ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ. ಎಂದು ಗುರುತಿಸಸಲಾಗಿದೆ.
ಪ್ರಕರಣದ ಹಿನ್ನಲೆ :
ಮಾರ್ಚ್ 6ರಂದು ಹೇರಾಡಿ ಗ್ರಾಮದ ಐಟಿಐ ಕಾಲೇಜಿನ ಬಳಿಯ ಮಂಜುನಾಥ್ ರಾವ್(77) ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ವೃದ್ಧ ದಂಪತಿ ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮನೆಯ ಎದುರು ಬಾಗಿಲು ಒಡೆದು ಬೆಡ್ ರೂಮ್ನಲ್ಲಿರುವ ಕಪಾಟಿನ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.
47 ಗ್ರಾಂನ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, 32 ಗ್ರಾಂನ ಎರಡು ಚಿನ್ನದ ಬಳೆ, 6 ಗ್ರಾಂನ ಒಂದು ಜತೆ ಚಿನ್ನದ ಬೆಂಡೋಲೆ, 4 ಗ್ರಾಂನ ಚಿನ್ನದ ಉಂಗುರ, 3 ಗ್ರಾಂನ ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ ಮತ್ತು ಕವಳಿಗೆ ಮತ್ತು ರೂ. 49,000 ನಗದು ಹಣವನ್ನು ಕಳವು ಮಾಡಲಾಗಿತ್ತು. ಒಟ್ಟು 14,67,000 ರೂ ಮೌಲ್ಯದ ಸೊತ್ತು ಕಳವಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕಳ್ಳತನದ ಆರೋಪಿ ಬಾರಕೂರು ನಿವಾಸಿ ಪ್ರವೀಣ್ ಕುಮಾರ್ನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಗ್ಯಾಸ್ ಅಭಾವ – ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ!



















