ಚಿತ್ರದುರ್ಗ : ಚಿತ್ರದುರ್ಗದ ಲಕ್ಷ್ಮೀಸಾಗರ ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಹಾಕಿದ್ದು, ಸ್ಥಳೀಯ ರೈತ ಧನಂಜಯಪ್ಪಗೆ ಸೇರಿದ ಲಕ್ಷಾಂತರ ರೂ. ಮೌಲ್ಯದ ಸುಮಾರು 22 ಲೋಡ್ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ದೌಡಾಯಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೆಕ್ಕೆಜೋಳವನ್ನು ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಸುಟ್ಟಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಮ್ಮ ಪರಿಶ್ರಮದ ಫಲ ಹಾಳಾಗಿರುವುದು ಕಂಡು ದುಃಖಿತರಾಗಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಘಟನೆಯಿಂದ ರೈತರು ಮತ್ತು ಗ್ರಾಮಸ್ಥರು ತಮ್ಮ ಬೆಳೆ ಸಂಗ್ರಹದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೊಲಂಬೊದಲ್ಲಿ ಇಂಡೊ-ಪಾಕ್ ಹೈವೋಲ್ಟೇಜ್ ಕದನ.. ಮಳೆ ಭೀತಿ ನಡುವೆ ಸ್ಪಿನ್ ಪಿಚ್ ಸವಾಲು!



















