ನವದೆಹಲಿ: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರಿಗೆ ಸದ್ಯ ಸುಗ್ಗಿ ಕಾಲ. ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2026ರ ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ, ಈಗ ಅವರಿಗೆ ಜಾರ್ಖಂಡ್ ತಂಡದ ನಾಯಕತ್ವದ ಜವಾಬ್ದಾರಿಯನ್ನೂ ನೀಡಲಾಗಿದೆ. ಮುಂಬರುವ ವಿಜಯ್ ಹಜಾರೆ ಟ್ರೋಫಿ (VHT) ಏಕದಿನ ಟೂರ್ನಿಯಲ್ಲಿ ಅವರು ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಡಿಸೆಂಬರ್ 24ರ ಬುಧವಾರದಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಯುವ ಪ್ರತಿಭೆ ಕುಮಾರ್ ಕುಶಾಗ್ರ ಅವರು ಕಿಶನ್ ಅವರಿಗೆ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.
ಮೊದಲ ಪಂದ್ಯದಲ್ಲೇ ಕರ್ನಾಟಕಕ್ಕೆ ಸವಾಲು!
ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡವು ತನ್ನ ಮೊದಲ ಪಂದ್ಯವನ್ನು ಬಲಿಷ್ಠ ಕರ್ನಾಟಕ ತಂಡದ ವಿರುದ್ಧ ಅಹಮದಾಬಾದ್ನಲ್ಲಿ ಆಡಲಿದೆ. ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಗೆದ್ದು ಬೀಗುತ್ತಿರುವ ಜಾರ್ಖಂಡ್, ಈಗ ಏಕದಿನ ಮಾದರಿಯಲ್ಲೂ ತನ್ನ ಪ್ರಾಬಲ್ಯ ಮುಂದುವರಿಸುವ ಗುರಿ ಹೊಂದಿದೆ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ 27 ವರ್ಷದ ಕಿಶನ್, ದೇಶೀಯ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
SMAT ಸಾಧನೆ: ಟೂರ್ನಿಯಲ್ಲಿ 11 ಪಂದ್ಯಗಳಿಂದ 517 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಸ್ಫೋಟಕ ಬ್ಯಾಟಿಂಗ್: 197.32ರ ಸ್ಟ್ರೈಕ್ ರೇಟ್ ಹಾಗೂ 57.44ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.
ಫೈನಲ್ ಹೀರೋ: ಹರಿಯಾಣ ವಿರುದ್ಧದ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಕಿರೀಟ ತೊಡಿಸಿದ್ದರು.
ಈ ಭರ್ಜರಿ ಫಾರ್ಮ್ ನೋಡಿ ಆಯ್ಕೆಗಾರರು ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು, ಕಿಶನ್ ಅವರಿಗೆ ವಿಶ್ವಕಪ್ ಟಿಕೆಟ್ ನೀಡಿದ್ದಾರೆ. “ಅವರು ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ ಮತ್ತು ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅನುಭವವೂ ಅವರಿಗಿದೆ,” ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಜಾರ್ಖಂಡ್ ತಂಡದ ಬಲಿಷ್ಠ ಪಡೆ:
ಇಶಾನ್ ಕಿಶನ್ (ನಾಯಕ), ವಿರಾಟ್ ಸಿಂಗ್, ಉತ್ಕರ್ಷ್ ಸಿಂಗ್, ಕುಮಾರ್ ಕುಶಾಗ್ರ (ಉಪನಾಯಕ), ರಾಬಿನ್ ಮಿಂಜ್, ಅನುಕುಲ್ ರಾಯ್, ಶರಣ್ದೀಪ್ ಸಿಂಗ್, ಶಿಖರ್ ಮೋಹನ್, ಪಂಕಜ್ ಕುಮಾರ್, ಬಾಲ ಕೃಷ್ಣ, ಎಂಡಿ ಕೌನೈನ್ ಖುರೈಶಿ, ಶುಭ್ ಶರ್ಮಾ, ಅಮಿತ್ ಕುಮಾರ್, ಮನೀಶಿ, ಅಭಿನವ್ ಶರಣ್, ಸುಶಾಂತ್ ಮಿಶ್ರಾ, ವಿಕಾಸ್ ಸಿಂಗ್, ಸೌರಭ್ ಶೇಖರ್, ರಾಜದೀಪ್ ಸಿಂಗ್, ಶುಭಂ ಸಿಂಗ್.
ವಿಜಯ್ ಹಜಾರೆ ಟ್ರೋಫಿಯ ಆರಂಭಿಕ ಕೆಲವು ಪಂದ್ಯಗಳನ್ನು ಆಡಿದ ನಂತರ, ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇದು ವಿಶ್ವಕಪ್ಗೆ ಮುನ್ನ ಭಾರತ ಆಡಲಿರುವ ಕೊನೆಯ ಸರಣಿಯಾಗಿದೆ.
ಇದನ್ನೂ ಓದಿ: ಕರ್ನಾಟಕದ ‘ಮ್ಯಾಜಿಕ್’ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಕ್ರಿಕೆಟ್ಗೆ ವಿದಾಯ



















