ಕರಾಚಿ : ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದೇ ವೇಳೆ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಅವರು ನೀಡಿರುವ ಒಂದು ಹೇಳಿಕೆ ಪಾಕಿಸ್ತಾನ ಕ್ರಿಕೆಟ್ನಲ್ಲಿರುವ ರಾಜಕೀಯ ಒತ್ತಡ ಮತ್ತು ಭಯದ ವಾತಾವರಣವನ್ನು ಬಿಚ್ಚಿಟ್ಟಿದೆ.
ಇತ್ತೀಚಿನ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಶೀದ್ ಲತೀಫ್ ಅವರಿಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ನೇರವಾಗಿ ಉತ್ತರಿಸದ ಲತೀಫ್ ಅತ್ಯಂತ ಗಂಭೀರವಾಗಿ ಪ್ರತಿಕ್ರಿಯಿಸಿ, “ನೀವು ಬಹುಶಃ ಪಾರಾಗಬಹುದು, ಆದರೆ ನಾವು ಸತ್ಯ ಹೇಳಿದರೆ ನಮ್ಮನ್ನು ಯಾರೂ ಉಳಿಸಲಾರರು” ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷರ ವಿರುದ್ಧ ಮಾತನಾಡಿದರೆ ಪ್ರಾಣಾಪಾಯ ಅಥವಾ ವ್ಯವಸ್ಥೆಯಿಂದ ಕಿರುಕುಳ ಎದುರಿಸಬೇಕಾಗುತ್ತದೆ ಎಂಬ ಭಯವನ್ನು ಲತೀಫ್ ಅವರ ಈ ಮಾತುಗಳು ಪ್ರತಿಬಿಂಬಿಸಿವೆ. ಕಾರ್ಯಕ್ರಮದ ನಿರೂಪಕ ತಾಬಿಶ್ ಹಶ್ಮಿ ಕೂಡ, “ನೀವು ಈ ಕಮೆಂಟ್ ಮಾಡಿದ ಮೇಲಂತೂ ಖಂಡಿತ ಪಾರಾಗಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಗಿ ಹೇಳಿದ್ದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿದೆ.
ತಂಡದಲ್ಲಿ ದೊಡ್ಡ ಬದಲಾವಣೆಗಳು
ವಿಶ್ವಕಪ್ ಸೋಲಿನ ಬೆನ್ನಲ್ಲೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಟಿ20 ನಾಯಕ ಸಲ್ಮಾನ್ ಅಘಾ ಮತ್ತು ಏಕದಿನ ನಾಯಕ ಶಾಹೀನ್ ಅಫ್ರಿದಿ ಅವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಬಾಬರ್ ಅಜಮ್ಗೆ ಕೋಕ್ : ಬಾಂಗ್ಲಾದೇಶ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಮತ್ತು ಸೈಮ್ ಅಯೂಬ್ ಅವರನ್ನು ಕೈಬಿಡಲಾಗಿದೆ.
ಸರ್ಫರಾಜ್ ಅಹಮದ್ಗೆ ಹೊಸ ಜವಾಬ್ದಾರಿ : 38 ವರ್ಷದ ಮಾಜಿ ನಾಯಕ ಸರ್ಫರಾಜ್ ಅಹಮದ್ ಅವರನ್ನು ಪಾಕಿಸ್ತಾನ ಟೆಸ್ಟ್ ತಂಡದ ಇತಿಹಾಸದಲ್ಲೇ ಅತ್ಯಂತ ಕಿರಿಯ ಮುಖ್ಯ ತರಬೇತುದಾರನನ್ನಾಗಿ ನೇಮಿಸಲು ಮಂಡಳಿ ಮುಂದಾಗಿದೆ.
ವಿಶ್ವಕಪ್ನಲ್ಲಿ ವಿಫಲವಾದ ಪಾಕಿಸ್ತಾನ
ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡವು ಸತತ ಎರಡನೇ ಬಾರಿಗೆ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿದೆ. ಸೂಪರ್ 8 ಹಂತದಲ್ಲಿ ಕೇವಲ ಶ್ರೀಲಂಕಾ ವಿರುದ್ಧ ಮಾತ್ರ ಗೆಲುವು ಸಾಧಿಸಿದ್ದ ಪಾಕಿಸ್ತಾನ, ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಭಾರತದ ವಿರುದ್ಧದ ಸೋಲು ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿತ್ತು. ಈಗ ತಂಡದ ಕಳಪೆ ಪ್ರದರ್ಶನಕ್ಕಿಂತ ಹೆಚ್ಚಾಗಿ, ಮಂಡಳಿಯ ಆಡಳಿತ ಮತ್ತು ಆಟಗಾರರ ನಡುವಿನ ಭಿನ್ನಮತದ ಸುದ್ದಿ ಹಸಿರು ಮೈದಾನದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಇದನ್ನೂ ಓದಿ : ಗಂಡ ಸತ್ತ 20 ದಿನಕ್ಕೆ ಪತ್ನಿ ಮತ್ತೊಂದು ಮದುವೆಯಾದ ಕೇಸ್ಗೆ ಟ್ವಿಸ್ಟ್.. 1 ತಿಂಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ



















