ಬೀದರ್ : ಬಿರು ಬಿಸಿಲಿನ ತಾಪ ತಾಳಲಾರದೆ 20 ವರ್ಷದ ಯುವಕನೊಬ್ಬ ಕುಸಿದು ಸುತ್ತಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಉತ್ತರ ಪ್ರದೇಶ ಮೂಲದ ಮಿರ್ಜಾಪುರ ಪಲ್ಲಾದ ನಿವಾಸಿ ಮಹ್ಮದ್ ಸಮೀರ್ (20) ಎಂದು ಗುರುತಿಸಲಾಗಿದೆ. ಈತ ತನ್ನ ತಂದೆ ಲಯಿಕ್ ಅಹ್ಮದ್ ಅವರೊಂದಿಗೆ ಕೆಲಸದ ನಿಮಿತ್ತ ಏಪ್ರಿಲ್ 12ರಂದು ಕಮಲನಗರ ಪಟ್ಟಣಕ್ಕೆ ಬಂದಿದ್ದನು. ಆದರೆ ಬಂದ ಎರಡೇ ದಿನಕ್ಕೆ ವಿಧಿಯಾಟ ಬೇರೆಯೇ ಇತ್ತು.
ಏಪ್ರಿಲ್ 14 ರಂದು ಮಹ್ಮದ್ ಸಮೀರ್ ತರಕಾರಿ ತರಲು ಎಂದು ಮಾರುಕಟ್ಟೆಗೆ ತೆರಳಿದ್ದನು. ಆ ಸಮಯದಲ್ಲಿ ಬಿಸಿಲು ವಿಪರೀತವಾಗಿದ್ದರಿಂದ ಆತನಿಗೆ ತಲೆ ಸುತ್ತು (ಚಕ್ಕರ್) ಬಂದಿದೆ. ದಾರಿಯಲ್ಲಿ ಸಿಕ್ಕ ಮೆಕಾನಿಕ್ ಅಂಗಡಿಯೊಂದರ ಬಳಿ ನೀರು ಕುಡಿದು, ಕೆಲಹೊತ್ತು ವಿಶ್ರಾಂತಿ ಪಡೆದಿದ್ದನು.
ಸ್ವಲ್ಪ ಸುಧಾರಿಸಿಕೊಂಡ ನಂತರ ರಾಷ್ಟ್ರೀಯ ಹೆದ್ದಾರಿ-50 ರ ಮೂಲಕ ಡಿಗ್ಗಿ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬಿಸಿಲಿನ ತಾಪ ತಡೆದುಕೊಳ್ಳಲಾಗದೆ ರಸ್ತೆಯಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. ಆ ದಿನ ಬೀದರ್ನನಲ್ಲಿ ಗೂಗಲ್ ಮಾಹಿತಿ ಪ್ರಕಾರ, ಟೆಂಪ್ರೆಚರ್ 45 ಡಿಗ್ರಿ ಸೆಲ್ಸಿಯಸ್ ಇತ್ತು.
ಸದ್ಯ ಬಿಸಿಲಿನಿಂದಲೇ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ನವಮಂಗಳೂರು ಪೋರ್ಟ್ ಟ್ರಸ್ಟ್ನಲ್ಲಿ ಎಂಜಿನಿಯರ್ಗಳ ನೇಮಕಾತಿ – 2 ಲಕ್ಷ ರೂ.ವರೆಗೆ ಸಂಬಳ!



















