ನವದೆಹಲಿ : “ಎಲ್ಲರನ್ನೂ ಕ್ಷಮಿಸಿಬಿಡು, ಎಲ್ಲರ ಬಳಿ ಕ್ಷಮೆ ಕೇಳು.. ಈಗ ಹೋಗುವ ಸಮಯ ಬಂದಿದೆ”. ಘಾಜಿಯಾಬಾದ್ನ ನಿಶ್ಯಬ್ದ ಗಲ್ಲಿಯೊಂದರ ಮನೆಯಲ್ಲಿ ಎಂಥವರ ಕಲ್ಲು ಮನಸ್ಸನ್ನೂ ಕರಗಿಸುವಂಥ ಈ ಮಾತುಗಳು ನಿನ್ನೆ ರಾತ್ರಿ ಕೇಳಿಸುತ್ತಿದ್ದವು. ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದು, ಕೇವಲ ಯಂತ್ರಗಳ ಸಹಾಯದಿಂದ ಉಸಿರಾಡುತ್ತಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ಕಲ್ಪಿಸುವ ಪ್ರಕ್ರಿಯೆಯು ಆರಂಭವಾದ ಸೂಚಕವಿದು.
ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪಿನ ಅನ್ವಯ ಭಾರತದಲ್ಲಿ ಮೊದಲ ಬಾರಿಗೆ ‘ಘನತೆಯಿಂದ ಸಾಯುವ ಹಕ್ಕು’ (Passive Euthanasia) ಪಡೆದ ಹರೀಶ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಹಂತ ಹಂತವಾಗಿ ಅವರ ಜೀವ ರಕ್ಷಕ ಕವಚಗಳನ್ನು ತೆರವುಗೊಳಿಸುತ್ತಿದ್ದಾರೆ.
13 ವರ್ಷಗಳ ಸುದೀರ್ಘ ಹೋರಾಟ
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, 2013ರಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ತೀವ್ರವಾದ ಮಿದುಳಿನ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಹರೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಉಸಿರಾಟಕ್ಕಾಗಿ ಕುತ್ತಿಗೆಗೆ ಕೊಳವೆ ಮತ್ತು ಆಹಾರಕ್ಕಾಗಿ ಹೊಟ್ಟೆಗೆ ಕೊಳವೆಯನ್ನು ಅಳವಡಿಸಲಾಗಿತ್ತು. ಮಗ ಚೇತರಿಸಿಕೊಳ್ಳಬಹುದು ಎಂಬ ಏಕೈಕ ಆಸೆಗಳೊಂದಿಗೆ 13 ವರ್ಷಗಳ ಕಾಲ ಪೋಷಕರು ಸಾಲಸೋಲ ಮಾಡಿ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದರು. ನಿರಂತರ ಆರೈಕೆಯನ್ನೂ ಮಾಡುತ್ತಿದ್ದರು. ಆದರೆ, ಯಾವುದೇ ಸುಧಾರಣೆ ಕಾಣದಿದ್ದಾಗ, ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ನೋಡಲಾಗದೆ ಪೋಷಕರು ‘ದಯಾಮರಣ’ಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರಕ್ರಿಯೆ ಶುರು
ಹರೀಶ್ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಅತ್ಯಂತ ಭಾವುಕವಾಗಿ ತೀರ್ಪು ನೀಡಿತ್ತು. “ಒಬ್ಬರನ್ನು ಪ್ರೀತಿಸುವುದು ಎಂದರೆ ಕೇವಲ ಸಂತೋಷದ ಸಮಯದಲ್ಲಿ ಜೊತೆಗಿರುವುದಲ್ಲ, ಅವರ ಕಡು ಕಷ್ಟದ ಕ್ಷಣಗಳಲ್ಲಿ ಅವರ ಬಗ್ಗೆ ಕಾಳಜಿ ವಹಿಸುವುದು,” ಎಂದು ನ್ಯಾಯಾಲಯ ರಾಣಾ ಕುಟುಂಬದ ತ್ಯಾಗವನ್ನು ಶ್ಲಾಘಿಸಿದೆ. ಇದು ಸಾವನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರವಲ್ಲ, ಬದಲಿಗೆ ಕೃತಕವಾಗಿ ಜೀವವನ್ನು ಎಳೆದಾಡುವುದನ್ನು ನಿಲ್ಲಿಸುವ ನಿರ್ಧಾರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಜತೆಗೆ ರಾಣಾ ದಯಾಮರಣಕ್ಕೆ ಅನುಮತಿ ನೀಡಿತ್ತು.
ಕೊನೇ ಕ್ಷಣದ ಹೃದಯಸ್ಪರ್ಶಿ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 22 ಸೆಕೆಂಡುಗಳ ವಿಡಿಯೋದಲ್ಲಿ, ಹರೀಶ್ ಅವರ ತಾಯಿ ಮಗನ ಪಕ್ಕದಲ್ಲಿ ಕುಳಿತು ದುಃಖತಪ್ತರಾಗಿರುವುದನ್ನು ಕಾಣಬಹುದು. ಬ್ರಹ್ಮಕುಮಾರಿ ಸಂಸ್ಥೆಯ ಸೋದರಿಯೊಬ್ಬರು ಹರೀಶ್ ಹಣೆಗೆ ತಿಲಕವನ್ನಿಟ್ಟು, ಅವರ ತಲೆ ಸವರುತ್ತಾ ಮೌನವಾಗಿ ಶಾಂತಿಯಿಂದ ಮರಳುವಂತೆ ಹೇಳುತ್ತಿರುವ ದೃಶ್ಯ ಎಂಥವರನ್ನೂ ಭಾವುಕರನ್ನಾಗಿಸುವಂತಿತ್ತು. 13 ವರ್ಷಗಳ ಕಾಲ ಭರವಸೆ, ಪ್ರಾರ್ಥನೆ ಮತ್ತು ತ್ಯಾಗದ ಮೂಲಕ ಮಗನನ್ನು ಉಳಿಸಿಕೊಳ್ಳಲು ಹೋರಾಡಿದ ಪೋಷಕರು, ಇಂದು ಭಾರವಾದ ಹೃದಯದಿಂದಲೇ ಮಗನಿಗೆ ವಿದಾಯ ಹೇಳಿ, ಮುಕ್ತಿ ನೀಡಲು ಮುಂದಾದ ದೃಶ್ಯಗಳು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು.
ಇದನ್ನೂ ಓದಿ : “ರಿಂಕು ಕೇವಲ ಸ್ಲಾಗರ್ ಅಲ್ಲ”.. ಕೆಕೆಆರ್ ತಂಡಕ್ಕೆ ಸುರೇಶ್ ರೈನಾ ಕಿವಿಮಾತು!



















