ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಂದ್ಯಗಳಿಗೆ ಅವಕಾಶ ನೀಡುವ ಸಂಬಂಧ ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ಆಯೋಜಿಸುವ ಕುರಿತು ಸದಾಶಿವನಗರ ನಿವಾಸದಲ್ಲಿಂದು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ನಿಯೋಗ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ”ಪಂದ್ಯಗಳಿಗೆ ಅವಕಾಶ ನೀಡುವ ಸಂಬಂಧ ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದೇವೆ. ಅಲ್ಲಿ ಇದರ ಬಗ್ಗ ಚರ್ಚೆ ಮಾಡುತ್ತೇವೆ. ನಮ್ಮ ಶಿಫಾರಸು ಎಷ್ಟರಮಟ್ಟಿಗೆ ಪೂರೈಸಿದ್ದಾರೆ ಎಂಬುದನ್ನು ನೋಡಿ ನಾವು ತೀರ್ಮಾನಿಸುತ್ತೇವೆ. ಬೆಂಗಳೂರಿನಲ್ಲಿ ಪಂದ್ಯ ನಡೆಯಬೇಕು ಎಂದು ಅಭಿಮಾನಿಗಳು ಬಯಸಿದ್ದಾರೆ. ಆದರೆ ಸುರಕ್ಷತೆಯನ್ನೂ ನೋಡಬೇಕು. ಕಾಲ್ತುಳಿತದಂತಹ ಘಟನೆ ಮರುಕಳಿಸಬಾರದು. ಎಲ್ಲವನ್ನೂ ನೋಡಿ ತೀರ್ಮಾನ ಮಾಡುತ್ತೇವೆ” ಎಂದರು.
”ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಸಮಿತಿಯು ಶಿಫಾರಸು ನೀಡಿತ್ತು. ಅದನ್ನು ಪಾಲಿಸಬೇಕು ಎಂದು ಹೇಳಿದ್ದೇವೆ. ಸರ್ಕಾರದಿಂದಲೂ ಜಿಬಿಎ, ಪೊಲೀಸ್ ಆಯುಕ್ತರ ಸಮಿತಿ ರಚಿಸಿದ್ದೆವು. ಆ ಸಮಿತಿಯು ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಮ್ಯಾಚ್ಗಳು ಬರುತ್ತಿವೆ. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕು, ಅವರಿಗೆ ಏನು ಸೂಚನೆ ಕೊಡಬೇಕು ಎಂಬುದರ ಬಗ್ಗೆ ಅಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಜೊತೆಗೂ ಚರ್ಚಿಸುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜನರಲ್ ನರವಾಣೆ ಅವರ ‘ಅಪ್ರಕಟಿತ’ ಪುಸ್ತಕ ರಾಹುಲ್ ಗಾಂಧಿಯ ಕೈಸೇರಿದ್ದು ಹೇಗೆ?


















