ಬೆಂಗಳೂರು: ಹೋರಾಟ ಮನೋಭಾವ ಹೊಂದಿರುವ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಕಲ್ಪಿಸುವುದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ಪ್ರಮುಖ ಆದ್ಯತೆಯಾಗಿದೆ ಎಂದು ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ.

ಯಲಹಂಕ ನ್ಯೂಟೌನ್ನ ಧ್ವಜಾರೋಹಣ ಮೈದಾನದಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ರಾಜಕೀಯ ಪಕ್ಷಗಳಲ್ಲಿ ಸ್ಥಾನಮಾನಗಳು ಮತ್ತು ಮಾನ್ಯತೆಗಳು ರಾಜಕಾರಣಿಗಳ ಕುಟುಂಬದ ಸದಸ್ಯರಿಗೆ, ಸಿನಿಮಾ ನಟಿಯರಿಗೆ ಅಥವಾ ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಸಿಗುತ್ತವೆ. ಆದರೆ ಕೆಆರ್ಎಸ್ ಪಕ್ಷದಲ್ಲಿ ಸಾಮಾನ್ಯ ಜನರಿಗೆ ಹಾಗೂ ಹೋರಾಟ ಮನೋಭಾವದ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.
ಪಕ್ಷದಲ್ಲಿ ಕಲ್ಲಂಗಡಿ ಮಾರುವ ಮಹದೇವಿ ಹಾಗೂ ಎಳನೀರು ಮಾರುವ ಅಂಜಲಿ ಅವರಂತಹ ಸಾಮಾನ್ಯ ಮಹಿಳೆಯರಿಗೆ ಕೂಡ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಹೋರಾಟ ಮನೋಭಾವದ ಹೆಣ್ಣುಮಕ್ಕಳಿಗೆ ವೇದಿಕೆ ಕಲ್ಪಿಸುವುದು ಕೆಆರ್ಎಸ್ ಪಕ್ಷದ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇತ್ತೀಚೆಗೆ ಮಾಜಿ ಶಾಸಕಿ ಮೋಟಮ್ಮ ಅವರ ಪುತ್ರಿ ಕಾಂಗ್ರೆಸ್ ಪಕ್ಷದಲ್ಲಿ ಅಂದವಾಗಿ ಶೃಂಗಾರಗೊಂಡು ಬಂದ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂಬ ಹೇಳಿಕೆ ನೀಡಿರುವುದು ವಿಷಾದಕರ ಸಂಗತಿ. ಇಂದಿನ ರಾಜಕೀಯದಲ್ಲಿ ಸಾಮಾನ್ಯ ಹಿನ್ನೆಲೆಯ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಕನ್ನಡದ ಖ್ಯಾತ ಮುಸ್ಲಿಂ ಸಾಹಿತಿಗಳಾದ ಸಾ.ರಾ. ಅಬೂಬಕರ್, ಬಾನು ಮುಸ್ತಾಕ್ ಹಾಗೂ ಡಾ. ಶರೀಫಾ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿ, ಇಂತಹ ಮಹಾನ್ ಚಿಂತಕರು ಮತ್ತು ಸಾಹಿತಿಗಳನ್ನು ಸಮಾಜ ಗುರುತಿಸಬೇಕು. ರಾಜಕೀಯಕ್ಕೆ ಹೆಣ್ಣು ಬಂದರೆ ಸಮಾಜಕ್ಕೆ ಕಣ್ಣು ಬಂದಂತೆ. ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಿ ಪ್ರಾಮಾಣಿಕ ರಾಜಕೀಯ ಚಳುವಳಿಗಳಿಗೆ ಬೆಂಬಲ ನೀಡಬೇಕು ಎಂದಿದ್ದಾರೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಚಿಂತಕರಾದ ಡಾ. ಶರೀಫಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್., ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಘುನಂದನ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್, ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


















