ಬೆಂಗಳೂರು : ಐಸಿಸಿ ಟಿ20 ವಿಶ್ವಕಪ್ 2026ರ ‘ಗ್ರೂಪ್ ಎ’ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಅನಿರೀಕ್ಷಿತ ಹಾಗೂ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ತಂತ್ರಗಳು ಹಾಗೂ ಆಟಗಾರರ ಆಯ್ಕೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾರತದ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿದ್ದರೂ, ಪಾಕ್ ಆಟಗಾರರು ಮಾತ್ರ ಟೀಂ ಇಂಡಿಯಾದ ತಪ್ಪುಗಳನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಭಾರತ ತನ್ನ ಮುಂದಿನ ಎರಡು ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
“ಗೌತಮ್ ಗಂಭೀರ್ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ”
ಭಾರತ ತಂಡವು ಸೂಪರ್-8 ಹಂತ ತಲುಪಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಕೆಲವು ವಿಚಿತ್ರ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಿಂದ ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟು ವಾಷಿಂಗ್ಟನ್ ಸುಂದರ್ ಅವರಿಗೆ ಮಣೆಹಾಕಿದ್ದರು. ಆದರೆ ಗಂಭೀರ್ ಅವರ ಈ ತಂತ್ರ ಸಂಪೂರ್ಣ ವಿಫಲವಾಯಿತು. ಸುಂದರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮ್ಯಾಜಿಕ್ ಮಾಡಲಿಲ್ಲ. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಂತರ ಅಕ್ಷರ್ ಪಟೇಲ್ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪಾಕಿಸ್ತಾನದ ಟಿವಿ ಶೋ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಬ್ಯಾಟರ್ ಅಹ್ಮದ್ ಶೆಹಜಾದ್, “ಗೌತಮ್ ಗಂಭೀರ್ ತಮ್ಮಲ್ಲಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕುಲದೀಪ್ ಯಾದವ್ ನಿಮ್ಮ ಮ್ಯಾಚ್ ವಿನ್ನರ್. ಅವರನ್ನು ತಂಡದಿಂದ ಏಕೆ ಹೊರಗಿಡಲಾಗಿದೆಯೋ ನನಗೆ ತಿಳಿದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್-ಕುಲದೀಪ್ ನಡುವಿನ ವೈಯಕ್ತಿಕ ದ್ವೇಷದ ಆರೋಪ
ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಗಂಭೀರ ಆರೋಪ ಮಾಡಿರುವ ಶೆಹಜಾದ್, “ಸೂರ್ಯಕುಮಾರ್ ತಂಡದ ಹಿತಾಸಕ್ತಿಗಿಂತ ವೈಯಕ್ತಿಕ ದ್ವೇಷಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ” ಎಂದಿದ್ದಾರೆ. ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಹಿಂದೆ ನಾಯಕನೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ (ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ) ನಡೆದಿದ್ದ ಘಟನೆಯೊಂದನ್ನು ಉಲ್ಲೇಖಿಸಿದ ಶೆಹಜಾದ್, “ಹಿಂದಿನ ಪಂದ್ಯದಲ್ಲಿ ಕುಲದೀಪ್ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ವಾಗ್ವಾದ ನಡೆದಿತ್ತು. ಆಗ ಸೂರ್ಯಕುಮಾರ್ ಅವರು ಕುಲದೀಪ್ ಅವರನ್ನು ತಳ್ಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ನಾಯಕನೊಂದಿಗಿನ ಈ ಭಿನ್ನಾಭಿಪ್ರಾಯದ ಕಾರಣಕ್ಕಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಜನ ಹೇಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. “ಅವರು ದೇಶದ ಬಗ್ಗೆ ಯೋಚಿಸಲಿಲ್ಲ, ವೈಯಕ್ತಿಕ ದ್ವೇಷಕ್ಕೆ ಆದ್ಯತೆ ನೀಡಿದರು. ಇಲ್ಲದಿದ್ದರೆ ವೈವಿಧ್ಯಮಯ ಬೌಲಿಂಗ್ ದಾಳಿ ನಡೆಸುವ ಕುಲದೀಪ್ ಅವರನ್ನು ಕೈಬಿಡುತ್ತಿರಲಿಲ್ಲ” ಎಂದು ಶೆಹಜಾದ್ ಟೀಕಿಸಿದ್ದಾರೆ.
ಕುಲದೀಪ್ ಯಾದವ್ ಭವಿಷ್ಯವೇನು?
ಮಾಜಿ ಟಿ20 ವಿಶ್ವಕಪ್ ವಿಜೇತ ಆಟಗಾರ ಕುಲದೀಪ್ ಯಾದವ್ ಬಗ್ಗೆ ಟೀಂ ಇಂಡಿಯಾದ ಯೋಜನೆಗಳೇನು ಎಂಬುದು ಕ್ರಿಕೆಟ್ ಪಂಡಿತರಿಗೂ ಅರ್ಥವಾಗುತ್ತಿಲ್ಲ. ಉಪಖಂಡದ ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ನಡೆಯುತ್ತಿರುವ ಈ ವಿಶ್ವಕಪ್ನಲ್ಲಿ ಅವರು ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಕೆರಿಬಿಯನ್ನಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಲದೀಪ್, ಆಡಿದ 5 ಪಂದ್ಯಗಳಿಂದ 10 ವಿಕೆಟ್ಗಳನ್ನು ಕಬಳಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣಕ್ಕೆ ಅವರನ್ನು ವಿಶ್ವಕಪ್ಗೂ ಮುನ್ನ ಕಡೆಗಣಿಸಲಾಗಿತ್ತು. ಆದರೆ, ಪ್ರಮುಖ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟ ನಿರ್ಧಾರ ಮಾತ್ರ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ | ಧಾರವಾಡದಲ್ಲಿ ಬೀದಿಗಿಳಿದು ಯುವಜನತೆ ಪ್ರೊಟೆಸ್ಟ್



















