ಲಕ್ನೋ : 2025-26ರ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಪ್ರಮುಖ ಬ್ಯಾಟರ್ ದೇವದತ್ ಪಡಿಕ್ಕಲ್ ಗಾಯಗೊಂಡಿದ್ದಾರೆ. ಉತ್ತರಾಖಂಡ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಈ ಘಟನೆ ನಡೆದಿದ್ದು, ಮುಂಬರುವ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಇದು ಆಘಾತ ತಂದಿದೆ.
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನದಾಟದ ವೇಳೆ (ಬುಧವಾರ, ಫೆ. 18) ಪಡಿಕ್ಕಲ್ ಗಾಯದ ಸಮಸ್ಯೆಗೆ ಸಿಲುಕಿದರು.
ಘಟನೆ ನಡೆದಿದ್ದು ಹೇಗೆ?
ಉತ್ತರಾಖಂಡ ತಂಡದ ಮೊದಲ ಇನಿಂಗ್ಸ್ನ 75ನೇ ಓವರ್ನಲ್ಲಿ ಈ ಘಟನೆ ಸಂಭವಿಸಿದೆ. ವೇಗಿ ಪ್ರಸಿದ್ಧ್ ಕೃಷ್ಣ ಎಸೆದ ಎಸೆತವನ್ನು ಬ್ಯಾಟರ್ ಅಭಯ್ ನೇಗಿ ಡ್ರೈವ್ ಮಾಡಿದರು. ಈ ವೇಳೆ ಗಲ್ಲಿ (Gully) ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಡಿಕ್ಕಲ್, ಕ್ಯಾಚ್ ಹಿಡಿಯಲು ತಮ್ಮ ಬಲಕ್ಕೆ ಡೈವ್ ಮಾಡಿದರು. ಚೆಂಡು ಕೈಗೆ ಸಿಕ್ಕಿತಾದರೂ, ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಈ ಪ್ರಯತ್ನದಲ್ಲಿ ಅವರ ಕೈಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ನೋವಿನಿಂದ ನರಳಿದ ಪಡಿಕ್ಕಲ್ ತಕ್ಷಣವೇ ಮೈದಾನದಿಂದ ಹೊರನಡೆದರು.
ದ್ವಿಶತಕದ ಸರದಾರನಿಗೆ ಗಾಯದ ಬಿಸಿ
ಗಾಯಗೊಳ್ಳುವುದಕ್ಕೂ ಮುನ್ನ ಬ್ಯಾಟಿಂಗ್ನಲ್ಲಿ ಪಡಿಕ್ಕಲ್ ಅಬ್ಬರಿಸಿದ್ದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅವರು, ತಮ್ಮ ವೃತ್ತಿಜೀವನದ ಶ್ರೇಷ್ಠ ಆಟ ಪ್ರದರ್ಶಿಸಿ 330 ಎಸೆತಗಳಲ್ಲಿ 232 ರನ್ (29 ಬೌಂಡರಿ, 3 ಸಿಕ್ಸರ್) ಬಾರಿಸಿದ್ದರು. ಅವರ ಈ ಅಮೋಘ ದ್ವಿಶತಕದ ನೆರವಿನಿಂದ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 736 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಆದರೆ, ಗಾಯದ ಕಾರಣದಿಂದಾಗಿ ಕರ್ನಾಟಕದ ಎರಡನೇ ಇನಿಂಗ್ಸ್ನಲ್ಲಿ ಪಡಿಕ್ಕಲ್ ಬ್ಯಾಟಿಂಗ್ಗೆ ಇಳಿಯಲಿಲ್ಲ. ಅವರ ಬದಲಿಗೆ ಶ್ರೇಯಸ್ ಗೋಪಾಲ್ 3ನೇ ಕ್ರಮಾಂಕದಲ್ಲಿ ಆಡಲು ಬಂದರು. ಐಪಿಎಲ್ ಹತ್ತಿರ ಬರುತ್ತಿರುವಾಗ ಪಡಿಕ್ಕಲ್ ಅವರ ಗಾಯದ ಸ್ವರೂಪ ಎಷ್ಟಿದೆ ಎಂಬುದು ಆರ್ಸಿಬಿ ತಂಡದ ಚಿಂತೆ ಹೆಚ್ಚಿಸಿದೆ.
ಫೈನಲ್ನತ್ತ ಕರ್ನಾಟಕ
ಕರ್ನಾಟಕದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಉತ್ತರಾಖಂಡ ಕೇವಲ 233 ರನ್ಗಳಿಗೆ ಆಲೌಟ್ ಆಯಿತು. ವಿದ್ಯಾಧರ್ ಪಾಟೀಲ್ ಮತ್ತು ವೈಶಾಖ್ ವಿಜಯ್ಕುಮಾರ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಎದುರಾಳಿ ಮೇಲೆ ಫಾಲೋ-ಆನ್ ಹೇರುವ ಅವಕಾಶವಿದ್ದರೂ, ಕರ್ನಾಟಕ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಒಟ್ಟಾರೆ 542 ರನ್ಗಳ ಮುನ್ನಡೆ ಸಾಧಿಸಿರುವ ಕರ್ನಾಟಕ, ರಣಜಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರ ತಂಡ ಬಂಗಾಳವನ್ನು ಮಣಿಸಿ ಇದೇ ಮೊದಲ ಬಾರಿಗೆ ರಣಜಿ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸಿದೆ.
ಇದನ್ನೂ ಓದಿ : ವೃದ್ದೆಯ ಹ*ತ್ಯೆಗೈದು, ಚಿನ್ನ ದೋಚಿದ್ದ ಕೇಸ್ | ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು



















