ಬೀದರ್ : ಪೊಲೀಸ್ ಕಾನ್ಸ್ಟೇಬಲ್ ಪತಿ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುವುದಲ್ಲದೇ, ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆ ಹಾಕಿದ್ದಾನೆ ಎಂದು ಬೀದರ್ ಜಿಲ್ಲೆಯ ಔರಾದ್ನಲ್ಲಿ ಯುವತಿಯೋಬ್ಬರು ಆರೋಪಿಸಿದ್ದಾರೆ. ಚಿಟಗುಪ್ಪ ಮೂಲದ ಕಾನ್ಸ್ಟೇಬಲ್ ಮಚೇಂದ್ರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಸೀನಾ ಹೇಳಿದ್ದಾರೆ.
ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಣೆ ಪಿಸಿ ಆಗಿರುವ ಮಚೇಂದ್ರ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ವರದಕ್ಷಿಣೆ ಕೊಡದಿದರೆ ಅಕ್ಕನ ಮಗಳನ್ನ ಮದುವೆ ಆಗೋದಾಗಿ ಪತಿ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ. ಈ ಹಿಂದೆ ಔರಾದ್ ತಾಲೂಕಿನ ಚಿಂತಾಕಿ ಠಾಣೆಯಲ್ಲೂ ಎಫ್ಐಆರ್ ದಾಖಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಮಗೆ ರಕ್ಷಣೆ ನೀಡುವ ಜೊತೆಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಯುವತಿ ಆಗ್ರಹಿಸಿದ್ದಾರೆ.
2022ರ ಡಿಸೆಂಬರ್ 14ರಂದು ಮಚೇಂದ್ರ, ಸೀನಾ ಮದುವೆ ಆಗಿತ್ತು. ಆರಂಭದಲ್ಲಿ ದಂಪತಿ ಬೆಂಗಳೂರಿನಲ್ಲಿ ಸುಖವಾಗಿಯೇ ಇದ್ದರು. ನಂತರ ಹುಷಾರಿಲ್ಲ ಎಂದು ಪತ್ನಿಯನ್ನ ಮಚೇಂದ್ರ ತವರು ಮನೆಗೆ ಬಿಟ್ಟಿದ್ದ. ಬಳಿಕ 15 ತಿಂಗಳು ಕಳೆದರೂ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಕ್ಕಳು ಆಗಿಲ್ಲ, ಹೀಗಾಗಿ ತನೆಗೆ ವರದಕ್ಷಿಣೆ ನೀಡುವಂತೆ ಆತ ಬೇಡಿಕೆ ಇಟ್ಟಿದ್ದಾನೆ. ಈಗಾಗಲೇ 30 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೇವೆ. ಆ ಸಾಲವೇ ನಮಗೆ ತೀರಿಸಲಾಗಿಲ್ಲ ಈಗ ಮತ್ತೆ ವರದಕ್ಷಿಣೆ ಕೋಡುವುದು ಹೇಗೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ‘ಟಾಕ್ಸಿಕ್’ ಟೀಸರ್ನಲ್ಲಿ ಅಶ್ಲೀಲ ಕಂಟೆಂಟ್ | ಚಿತ್ರದ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು!



















