ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025-26ನೇ ಸಾಲಿನ ಟೀಮ್ ಇಂಡಿಯಾ ಹಿರಿಯ ಪುರುಷರ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಈ ಬಾರಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಗ್ರೇಡ್ ಪಟ್ಟಿಯಲ್ಲಿ ಹಿಂಬಡ್ತಿ ನೀಡಲಾಗಿದೆ. ಅದೇ ಸಮಯದಲ್ಲಿ, ತಂಡದ ಯುವ ನಾಯಕ ಶುಭಮನ್ ಗಿಲ್ ಅವರಿಗೆ ಬಡ್ತಿ ನೀಡುವ ಮೂಲಕ ಅವರ ನಾಯಕತ್ವ ಮತ್ತು ಪ್ರದರ್ಶನಕ್ಕೆ ಮನ್ನಣೆ ನೀಡಲಾಗಿದೆ.

ಬಿಸಿಸಿಐ ಈ ಬಾರಿ ಗುತ್ತಿಗೆ ವ್ಯವಸ್ಥೆಯನ್ನು ಪುನರ್ರಚಿಸಿದ್ದು, ಅತ್ಯುನ್ನತವಾಗಿದ್ದ ‘ಎ+’ (A+) ಶ್ರೇಣಿಯನ್ನು ರದ್ದುಗೊಳಿಸಿದೆ. ಹೀಗಾಗಿ ಪರಿಷ್ಕೃತ ಪಟ್ಟಿಯಲ್ಲಿ ‘ಎ’ (Grade A) ಶ್ರೇಣಿಯೇ ಅತ್ಯುನ್ನತ ಮಟ್ಟವಾಗಿದೆ. ಅಕ್ಟೋಬರ್ 1, 2026 ರಿಂದ ಸೆಪ್ಟೆಂಬರ್ 30, 2026 ರವರೆಗೆ ಈ ಗುತ್ತಿಗೆ ಅವಧಿ ಜಾರಿಯಲ್ಲಿರುತ್ತದೆ.
ದಿಗ್ಗಜರಿಗೆ ಹಿನ್ನಡೆ, ಯುವ ನಾಯಕನಿಗೆ ಬಡ್ತಿ
ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಈ ಹಿಂದೆ ಅತ್ಯುನ್ನತ ‘ಎ+’ ಶ್ರೇಣಿಯಲ್ಲಿದ್ದರು. ಆದರೆ, ಟೆಸ್ಟ್ ಮತ್ತು ಟಿ೨೦ ಸ್ವರೂಪಗಳಿಂದ ನಿವೃತ್ತರಾಗಿರುವ ಇವರು ಪ್ರಸ್ತುತ ಕೇವಲ ಏಕದಿನ (ODI) ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ, ನಿಯಮಾವಳಿಗಳ ಪ್ರಕಾರ ಇವರಿಬ್ಬರನ್ನು ‘ಬಿ’ ಗ್ರೇಡ್ಗೆ (Grade B) ಇಳಿಸಲಾಗಿದೆ.
ಮತ್ತೊಂದೆಡೆ, ಟೀಮ್ ಇಂಡಿಯಾದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಅವರು ‘ಬಿ’ ಗ್ರೇಡ್ನಿಂದ ‘ಎ’ ಗ್ರೇಡ್ಗೆ ನೆಗೆದಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರೊಂದಿಗೆ ಗಿಲ್, ಬಿಸಿಸಿಐನ ಅತ್ಯುನ್ನತ ಗುತ್ತಿಗೆ ಪಡೆದ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಪ್ರಮುಖಾಂಶಗಳು:
- ಗ್ರೇಡ್ ಎ (ಅತ್ಯುನ್ನತ): ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.
- ಗ್ರೇಡ್ ಬಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ (ಟಿ೨೦ ನಾಯಕ), ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್.
- ಶ್ರೇಯಸ್ ಅಯ್ಯರ್ ವಾಪಸಾತಿ: ಕಳೆದ ಬಾರಿ ಗುತ್ತಿಗೆ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್, ದೇಶೀಯ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿನ ಉತ್ತಮ ಪ್ರದರ್ಶನದ ನಂತರ ‘ಬಿ’ ಗ್ರೇಡ್ಗೆ ಮರಳಿದ್ದಾರೆ.
- ಶಮಿ ಮತ್ತು ಇಶಾನ್ಗೆ ಶಾಕ್: 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ, ಇಶಾನ್ ಕಿಶನ್ ಅವರಿಗೂ ಯಾವುದೇ ಗ್ರೇಡ್ನಲ್ಲಿ ಸ್ಥಾನ ಸಿಕ್ಕಿಲ್ಲದಿರುವುದು ಅಚ್ಚರಿ ಮೂಡಿಸಿದೆ.
‘ಸಿ’ ಗ್ರೇಡ್ನಲ್ಲಿ ಯುವ ಪಡೆಯ ದರ್ಬಾರ್
‘ಸಿ’ ಗ್ರೇಡ್ ಪಟ್ಟಿಯಲ್ಲಿ ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ ಸೇರಿದಂತೆ ಒಟ್ಟು ೧೬ ಆಟಗಾರರಿದ್ದಾರೆ. ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಧ್ರುವ್ ಜುರೆಲ್ ಮತ್ತು ಅಭಿಷೇಕ್ ಶರ್ಮಾ ಅವರಿಗೂ ಮಂಡಳಿ ಗುತ್ತಿಗೆ ನೀಡಿದೆ. ಈ ಪರಿಷ್ಕೃತ ಪಟ್ಟಿಯು ಭಾರತೀಯ ಕ್ರಿಕೆಟ್ನಲ್ಲಿ ಬದಲಾಗುತ್ತಿರುವ ಪೀಳಿಗೆಯನ್ನು ಪ್ರತಿಬಿಂಬಿಸುತ್ತದೆ. ಮೂರೂ ಮಾದರಿಯಲ್ಲಿ ಆಡುವ ಆಟಗಾರರಿಗೆ ಹೆಚ್ಚಿನ ಮನ್ನಣೆ ಸಿಕ್ಕರೆ, ಕೇವಲ ಒಂದು ಮಾದರಿಗೆ ಸೀಮಿತವಾಗಿರುವ ಹಿರಿಯ ಆಟಗಾರರ ಸ್ಥಾನಮಾನದಲ್ಲಿ ಬದಲಾವಣೆಯಾಗಿದೆ.
ಇದನ್ನೂ ಓದಿ : ನಿವೃತ್ತ ಸೇನಾ ಮುಖ್ಯಸ್ಥ ನರವಣೆ ಪುಸ್ತಕ ವಿವಾದ | ಮೌನ ಮುರಿದ ಪೆಂಗ್ವಿನ್ ಪ್ರಕಾಶನ ಸಂಸ್ಥೆ



















