ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ. ಸಿಎಂ ಸಿದ್ದರಾಮಯ್ಯ ಜನಹಿತ ಮರೆತು ತುಘಲಕ್ ದರ್ಬಾರ್ ನಡೆಸ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆದಸಿದ್ದಾರೆ.
ಉಪಾಚುನಾವಣೆಯ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ಈಗಾಗಲೇ ಅಜೀರ್ಣವಾಗುವಷ್ಟು ಬಹುಮತವನ್ನು ಪಡೆದಿದೆ. ಮತ್ತೊಮ್ಮೆ ಚುನಾವಣೆ ಗೆದ್ದರೆ ಅಧಿಕಾರ ಮದದಿಂದ ಇನ್ನೂ ಹೆಚ್ಚು ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಅದಕ್ಕಾಗಿ ಎರಡೂ ಕಡೆಯೂ ಮತದಾರರು ಈ ಬಾರಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು. ಹಾಗಾಗಿ, ಬಿಜೆಪಿಯ ಇಬ್ಬರು ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿಕೊಡಲಿ ಎಂದು ಹೇಳಿದ್ದಾರೆ.
ನಾನು ಇಂದು ಮತ್ತು ನಾಳೆ ದಾವಣಗೆರೆಯಲ್ಲಿ ಪ್ರಚಾರ ಮಾಡ್ತೇನೆ. ಏಪ್ರಿಲ್ 5, 6 ರಂದು ಬಾಗಲಕೋಟೆಯಲ್ಲಿ ಚರಂತಿಮಠ ಪರವಾಗಿ ಪ್ರಚಾರಕ್ಕೆ ಹೋಗ್ತೇನೆ ನನಗೆ ನೂರಕ್ಕೆ ನೂರು ವಿಶ್ವಾಸ ಇದೆ, ಎರಡೂ ಕಡೆಯೂ ದೊಡ್ಡ ಅಂತರದಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಗೆಲ್ಲೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಪ್ರಚಾರ ನಡೆಸಲು ಬಿಎಸ್ವೈ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ. ಯಾರೇ ಬಂದರೂ ಪ್ರಚಾರ ನಡೆಸಲು ಅವಕಾಶ ಇದೆ. ಅವರು ಪ್ರಚಾರಕ್ಕೆ ಬರಲಿ, ಸ್ವಾಗತ ಮಾಡ್ತೇವೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಇಡೀ ಸರ್ಕಾರವೇ ಉಪಚುನಾವಣೆ ಪ್ರಚಾರದಲ್ಲಿದೆ ಸ್ವತಃ ಸಿಎಂ ಅವರೇ ನಾಲ್ಕೈದು ದಿನ ಅಲ್ಲಿ ಹೋಗಿ ಕೂತಿದ್ದಾರೆ. ಅದರರ್ಥ ಚುನಾವಣಾ ಸೋಲಿನ ಭಯ ಅವರಿಗೆ ಕಾಡ್ತಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಜನ ಕಾಂಗ್ರೆಸ್ನವ್ರಿಗೆ ತಕ್ಕ ಪಾಠ ಕಲಿಸಲಿ ಎಂದು ಹೇಳಿದ್ದಾರೆ.
ಇನ್ನು, ಇದೇ ವೇಳೆ ರಾಜ್ಯದಲ್ಲಿ ಹಿಂದಿ ಭಾಷೆ ಕಡ್ಡಾಯ ಇಲ್ಲ ಎಂಬ ಸರ್ಕಾರದ ತೀರ್ಮಾನಕ್ಕೆ ಯಡಿಯೂರಪ್ಪ ಖಂಡಿಸಿದ್ದಾರೆ. ನಾನು ಆ ಬಗ್ಗೆ ಸದ್ಯಕ್ಕೆ ಏನೂ ಮಾತಾಡಲು ಇಷ್ಟ ಪಡೋದಿಲ್ಲ. ದೇಶದ ಉದ್ದಗಲಕ್ಕೆ ಹಿಂದಿ ಭಾಷೆ ಇಲ್ಲದಿದ್ದರೆ ಬೇರೆ ಭಾಷೆಯಲ್ಲಿ ಮಾತಾಡಲು ಬರೋದಿಲ್ಲ. ಹಿಂದಿ ಮಾತಾಡೋದನ್ನು ಹಿಂದಿ ಕಲಿಯೋದನ್ನು ತಪ್ಪು ಅಂತ ಹೇಳೋದನ್ನು ನಾನು ಒಪ್ಪೋದಿಲ್ಲ. ಆದ್ರೆ ಕೆಲವರು ಹಿಂದಿ ಬಗ್ಗೆ ತಮ್ಮದೇ ಆದ ಮಾತುಗಳನ್ನಾಡ್ತಾರೆ. ಇದು ಕನ್ನಡಕ್ಕೆ ಮಾಡುವ ದ್ರೋಹ ಅಲ್ಲ. ನಾನು ಅತ್ಯಂತ ವಿನಯದಿಂದ ಕನ್ನಡಿಗರಲ್ಲಿ ವಿನಂತಿ ಮಾಡ್ತೇನೆ ಹಿಂದಿ ಭಾಷೆ ಕಲಿಯೋದ್ರಿಂದ ಕನ್ನಡ ಭಾಷೆಗೆ ಆಘಾತ ಆಗೋದಿಲ್ಲ.ದಯಮಾಡಿ ಇದರ ಬಗ್ಗೆ ಗೊಂದಲ ಉಂಟು ಮಾಡುವ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ್ದಾರೆ.


















