ಬೆಂಗಳೂರು | ಇದೇ ತಿಂಗಳ ಅಂತ್ಯದಿಂದ ‘ಐಪಿಎಲ್’ ಆರಂಭವಾಗಲಿದೆ. ಐಪಿಎಲ್ ಅಂದ್ರೆ ಸಾಕು ಭಾರತೀಯರಿಗೆ ಹಬ್ಬ ಇದ್ದಂತೆ. ಈ ಎರಡೂ ತಿಂಗಳು ಕೆಲಸಕ್ಕೆ ಹೋಗದೆ ಟಿವಿ ಮುಂದೆ ಕುಳಿತುಕೊಳ್ಳುವ ಅದೆಷ್ಟೋ ಜನರಿದ್ದಾರೆ. ಈ ಎರಡು ತಿಂಗಳು ಯುವ ಪೀಳಿಗೆ ಫುಲ್ ಬ್ಯುಸಿ. ಅಷ್ಟೊಂದು ಪ್ರೀತಿಸುವ ಈ ಕ್ರೀಡೆಯು ಇಂದು ಕ್ರೇಜ್ ಹಾಗೂ ಅಭಿಮಾನ ಆಗಿ ಅಷ್ಟೇ ಉಳಿಯದೆ ಬೆಟ್ಟಿಂಗ್ ಥಳಕು ಹಾಕಿಕೊಂಡು ಯುವ ಪೀಳಿಗೆಯನ್ನು ಹಾಳು ಮಾಡುತ್ತಿದೆ.
ಹೀಗಾಗಿ ಯುವಕರು ತಮ್ಮ ಹಣ ಮಾತ್ರವಲ್ಲ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆಯುವ ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಇಲ್ಲವೇ? ಬೆಟ್ಟಿಂಗ್ ನಿಗ್ರಹಿಸುವ ಕಾನೂನು ಹಲ್ಲಿಲ್ಲದ ಹಾವಾಗಿದೆಯೇ? ಆದರೆ, ಈ ದಂಧೆಗೆ ಕಡಿವಾಣ ಹಾಕಲೇಬೇಕು. ಇಲ್ಲವಾದರೆ ಯುವ ಪೀಳಿಗೆ ಸಿಲುಕಿ ನಶಿಸಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಸದ್ಯ ಇರುವ ಕಾನೂನು ಇನ್ನೂ ಕಠಿಣವಾಗಬೇಕು. ಜನರಿಗೆ ಭಯ ಬರಬೇಕು.
ಹಳ್ಳಿ-ಹಳ್ಳಿಗಳಲ್ಲೂ ಬೆಟ್ಟಿಂಗ್ ಅವ್ಯಾಹತವಾಗಿ ನಡೆಯುತ್ತಿದೆ. ಹಲವೆಡೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಅನಧಿಕೃತವಾಗಿ ಹಳ್ಳಿ-ಹಳ್ಳಿ, ನಗರ, ಪಟ್ಟಣ, ಬೀದಿಗಳಲ್ಲಿ ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,198 ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 357, 2024ರಲ್ಲಿ 331, 2025ರಲ್ಲಿ 503 ಪ್ರಕರಣಗಳು ದಾಖಲಾಗಿವೆ.
ಮೊಬೈಲ್ ಶಾಪ್, ಪಾನ್ ಶಾಪ್, ಹೋಟೆಲ್ ಸೇರಿದಂತೆ ಇನ್ನೂ ಹಲವು ಹರಟೆ ಕಟ್ಟೆಗಳಲ್ಲಿ ಮೊಬೈಲ್ ಫೋನ್ ಗಳ ಮೂಲಕ ಆನ್ ಲೈನ್ ಬೆಟ್ಟಿಂಗ್ ವ್ಯವಹಾರಗಳು ನಡೆಯುತ್ತಿವೆ. ಖಾಕಿ ಅಂಕಿ-ಸಂಖ್ಯೆ ಪ್ರಕಾರ ಬೆಂಗಳೂರಿನಲ್ಲಿ 163, ಮೈಸೂರು ಜಿಲ್ಲೆಯಲ್ಲಿ 9, ಹುಬ್ಬಳ್ಳಿ-ಧಾರವಾಡದಲ್ಲಿ 343, ಮಂಗಳೂರು ನಗರದಲ್ಲಿ 3, ಬೆಳಗಾವಿ ನಗರದಲ್ಲಿ 3, ಕಲಬುರಗಿ ನಗರದಲ್ಲಿ 8, ತುಮಕೂರು ಜಿಲ್ಲೆಯಲ್ಲಿ 5 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ಅನಧಿಕೃತವಾಗಿ ಅದೆಷ್ಟೋ ಆಪ್ ಗಳು ಇನ್ನೂ ಸಕ್ರಿಯವಾಗಿವೆ ಎಂಬ ಗುಸುಗುಸು ಇದೆ.
ಇದು ಕೇವಲ ಸಿಟಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಯುವಕರು ಐಪಿಎಲ್ ಬೆಟ್ಟಿಂಗ್ ಮೋಹಕ್ಕೆ ಒಳಗಾಗಿದ್ದಾರೆ. ಬೆಟ್ಟಿಂಗ್ ಗಾಗಿ ಸಾಲ ಮಾಡುತ್ತಿದ್ದಾರೆ. ಕಡಿಮೆ ಟೈಂಗೆ ಹೆಚ್ಚು ಹಣ ಮಾಡಬಹುದು ಅನ್ನೋ ದುರಾಸೆಯಿಂದ ಇದ್ದದ್ದನ್ನೂ ಕಳೆದುಕೊಳ್ಳುತ್ತಿದ್ದಾರೆ. ಆಗಾಗ ಗೆದ್ದ ಹಣವನ್ನು ಮೋಜು-ಮಸ್ತಿ ಮಾಡಿ ಸಂಭ್ರಮಿಸಿ, ಸೋತಾಗ ಊರು ಬಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದಲೂ ನಡೆದು ಬರುತ್ತಿರುವ ಪರಿಪಾಟವಾಗಿದೆ.
ಇದನ್ನು ನಿಲ್ಲಿಸುವುದರಲ್ಲಿ ಪೋಷಕರ ಪಾತ್ರ ದೊಡ್ಡದಿದೆ. ಪೊಲೀಸರು ಕೆಲವು ಕಟ್ಟು ನಿಟ್ಟಿನ ಎಚ್ಚರಿಕೆ ನೀಡುತ್ತಾರೆ ಅಷ್ಟೇ. ಹೀಗಾಗಿ ಯುವಕರೇ ತಮ್ಮ ನಿಯಂತ್ರಣವನ್ನು ತಾವೇ ಮಾಡಿಕೊಳ್ಳಬೇಕು. ಕಡಿಮೆ ಟೈಮ್ ನಲ್ಲಿ ಹೆಚ್ಚು ಹಣ ಮಾಡೋ ದುರಾಸೆಯಿಂದ ಬೆಟ್ಟಿಂಗ್ ಆಡಲು ಹೋಗಬಾರದು. ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿರಬೇಕಿದೆ. ಮಕ್ಕಳ ಹಣಕಾಸಿನ ಅಗತ್ಯತೆ, ಆತನ ಸ್ನೇಹಿತರ ಬಗ್ಗೆ, ಮಕ್ಕಳ ಪಠ್ಯೇತರ ಚಟುವಟಿಕೆ ಮೇಲೆ ನಿಗಾ ವಹಿಸಬೇಕಿದೆ. ಆತನ ಸ್ನೇಹಿತರ ಮೇಲೆ ಕಣ್ಣಿಡಬೇಕಿದೆ.
ಇದನ್ನೂ ಓದಿ : ‘ಎಲ್ಲರನ್ನೂ ಕ್ಷಮಿಸಿಬಿಡು, ಹೋಗುವ ಸಮಯ ಬಂದಿದೆ’ – ದಯಾಮರಣಕ್ಕೆ ಸಿದ್ಧನಾದ ಹರೀಶ್ ರಾಣಾಗೆ ಕಣ್ಣೀರಿನ ವಿದಾಯ!


















