ಬೆಂಗಳೂರು : ಐಪಿಎಲ್ 2026ರ ಹಂಗಾಮು ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಟೂರ್ನಿಯಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ಅಥವಾ ವಿಳಂಬವಾಗಿ ತಂಡವನ್ನು ಸೇರಿಕೊಳ್ಳುವ ವಿದೇಶಿ ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೆಂಡಾಮಂಡಲವಾಗಿದ್ದಾರೆ. ಆಟಗಾರರ ಇಂತಹ ನಡೆಯನ್ನು ತೀವ್ರವಾಗಿ ಖಂಡಿಸಿರುವ ಅವರು, “ಕೆಲವು ವಿದೇಶಿ ಆಟಗಾರರು ಭಾರತದ ಆತಿಥ್ಯದ ಸಂಪ್ರದಾಯವನ್ನು ತಮ್ಮ ಹಕ್ಕು ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಫ್ರಾಂಚೈಸಿ ಮಾಲೀಕರು ಇಂತಹ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ತಂಡದಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಮ್ಮ ಅಂಕಣದಲ್ಲಿ ಈ ಬಗ್ಗೆ ಬರೆದಿರುವ ಗವಾಸ್ಕರ್, “ಐಪಿಎಲ್ ಫ್ರಾಂಚೈಸಿ ಮಾಲೀಕರು ಆಟಗಾರರಿಗೆ ಸಕಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಕೋಟ್ಯಧಿಪತಿ ಆಟಗಾರರ ಕುಟುಂಬದವರಿಗೂ ಯಾವುದೇ ಖರ್ಚಿಲ್ಲದೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಇದು ನಮ್ಮ ದೇಶದ ಅತಿಥಿ ಸತ್ಕಾರದ ಗುಣ. ಆದರೆ, ಕೆಲವು ಆಟಗಾರರು ಇದನ್ನು ತಮ್ಮ ಹಕ್ಕು ಎಂದು ಭಾವಿಸಿ, ಫ್ರಾಂಚೈಸಿಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಹರಾಜಿನ ಸಮಯದಲ್ಲಿ ತಂಡವನ್ನು ಆಯ್ಕೆ ಮಾಡುವಾಗ ಫ್ರಾಂಚೈಸಿಗಳು ದೊಡ್ಡ ಮಟ್ಟದ ಯೋಜನೆಗಳನ್ನು ರೂಪಿಸಿರುತ್ತವೆ. ಆದರೆ ಆಟಗಾರರು ತಮ್ಮ ಮನಬಂದಂತೆ ಟೂರ್ನಿಯಿಂದ ಹಿಂದೆ ಸರಿಯುವುದರಿಂದ ಇಡೀ ಯೋಜನೆಯೇ ಹಳ್ಳ ಹಿಡಿಯುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಮಿಟ್ಮೆಂಟ್ ತಪ್ಪಿದ್ದಕ್ಕೆ ಬೇಸರ
ಇತ್ತೀಚಿನ ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್ ತಂಡದ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ತಮ್ಮ ಮಗುವಿನ ಜನನದ ಕಾರಣದಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಗವಾಸ್ಕರ್ ತಮ್ಮ ಲೇಖನದಲ್ಲಿ ನೇರವಾಗಿ ಫರ್ಗುಸನ್ ಹೆಸರನ್ನು ಉಲ್ಲೇಖಿಸದಿದ್ದರೂ, ಕೊನೆಯ ಕ್ಷಣದ ಇಂತಹ ನಿರ್ಧಾರಗಳು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದ್ದಾರೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, “ಕುಟುಂಬದೊಂದಿಗೆ ಸಮಯ ಕಳೆಯುವುದು ತಪ್ಪಲ್ಲ, ಆದರೆ ಒಮ್ಮೆ ಕಮಿಟ್ಮೆಂಟ್ ನೀಡಿದ ಮೇಲೆ ಅರ್ಧದಷ್ಟು ಪಂದ್ಯಗಳಿಗೆ ಅಲಭ್ಯರಾಗುವುದು ಸರಿಯಲ್ಲ. ತಂಡಗಳು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಹೇಳಿದ್ದಾರೆ.
ಈಗಾಗಲೇ ಐಪಿಎಲ್ ಮಂಡಳಿಯು ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಹರಾಜಿನಲ್ಲಿ ಆಯ್ಕೆಯಾದ ನಂತರ ವೈದ್ಯಕೀಯ ಕಾರಣಗಳಿಲ್ಲದೆ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರನ್ನು ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ನಿಂದ ನಿಷೇಧಿಸುವ ಅಧಿಕಾರವನ್ನು ಬೋರ್ಡ್ ಹೊಂದಿದೆ. ಆದರೂ, ಆಟಗಾರರು ವಿವಿಧ ಕಾರಣಗಳನ್ನು ನೀಡಿ ಪಾರಾಗುತ್ತಿರುವುದು ಗವಾಸ್ಕರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಗಾಯದ ಸಮಸ್ಯೆಯಿಂದ ಹರ್ಷಿತ್ ರಾಣಾ ಮತ್ತು ಸ್ಯಾಮ್ ಕರನ್ ಅಂತಹ ಆಟಗಾರರು ಹೊರಬಿದ್ದಿರುವುದು ಅನಿವಾರ್ಯವಾದರೂ, ಪೂರ್ವ ಮಾಹಿತಿ ನೀಡದೆ ಗೈರಾಗುವವರ ವಿರುದ್ಧ ಫ್ರಾಂಚೈಸಿಗಳು ಈಗಲೇ ಕಠಿಣ ನಿಲುವು ತಳೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಬಾರಿಶ್ ಹಣ ಎಂದು ನಂಬಿಸಿ ಲಕ್ಷ ಲಕ್ಷ ಲೂಟಿ.. ಪಂಗನಾಮ ಹಾಕಿದ ಗ್ಯಾಂಗ್ ಅರೆಸ್ಟ್..!



















