ಬೆಂಗಳೂರು | ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ತರುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಜನ ಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಸಹಕಾರಕ್ಕೆ ಜನರ ಸಹಕಾರ, ಪ್ರಾಮಾಣಿಕತೆಯ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಂಘಗಳು ಬಂದ್ ಆಗುತ್ತಿವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ, ನ್ಯಾಯಯುತ ಬೆಲೆಯಲ್ಲಿ ಸರಕುಗಳ ವಿತರಣೆ, ಮಧ್ಯವರ್ತಿಗಳಿಲ್ಲದ ನೇರ ಮಾರಾಟ ಮತ್ತು ಲಾಭಾಂಶ ಹಂಚಿಕೆಯಂತಹ ಪ್ರಮುಖ ಪ್ರಯೋಜನೆಗಳನ್ನು ಸಹಕಾರ ಸಂಘಗಳು ಸಾಮಾನ್ಯರಿಗೆ ತಲುಪಿಸುತ್ತಿದ್ದವು.
ಆದರೆ, ಇತ್ತೀಚೆಗೆ ಸಹಕಾರಿಗೆ ಸಹಕಾರ ಇಲ್ಲವಾಗಿದೆ. ಸರಳ ನೋಂದಣಿ, ತೆರಿಗೆ ವಿನಾಯಿತಿ, ಮತ್ತು ಪ್ರಜಾಸತ್ತಾತ್ಮಕ ನಿರ್ವಹಣೆಯೊಂದಿಗೆ ಸ್ವ-ಸಹಾಯ ಮತ್ತು ಪರಸ್ಪರ ಸಹಕಾರದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ. ಆದರೆ ಸಾಲ ಪಡೆದವರ ನಿರಾಸಕ್ತಿ, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಹಕಾರ ಸಂಘಗಳು ರಾಜ್ಯದಲ್ಲಿ ಬಂದ್ ಆಗುತ್ತಿವೆ.
ರಾಜ್ಯದಲ್ಲಿ ಒಟ್ಟು 47,763 ವಿವಿಧ ಹಂತದ ಸಹಕಾರ ಸಂಘಗಳಿದ್ದವು. ಆದರೆ, ಈ ಪೈಕಿ ಬರೋಬ್ಬರಿ 2,675 ಸಹಕಾರ ಸಂಘಗಳು ಸ್ಥಗಿತಗೊಂಡಿವೆ. ಸಾಲ ತೆಗೆದುಕೊಂಡ ಸದಸ್ಯರು ನಿಗದಿತ ಸಮಯದಲ್ಲಿ ಸಂಘಕ್ಕೆ ಮರು ಪಾವತಿ ಮಾಡುತ್ತಿಲ್ಲ. ಸಂಘಗಳ ಸಿಬ್ಬಂದಿಯೂ ಸರಿಯಾಗಿ ಸಾಲ ವಸೂಲಿ ಮಾಡುತ್ತಿಲ್ಲ. ಸಾಲ ನೀಡುವಾಗ ದಾಖಲೆಗಳನ್ನು ಪರಿಶೀಲಿಸದೆ ಆಸ್ತಿಗಳ ಮೌಲ್ಯಮಾಪನಕ್ಕಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿದ್ದು, ಸಂಘದ ಹಿನ್ನೆಡೆಗೆ ಕಾರಣವಾಗುತ್ತಿವೆ.
ಅಲ್ಲದೇ, ವಾಣಿಜ್ಯ ಬ್ಯಾಂಕುಗಳ ನಡುವೆ ಪೈಪೋಟಿಗಿಳಿಯದಿದ್ದು ಸಂಘದ ಹೊಡೆತಕ್ಕೆ ಕಾರಣವಾಗುತ್ತಿದೆ. ಸಹಕಾರ ಸಂಘಗಳ ಭಾಗವಹಿಸುವಿಕೆಯಲ್ಲಿ ಜನರ ನಿರಾಕಸಕ್ತಿ, ಭದ್ರತೆ ಇಲ್ಲದೆ, ಜಾಮೀನು ಇಲ್ಲದೆ ಸಾಲ ನೀಡುವುದರಿಂದ ಕೂಡ ಸಂಘಗಳು ಅಸಹಕಾರ ಎದುರಿಸುತ್ತಿವೆ.
ಸಹಕಾರ ಸಂಘಗಳಲ್ಲಿ ಸದಸ್ಯರು ಕನಿಷ್ಠ ವ್ಯವಹಾರ ಮಾಡದೆ ಇರುವುದು, ಸಂಘಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗುತ್ತಿರುವುದು ಅಭಿವೃದ್ಧಿ ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳದೆ ಕಾರ್ಯನಿರ್ವಹಿಸುತ್ತಿರುವುದರಿಂದಲೂ ಸಂಘದ ಸಾಧನೆಯ ಮೇಲೆ ಪರಿಣಾಮ ಬೀರುತ್ತಿದೆ. ಅವಶ್ಯಕವಿರುವ ಬಂಡವಾಳದ ಕೊರತೆಯಿಂದಾಗಿ. ಸಂಘವು ಸರಕು ಮತ್ತು ಸೇವೆಗಳನ್ನು ಗುಣಮಟ್ಟದಲ್ಲಿ ನೀಡಲು ವಿಫಲವಾಗಿರುವುದು ಕೂಡ ದೊಡ್ಡ ತಲೆನೋವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನುರಿತ ಸಿಬ್ಬಂದಿಗಳ ಕೊರತೆಯೂ ಇದಕ್ಕೆ ಬಹು ದೊಡ್ಡ ಕಾರಣವಾಗುತ್ತಿದೆ.
ಎಲ್ಲಿ ಎಷ್ಟು ವಸೂಲಿಯಾಗಬೇಕಿದೆ?
ಬೆಳಗಾವಿ ಜಿಲ್ಲೆಯಲ್ಲೇ ಹೆಚ್ಚು ಅಂದರೆ 593 ಸಹಕಾರ ಸಂಘಗಳು ಇದ್ದು, 18,425.85 ಲಕ್ಷ ರೂ. ವಸೂಲಾಗಬೇಕಿದೆ. ವಿಜಯಪುರದಲ್ಲಿ 1125.58 ಲಕ್ಷ ರೂ., ಬಾಗಲಕೋಟೆಯಲ್ಲಿ 835.92 ಲಕ್ಷ ರೂ., ಧಾರವಾಡದಲ್ಲಿ 1401.02 ಲಕ್ಷ ರೂ., ಗದಗ 187.35 ಲಕ್ಷ ರೂ., ಹಾವೇರಿ 145.43 ಲಕ್ಷ ರೂ, ಉತ್ತರ ಕನ್ನಡ 1851.20 ಲಕ್ಷ ರೂ., ರಾಯಚೂರು 556.84 ಲಕ್ಷ ರೂ., ಕಲಬುರಗಿಯಲ್ಲಿ 846 ಲಕ್ಷ ರೂ., ಬಳ್ಳಾರಿಯಲ್ಲಿ 318 ಲಕ್ಷ ರೂ., ಮೈಸೂರು ಜಿಲ್ಲೆಯಲ್ಲಿ 220.6 ಲಕ್ಷ ರೂ., ದಕ್ಷಿಣ ಕನ್ನಡದಲ್ಲಿ 411.06 ಲಕ್ಷ ರೂ. ಸೇರಿದಂತೆ ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿನ ಸಹಕಾರ ಸಂಘಗಳಲ್ಲಿ ಹಣ ವಸೂಲಿಯಾಗದೆ ಹಾಗೆ ಇದ್ದ ಪರಿಣಾಮ ಸಹಕಾರ ಸಂಘಗಳು ನಷ್ಟ ಅನುಭವಿಸುತ್ತಿವೆ.
ಇದನ್ನೂ ಓದಿ : ಎಫ್ಸ್ಟೀನ್ ಫೈಲ್ಸ್ನಿಂದ ಪ್ರಧಾನಿ ಮೋದಿ ಜನಪ್ರಿಯತೆ ಕಡಿಮೆ ಆಗಿದೆ – ರಾಮಲಿಂಗಾರೆಡ್ಡಿ



















