ನವದೆಹಲಿ : ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಹೀನಾಯ ಸೋಲಿನ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, ಕೇವಲ 24 ಗಂಟೆಗಳಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಪಿಸಿಬಿ ಅಧ್ಯಕ್ಷರನ್ನು ‘ಅಸಮರ್ಥ’ ಎಂದು ಕರೆದಿದ್ದ ಅಖ್ತರ್, ಈಗ ನಖ್ವಿ ಒಬ್ಬ “ಒಳ್ಳೆಯ ಮನುಷ್ಯ” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 61 ರನ್ಗಳ ಸೋಲು ಕಂಡಿತ್ತು. ಈ ಸೋಲಿನ ಆಘಾತದ ನಂತರ ಅಖ್ತರ್, ಕ್ರಿಕೆಟ್ ಮಂಡಳಿಯ ಆಡಳಿತದ ಬಗ್ಗೆ ಕೆಂಡಾಮಂಡಲವಾಗಿದ್ದರು. ಅವರ ಈ ಆಕ್ರೋಶದ ಮಾತುಗಳು ಪಿಸಿಬಿ ಅಧ್ಯಕ್ಷ ನಖ್ವಿ ಅವರನ್ನು ಗುರಿಯಾಗಿಸಿಕೊಂಡೇ ಆಡಿದ್ದು ಎಂದು ವ್ಯಾಪಕವಾಗಿ ಅರ್ಥೈಸಲಾಗಿತ್ತು.
ನನ್ನ ಮಾತು ತಿರುಚಲಾಗಿದೆ: ಅಖ್ತರ್ ಸ್ಪಷ್ಟನೆ
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾವಲ್ಪಿಂಡಿ ಎಕ್ಸ್ಪ್ರೆಸ್, ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. “ನನ್ನ ಟೀಕೆಗಳು ಎಂದಿಗೂ ಮೊಹ್ಸಿನ್ ನಖ್ವಿ ಅವರನ್ನು ಉದ್ದೇಶಿಸಿರಲಿಲ್ಲ. ‘ಅಸಮರ್ಥರು’ ಎಂಬ ಪದವನ್ನು ನಾನು ಅಂತರರಾಷ್ಟ್ರೀಯ ಕ್ರಿಕೆಟ್ ನಡೆಸುವ ಉನ್ನತ ಅಧಿಕಾರಿಗಳ ವರ್ಗಕ್ಕೆ ಬಳಸಿದ್ದೆ. ಆದರೆ, ಕೆಲವು ಭಾರತೀಯ ಟಿವಿ ಚಾನೆಲ್ಗಳು ನನ್ನ ಮಾತನ್ನು ತಿರುಚಿವೆ,” ಎಂದು ಆರೋಪಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನಾನು ಅದೇ ಕಾರ್ಯಕ್ರಮದಲ್ಲಿ ಮೊಹ್ಸಿನ್ ಭಾಯ್ ಬಗ್ಗೆ ಯಾರೂ ನಕಾರಾತ್ಮಕವಾಗಿ ಮಾತನಾಡಬಾರದು ಎಂದು ಹೇಳಿದ್ದೆ. ಅವರು ಪಾಕಿಸ್ತಾನ ಕ್ರಿಕೆಟ್ಗೆ ಒಳ್ಳೆಯದನ್ನು ಮಾಡಲು ಬಯಸುವ ಉತ್ತಮ ವ್ಯಕ್ತಿ. ಆದರೆ ಅವರಿಗೆ ಸರಿಯಾದ ಸಲಹೆಗಳು ಸಿಗುತ್ತಿಲ್ಲವಷ್ಟೇ,” ಎಂದು ನಖ್ವಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ವಿವಾದಗಳ ಕೇಂದ್ರಬಿಂದು ನಖ್ವಿ
ಮೊಹ್ಸಿನ್ ನಖ್ವಿ ಪಿಸಿಬಿ ಅಧ್ಯಕ್ಷರಾದಾಗಿನಿಂದಲೂ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕಿದ್ದಾರೆ. ಏಷ್ಯಾ ಕಪ್ ಟ್ರೋಫಿ ವಿವಾದವಾಗಲಿ ಅಥವಾ ಟಿ20 ವಿಶ್ವಕಪ್ಗೂ ಮುನ್ನ ಭಾರತದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯಾಗಲಿ, ಅವರ ನಡೆಗಳು ಕ್ರೀಡೆಗಿಂತ ಹೆಚ್ಚಾಗಿ ರಾಜಕೀಯ ಕಾರಣಗಳಿಗೆ ಸುದ್ದಿಯಾಗಿದ್ದವು.
ಇದೀಗ ಮೈದಾನದಲ್ಲಿ ಭಾರತದ ವಿರುದ್ಧ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕ್ ತಂಡದ ಕಳಪೆ ಪ್ರದರ್ಶನವು ಆಡಳಿತ ಮಂಡಳಿಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಈ ಸೋಲಿನೊಂದಿಗೆ ಟಿ20 ವಿಶ್ವಕಪ್ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸೋಲಿನ ಅಂತರ 8-1ಕ್ಕೆ ಏರಿಕೆಯಾಗಿದೆ. ಸದ್ಯ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಉಳಿಯಬೇಕಾದರೆ ನಮೀಬಿಯಾ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಇದನ್ನೂ ಓದಿ : ಕೋಲಾರದಲ್ಲಿ ದೇಶದ ಮೊದಲ ಟಾಟಾ ಏರ್ಬಸ್ ಮಿನಿ ಹೆಲಿಕಾಪ್ಟರ್ ತಯಾರಿಕ ಘಟಕ | ಇಂದು ಪ್ರಧಾನಿ ಮೋದಿಯಿಂದ ಚಾಲನೆ



















