿಗ್ಗಜನಿಂದ ಅಚ್ಚರಿಯ ಭವಿಷ್ಯ!



















