ಬೆಂಗಳೂರು: ನಗರದ ಡಿಜೆ ಹಳ್ಳಿಯಲ್ಲಿ ನಡೆದ ದಾರುಣ ಬೆಂಕಿ ಅವಘಡದಲ್ಲಿ 6 ಹಸುಗಳು ಸಜೀವ ದಹನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇರ್ಫಾನ್ ಪಾಷಾ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕೆಜಿ ಹಳ್ಳಿಯ ನಿವಾಸಿಯಾಗಿದ್ದು, ಘಟನೆ ನಡೆದ ರಾತ್ರಿ ಒಬ್ಬಂಟಿಯಾಗಿ ಸಂಚರಿಸುತ್ತಿದ್ದನು ಎಂದು ತಿಳಿದುಬಂದಿದೆ. ಇದೇ ವೇಳೆ ನಾಯಿಗಳು ಆತನನ್ನು ಬೆನ್ನಟ್ಟಿದವು ಎನ್ನಲಾಗಿದೆ. ನಾಯಿಗಳ ಭಯದಿಂದ ಕಸದ ಗುಡ್ಡಕ್ಕೆ ಬೆಂಕಿ ಹಚ್ಚಿದ್ದೇನೆ, ಯಾವುದೇ ದುರುದ್ದೇಶ ಇರಲಿಲ್ಲ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ ಸಿಸಿಟಿವಿ ದೃಶ್ಯಗಳಲ್ಲಿ ಆತ ಕುಳಿತು ಬೆಂಕಿ ಹಚ್ಚಿ ನಿಧಾನವಾಗಿ ಅಲ್ಲಿಂದ ತೆರಳುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಪಿ ನೀಡಿರುವ ಹೇಳಿಕೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವೇಳೆ ಆರೋಪಿ ಮುಖ ಮುಚ್ಚಿಕೊಂಡು ತೆರಳಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಸ್ತುತ ಪ್ರಕರಣದ ಕುರಿತು ಡಿಜೆ ಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಸಾಕು ನಾಯಿಯ ಮೇಲೆ ಹಲ್ಲೆಗೈದ ವ್ಯಕ್ತಿ..! ಪ್ರಾಣಿಪ್ರಿಯರು ಆಕ್ರೋಶ


















