ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಗೆಳೆಯರಿಂದಲೋ, ಸಂಬಂಧಿಕರಿಂದಲೋ ಕೈಸಾಲ ಪಡೆದು, ಅದನ್ನು ವಾಪಸ್ ಕೊಡುವುದು ತುಂಬ ಜನರ ರೂಢಿ. ಇದು ಅನಿವಾರ್ಯ ಸಂದರ್ಭಗಳಲ್ಲಿ ನೆರವಿಗೂ ಬರುತ್ತದೆ. ಆದರೆ, ಏಪ್ರಿಲ್ 1ರಿಂದ ನಿಮ್ಮ ಗೆಳೆಯರೋ, ಸಂಬಂಧಿಕರಿಂದಲೋ ಕೈಸಾಲ ಪಡೆಯುವ ಮುನ್ನ ಹೊಸ ನಿಯಮ ತಿಳಿಯುವುದು ಅತ್ಯವಶ್ಯಕವಾಗಿದೆ. ಹೌದು, 2026ರ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಹೊಸ ಕಾಯ್ದೆಯ ಅನ್ವಯ, ಯಾವುದೇ ಒಬ್ಬ ವ್ಯಕ್ತಿಯು ಗೆಳೆಯರು ಅಥವಾ ಸಂಬಂಧಿಕರಿಂದ 20 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಕೈಸಾವನ್ನಾಗಿ ಪಡೆಯುವಂತಿಲ್ಲ ಎಂದು ತಿಳಿಸಲಾಗಿದೆ.
ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯಿಂದ ಒಂದು ಬಾರಿ ಅಥವಾ ಒಟ್ಟಾರೆಯಾಗಿ 20 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಕೈಸಾಲವಾಗಿ ಪಡೆಯುವುದು ನಿಷಿದ್ಧ ಎಂದು ತಿಳಿಸಲಾಗಿದೆ. ನೀವು 20 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕೈಸಾಲ ಪಡೆಯಬೇಕು ಎಂದರೆ ಯುಪಿಐ, ನೆಫ್ಟ್ ಅಥವಾ ಚೆಕ್ ಮೂಲಕ ಪಡೆಯಬಹುದಾಗಿದೆ.
ಹಾಗೊಂದು ವೇಳೆ, ನೀವು 20 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಕೈಸಾಲವಾಗಿ ಪಡೆದರೆ ಅದರಷ್ಟೇ ಮೊತ್ತವನ್ನು ಆದಾಯ ತೆರಿಗೆ ಇಲಾಖೆಯು ದಂಡ ವಿಧಿಸಬಹುದು. ಗೆಳೆಯರಿಂದ ಪಡೆಯುವ ಸಾಲವು ನಿಮ್ಮ ‘ಆದಾಯ’ವಲ್ಲ, ಅದು ಒಂದು ‘ಹೊಣೆಗಾರಿಕೆ’ (Liability) ಎಂದು ಹೊಸ ಕಾಯ್ದೆಯಲ್ಲಿ ಸೂಚಿಸಲಾಗಿದೆ. ಹಾಗಂತ, ನೀವು ಈ ಮೊತ್ತವನ್ನು ಸಾಲವಾಗಿ ಪಡೆದಿದ್ದರೆ ಅದರ ಮೇಲೆ ನೀವು ಆದಾಯ ತೆರಿಗೆ ಪಾವತಿಸಬೇಕಿಲ್ಲ.
ಒಂದು ವೇಳೆ ಇದು ಮರುಪಾವತಿ ಮಾಡದ ‘ಉಡುಗೊರೆ’ ಆಗಿದ್ದರೆ, ವರ್ಷಕ್ಕೆ ಒಟ್ಟು 50 ಸಾವಿರ ರೂ. ವರೆಗಿನ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ಕೈಸಾಲವನ್ನು ವಾಪಸ್ ಕೊಡುವಾಗಲೂ ನಿಯಮಗಳು ಅನ್ವಯವಾಗುತ್ತವೆ. ಸಾಲದ ಮೊತ್ತ 20 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅದನ್ನು ನೀವು ನಗದು ರೂಪದಲ್ಲಿ ಹಿಂದಿರುಗಿಸುವಂತಿಲ್ಲ. ಬ್ಯಾಂಕಿಂಗ್ ಚಾನೆಲ್ ಮೂಲಕವೇ ಮರುಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ.



















