ಮುಂಬೈ : ಕ್ರಿಕೆಟ್ ಮೈದಾನದಲ್ಲಿ ಚೆಂಡನ್ನು ಸ್ಪಿನ್ ಮಾಡದಿದ್ದರೆ, ಇಟಲಿಯ ಟಸ್ಕನಿಯ ಹೋಟೆಲ್ ಒಂದರಲ್ಲಿ ಪಿಜ್ಜಾ ಹಿಟ್ಟನ್ನು ತಿರುಗಿಸುತ್ತಿರುತ್ತಿದ್ದ ಕ್ರಿಶನ್ ಕಲುಗಮಗೆ (Crishan Kalugamage), ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ವೃತ್ತಿಯಲ್ಲಿ ಪಿಜ್ಜಾ ತಯಾರಕರಾಗಿರುವ (Pizza Maker) ಈ ಲೆಗ್ ಸ್ಪಿನ್ನರ್, ತಮ್ಮ ಸ್ಪಿನ್ ಮೋಡಿಯ ಮೂಲಕ ನೇಪಾಳ ತಂಡವನ್ನು ಕಟ್ಟಿಹಾಕಿ ಇಟಲಿ ತಂಡಕ್ಕೆ ಟಿ20 ವಿಶ್ವಕಪ್ ಇತಿಹಾಸದ ಚೊಚ್ಚಲ ಜಯ ತಂದುಕೊಟ್ಟಿದ್ದಾರೆ.
ವಾಂಖೆಡೆಯಲ್ಲಿ ಪಿಜ್ಜಾ ಮೇಕರ್ ಕಮಾಲ್
ಇಟಲಿ ತಂಡದ ಬಹುತೇಕ ಆಟಗಾರರು ವೃತ್ತಿಪರ ಕ್ರಿಕೆಟಿಗರಲ್ಲ. ಜೀವನ ನಿರ್ವಹಣೆಗಾಗಿ ಬೇರೆ ಉದ್ಯೋಗಗಳನ್ನು ಮಾಡುತ್ತಲೇ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಉಳಿಸಿಕೊಂಡವರು. ಇದಕ್ಕೆ ಸಾಕ್ಷಿ ಎಂಬಂತೆ, ಗುರುವಾರ ನಡೆದ ಪಂದ್ಯದಲ್ಲಿ ನೇಪಾಳದ ವಿರುದ್ಧ ಕಲುಗಮಗೆ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಇವರ ಈ ಕರಾರುವಾಕ್ ದಾಳಿಗೆ ನಲುಗಿದ ನೇಪಾಳ 123 ರನ್ಗಳಿಗೆ ಸೀಮಿತವಾಯಿತು. ಬಳಿಕ ಮೊಸ್ಕಾ ಸಹೋದರರಾದ ಜಸ್ಟಿನ್ ಮತ್ತು ಆಂಥೋನಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ, ತಂಡಕ್ಕೆ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
“ಹಿಟ್ಟು ತಿರುಗಿಸುವ ಕೈಗಳು ಚೆಂಡನ್ನೂ ಸ್ಪಿನ್ ಮಾಡುತ್ತವೆ!”
ಪಂದ್ಯದ ನಂತರ ಮಾತನಾಡಿದ ಇಟಲಿ ನಾಯಕ ಹ್ಯಾರಿ ಮನೆಂಟಿ, “ನಮ್ಮ ತಂಡದ 15 ಆಟಗಾರರ ಪೈಕಿ 12 ಮಂದಿ ಕ್ರಿಕೆಟ್ ಹೊರತಾಗಿ ಜೀವನಕ್ಕಾಗಿ ಬೇರೆ ಕೆಲಸ ಮಾಡುತ್ತಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಶನ್, ಜೀವನ ನಿರ್ವಹಣೆಗಾಗಿ ಪಿಜ್ಜಾ ತಯಾರಿಸುತ್ತಾರೆ,” ಎಂದು ಭಾವುಕರಾಗಿ ಹೇಳಿದರು.
ಪಕ್ಕದಲ್ಲೇ ಇದ್ದ ಕೋಚ್ ಜಾನ್ ಡೇವಿಸನ್, “ಅವರು ಪಿಜ್ಜಾ ಹಿಟ್ಟನ್ನು ಚೆನ್ನಾಗಿ ತಿರುಗಿಸುವುದರಿಂದಲೇ (Spin), ಮೈದಾನದಲ್ಲಿ ಚೆಂಡನ್ನು ಕೂಡ ಅಷ್ಟೇ ಚೆನ್ನಾಗಿ ಸ್ಪಿನ್ ಮಾಡುತ್ತಾರೆ,” ಎಂದು ತಮಾಷೆಯಾಗಿ ಇವರ ಕೌಶಲ್ಯವನ್ನು ಹೊಗಳಿದರು.
ಶ್ರೀಲಂಕಾದಿಂದ ಇಟಲಿಗೆ: ಕಠಿಣ ಹಾದಿ
ಕ್ರಿಶನ್ ಕಲುಗಮಗೆ ಅವರ ಕ್ರಿಕೆಟ್ ಪಯಣ ಸುಲಭವಾಗಿರಲಿಲ್ಲ. ಮೂಲತಃ ಶ್ರೀಲಂಕಾದ ನೆಗೊಂಬೊದವರಾದ ಇವರು, ಅರವಿಂದ ಡಿ ಸಿಲ್ವಾ ಅವರನ್ನು ನೋಡಿ ಬೆಳೆದವರು. 2007ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಪೋಷಕರೊಂದಿಗೆ ಇಟಲಿಗೆ ವಲಸೆ ಹೋದಾಗ ಅವರ ಕ್ರಿಕೆಟ್ ಕನಸು ಕಮರಿಹೋಗುವ ಆತಂಕ ಎದುರಾಗಿತ್ತು. ಫುಟ್ಬಾಲ್ ರಾಷ್ಟ್ರವಾದ ಇಟಲಿಯಲ್ಲಿ ಕ್ರಿಕೆಟ್ ಆಡುವುದು ಸವಾಲಾಗಿತ್ತು. ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುತ್ತಿದ್ದ ಅವರು, ಭಾನುವಾರ ಪಂದ್ಯ ಆಡಲು ರಜೆ ಕೇಳಿದ್ದಕ್ಕಾಗಿ ಹಲವು ಕೆಲಸಗಳನ್ನು ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಪಾರ್ಕಿಂಗ್ ಲಾಟ್ಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಾ ತಮ್ಮ ಕನಸನ್ನು ಜೀವಂತವಾಗಿರಿಸಿಕೊಂಡರು.
ಆರಂಭದಲ್ಲಿ ವೇಗದ ಬೌಲರ್ ಆಗಿದ್ದ ಕ್ರಿಶನ್, ಗಾಯದ ಸಮಸ್ಯೆಯಿಂದಾಗಿ 2021ರಲ್ಲಿ ಸ್ಪಿನ್ ಬೌಲಿಂಗ್ಗೆ ಬದಲಾದರು. ಈಗ ಅದೇ ಸ್ಪಿನ್ ಅಸ್ತ್ರವು ಇಟಲಿಗೆ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದೆ.
ಇಟಲಿ ಕ್ರಿಕೆಟ್ಗೆ ಹೊಸ ಭರವಸೆ
“ಫುಟ್ಬಾಲ್ ಹುಚ್ಚಿರುವ ನಮ್ಮ ದೇಶದಲ್ಲಿ ಈ ಗೆಲುವು ಕ್ರಿಕೆಟ್ ಉಳಿವಿಗೆ ಸಂಜೀವಿನಿಯಾಗಬಹುದು. ಮುಂದಿನ ದಿನಗಳಲ್ಲಿ ನಮ್ಮ ಆಟಗಾರರು ಪಿಜ್ಜಾ ತಯಾರಿಸುವುದನ್ನೋ ಅಥವಾ ಇನ್ಯಾವುದೋ ಕೆಲಸವನ್ನೋ ಬಿಟ್ಟು, ಪೂರ್ಣಪ್ರಮಾಣದ ಕ್ರಿಕೆಟಿಗರಾಗಿ ಬದುಕುವಂತಾಗಬೇಕು,” ಎಂದು ನಾಯಕ ಮನೆಂಟಿ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕುರ್ಚಿ ಕದನದ ಮಧ್ಯೆ ಸಿದ್ದು-ಡಿಕೆ ಮೌನ.. ಮೌನ | ಅಕ್ಕಪಕ್ಕ ಕೂತರೂ ಮಾತಾಡದ ಸಿಎಂ-ಡಿಸಿಎಂ!



















