ಬೀದರ್: ಬೀದರ್ ಜಿಲ್ಲೆಯ ನಾಗರಿಕ ವಿಮಾನಯಾನ ಸೇವೆ ಮತ್ತೆ ಸ್ಥಗಿತಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆದರೆ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬೀದರ್ ಜನತೆಗೆ ಗುಡ್ ನ್ಯೂಸ್ ಕೊಟ್ಟಿರುವ ಸಚಿವರು, ವಿಮಾನಯಾನ ಸೇವೆ ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಸಬ್ಸಿಡಿ ನಿಂತ ಬಳಿಕ, ರಾಜ್ಯ ಸರ್ಕಾರವೇ ಕೆಕೆಆರ್ಡಿಬಿ (KKRDB) ಮೂಲಕ 13 ಕೋಟಿ ರೂ. ಅನುದಾನ ನೀಡಿ 2025ರ ಏಪ್ರಿಲ್ 16 ರಂದು ಸ್ಟಾರ್ ಏರ್ ಸಂಸ್ಥೆಯ ಸೇವೆಯನ್ನು ಮರು ಚಾಲನೆ ಮಾಡಿತ್ತು. ಸರ್ಕಾರದೊಂದಿಗಿನ ಒಂದು ವರ್ಷದ ಒಪ್ಪಂದವು ಇಂದು ಅಂದರೆ 2026ರ ಏಪ್ರಿಲ್ 14ಕ್ಕೆ ಅಂತ್ಯಗೊಂಡಿದೆ. ವಿಮಾನಯಾನ ಸಂಸ್ಥೆಯು ಹೆಚ್ಚಿನ ಅನುದಾನ ಕೇಳಿರುವುದರಿಂದ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿದೆ ಎಂದಿದ್ದಾರೆ.
ಬೀದರ್ ವಿಮಾನಯಾನ ಸೇವೆಯನ್ನು ನಾವು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಚಿವ ಸಂಪುಟ (Cabinet) ಸಭೆಯಲ್ಲಿ ಹೆಚ್ಚುವರಿ ಅನುದಾನದ ಪ್ರಸ್ತಾವನೆ ಮಂಡಿಸಿ, ಶೀಘ್ರದಲ್ಲೇ ವಿಮಾನ ಹಾರಾಟಕ್ಕೆ ಮರು ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜಕೀಯ ಕೆಸರೆರಚಾಟ- ಭಗವಂತ್ ಖೂಬಾಗೆ ತಿರುಗೇಟು
ಕೆಕೆಆರ್ಡಿಬಿ ಹಣ ಬಳಕೆಯ ಬಗ್ಗೆ ಟೀಕಿಸಿದ್ದ ಮಾಜಿ ಸಚಿವ ಭಗವಂತ್ ಖೂಬಾ ಅವರಿಗೆ ಈ ವೇಳೆ ಸಚಿವ ಖಂಡ್ರೆ ತಿರುಗೇಟು ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಕೆಆರ್ಡಿಬಿ ಹಣ ಬಳಸಲಾಗಿದೆ. ಉಡಾನ್ ಯೋಜನೆಯ ಸಬ್ಸಿಡಿಯೂ ಜನರ ತೆರಿಗೆ ಹಣವೇ ಆಗಿದೆ, ಹಾಗಾಗಿ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ. ಎಂದು ಸಚಿವರು ಗುಡುಗಿದ್ದಾರೆ.
ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ : ಕಾಂಗ್ರೆಸ್ನಿಂದ MLC ಅಬ್ದುಲ್ ಜಬ್ಬಾರ್ ಅಮಾನತು!



















