ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಮಣಿಸಿದ ಭಾರತ ತಂಡ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಭಾರತದ ಈ ಅಪ್ರತಿಮ ಸಾಧನೆಯನ್ನು ಕೊಂಡಾಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, “ಭಾರತದ ಸ್ಫೋಟಕ ಕ್ರಿಕೆಟ್ಗೆ ಜಗತ್ತಿನಲ್ಲಿ ಬೇರೆ ಯಾವುದೇ ತಂಡ ಸಾಟಿಯಿಲ್ಲ” ಎಂದು ಬಣ್ಣಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಸ್ಕೋರ್ ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಭಾರತದ ಈ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದ್ದು ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್. ಕೇವಲ 46 ಎಸೆತಗಳಲ್ಲಿ 89 ರನ್ ಸಿಡಿಸಿದ ಸ್ಯಾಮ್ಸನ್, ಕಿವೀಸ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಆಕರ್ಷಕ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಯೇ ಇತ್ತು.
ಬೌಲಿಂಗ್ನಲ್ಲಿ ಬುಮ್ರಾ-ಅಕ್ಷರ್ ಅಬ್ಬರ
256 ರನ್ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ, ಭಾರತದ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿತು. ಕಿವೀಸ್ ಪಡೆ 19 ಓವರ್ಗಳಲ್ಲಿ ಕೇವಲ 159 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಪ್ರದರ್ಶಿಸಿ, ಕೇವಲ 15 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ನ ಬೆನ್ನೆಲುಬು ಮುರಿದರು. ಅವರಿಗೆ ಸಾಥ್ ನೀಡಿದ ಸ್ಪಿನ್ನರ್ ಅಕ್ಷರ್ ಪಟೇಲ್ 27 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಟ್ವಿಟರ್ನಲ್ಲಿ (X) ವಿರಾಟ್ ಕೊಹ್ಲಿ ಶುಭಾಶಯ
2024ರ ವಿಶ್ವಕಪ್ ಗೆಲುವಿನ ಬಳಿಕ ಈ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ವಿರಾಟ್ ಕೊಹ್ಲಿ, ತಂಡದ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಚಾಂಪಿಯನ್ಸ್! ಅಹಮದಾಬಾದ್ನಲ್ಲಿ ಟೀಮ್ ಇಂಡಿಯಾಗೆ ಅದ್ಭುತ ಗೆಲುವು ಸಿಕ್ಕಿದೆ. ಇಡೀ ಟೂರ್ನಿಯುದ್ದಕ್ಕೂ ನಮ್ಮ ತಂಡ ಆಡಿದ ಸ್ಫೋಟಕ ಕ್ರಿಕೆಟ್ಗೆ ಬೇರೆ ತಂಡಗಳು ಸಾಟಿಯೇ ಇಲ್ಲ. ಕಠಿಣ ಪರಿಸ್ಥಿತಿಯಲ್ಲೂ ಹೋರಾಡಿ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆದ ಹುಡುಗರ ಬಗ್ಗೆ ಹೆಮ್ಮೆ ಇದೆ. ಆಟಗಾರರು ಹಾಗೂ ಮ್ಯಾನೇಜ್ಮೆಂಟ್ಗೆ ಅಭಿನಂದನೆಗಳು. ಜೈ ಹಿಂದ್” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿ
ಫೈನಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ ‘ಪಂದ್ಯ ಶ್ರೇಷ್ಠ’ (Player of the Match) ಪ್ರಶಸ್ತಿಗೆ ಭಾಜನರಾದರು. ಅವರು ಟೂರ್ನಿಯುದ್ದಕ್ಕೂ ಒಟ್ಟು 14 ವಿಕೆಟ್ ಪಡೆದು ವರುಣ್ ಚಕ್ರವರ್ತಿ ಅವರೊಂದಿಗೆ ಜಂಟಿ ಅಗ್ರ ವಿಕೆಟ್ ಟೇಕರ್ ಎನಿಸಿಕೊಂಡರು. ಇನ್ನು ಇಡೀ ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಹಾಗೂ ಒಟ್ಟು 321 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಅವರು ‘ಸರಣಿ ಶ್ರೇಷ್ಠ’ (Player of the Tournament) ಗೌರವಕ್ಕೆ ಪಾತ್ರರಾದರು.
ಭಾರತವು 2024ರಲ್ಲಿ ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆಗಿತ್ತು, ಈಗ 2026ರಲ್ಲೂ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಟಿ20 ಕ್ರಿಕೆಟ್ನಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ.
ಇದನ್ನೂ ಓದಿ : 3ನೇ ಬಾರಿ ಟಿ20 ವಿಶ್ವಕಪ್ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ!


















