ಭೋಪಾಲ್(ಮಧ್ಯಪ್ರದೇಶ) : ಜೇನುನೊಣಗಳ ಭೀಕರ ದಾಳಿಯಂದ 20 ಮಕ್ಕಳನ್ನು ರಕ್ಷಿಸುವ ಸಲುವಾಗಿ ತನ್ನ ಪ್ರಾಣದ ಹಂಗನ್ನೇ ತೊರೆದು ಹೋರಾಡಿದ ಅಂಗನವಾಡಿ ಅಡುಗೆ ಸಹಾಯಕಿಯೊಬ್ಬರು, ಕೊನೆಗೆ ಜೇನ್ನೊಣಗಳ ದಾಳಿಗೆ ಬಲಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ರಣಪುರ ಗ್ರಾಮದ ಕಾಂಚನ್ ಬಾಯಿ ಮೇಘವಾಲ್ ಎಂಬವರೇ ಈ ಅಪ್ರತಿಮ ಸಾಹಸ ಮೆರೆದವರು. ಮಕ್ಕಳನ್ನು ರಕ್ಷಿಸುವ ಭರದಲ್ಲಿ ನೂರಾರು ಜೇನುನೊಣಗಳ ಕಡಿತಕ್ಕೆ ಒಳಗಾದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮದವಾಡ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಜೇನುನೊಣಗಳ ಹಿಂಡು ದಾಳಿ ನಡೆಸಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕಾಂಚನ್ ಬಾಯಿ, ತಕ್ಷಣವೇ ಅಲ್ಲಿದ್ದ ಟಾರ್ಪಾಲಿನ್ ಮತ್ತು ಚಾಪೆಗಳನ್ನು ಹಿಡಿದು ಮಕ್ಕಳತ್ತ ಓಡಿದ್ದಾರೆ. ಪ್ರತಿಯೊಬ್ಬ ಮಗುವನ್ನು ಚಾಪೆಗಳಲ್ಲಿ ಸುತ್ತಿ, ಜೇನುನೊಣಗಳು ಕಚ್ಚದಂತೆ ತನ್ನ ದೇಹವನ್ನೇ ಮಕ್ಕಳಿಗೆ ಕವಚವನ್ನಾಗಿ ಮಾಡಿಕೊಂಡು ಅವರನ್ನು ಸುರಕ್ಷಿತವಾಗಿ ಕೇಂದ್ರದ ಒಳಕ್ಕೆ ಸಾಗಿಸಿದ್ದಾರೆ. ಈ ಹಂತದಲ್ಲಿ ಜೇನುನೊಣಗಳು ಕಾಂಚನ್ ಬಾಯಿ ಅವರ ಮೇಲೆ ಮುಗಿಬಿದ್ದಿವೆ.
ಸಾವು ಗೆದ್ದರೂ ಸೋತ ಜೀವ
ಕೊನೆಯ ಮಗು ಸುರಕ್ಷಿತವಾಗಿ ಒಳಗೆ ತಲುಪುವವರೆಗೂ ಕಾಂಚನ್ ಬಾಯಿ ಹಿಂದೆ ಸರಿದಿರಲಿಲ್ಲ. ಅಷ್ಟರಲ್ಲಾಗಲೇ ನೂರಾರು ಜೇನುನೊಣಗಳು ಅವರ ಇಡೀ ದೇಹವನ್ನು ಚುಚ್ಚಿದ್ದವು. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಜೇನ್ನೊಣಗಳ ಕಡಿತದಿಂದ ಕಾಂಚನ್ ಬಾಯಿ ಅವರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅವರ ಮೃತದೇಹದ ಮೇಲೆ ಇದ್ದ ಅಸಂಖ್ಯಾತ ಜೇನು ಕಡಿತದ ಗುರುತುಗಳು ಅವರ ಧೈರ್ಯಕ್ಕೆ ಸಾಕ್ಷಿಯಾಗಿದ್ದವು.
ಕಾಂಚನ್ ಬಾಯಿ ಕೇವಲ ಅಡುಗೆ ಸಹಾಯಕಿಯಾಗಷ್ಟೇ ಅಲ್ಲದೆ, ‘ಜೈ ಮಾತಾ ದಿ’ ಸ್ವಸಹಾಯ ಸಂಘದ ಅಧ್ಯಕ್ಷೆಯೂ ಆಗಿದ್ದರು. ಅವರ ಪತಿ ಶಿವಲಾಲ್ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಕುಟುಂಬ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಕಾಂಚನ್ ಬಾಯಿ ಅವರ ಮೇಲಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಅವರು ಅಗಲಿದ್ದಾರೆ. ಮಂಗಳವಾರ ಅವರ ಶವಸಂಸ್ಕಾರದ ವೇಳೆ ಇಡೀ ಗ್ರಾಮವೇ ಮೌನವಾಗಿ ಕಣ್ಣೀರಿಡುತ್ತಾ ಅಂತಿಮ ನಮನ ಸಲ್ಲಿಸಿತು.
ದುರಂತ ಸಂಭವಿಸಿದ ಅಂಗನವಾಡಿ ಕೇಂದ್ರದ ಸಮೀಪದ ಮರವೊಂದರಲ್ಲಿ ಇನ್ನೂ ಬೃಹತ್ ಜೇನುಗೂಡು ಇರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದೇ ಮರದ ಬಳಿ ಹಳ್ಳಿಯ ಏಕೈಕ ಕೈಪಂಪು ಇರುವುದರಿಂದ ಜನರು ನೀರು ತರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜೇನುಗೂಡನ್ನು ತೆರವುಗೊಳಿಸಬೇಕು ಮತ್ತು ಕಾಂಚನ್ ಬಾಯಿ ಅವರ ಬಡ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ | ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ.. ಎಷ್ಟು ಹೆಚ್ಚಳ?


















