ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯ ದಟ್ಟವಾದ ಮಂಜು ಕವಿದ ಕಾರಣ ರದ್ದಾಯಿತು. ಇದರಿಂದಾಗಿ ಉಭಯ ತಂಡಗಳ ನಡುವಿನ ಈ ಸರಣಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ.
ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿರಿಸುವ ಟೀಂ ಇಂಡಿಯಾ ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲು ನೋಡುತ್ತಿದ್ದರೆ, ಇತ್ತ ಸರಣಿ ಸೋಲಿನ ಆತಂಕದಲ್ಲಿರುವ ದಕ್ಷಿಣ ಆಫ್ರಿಕಾ ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸುವ ಇರಾದೆಯಲ್ಲಿದೆ.
ನಾಲ್ಕನೇ ಟಿ20ಐ ಪಂದ್ಯದ ನಿಮಿತ್ತ ಅಭ್ಯಾಸ ನಡೆಸುತ್ತಿದ್ದ ವೇಳೆ ಶುಭಮನ್ ಗಿಲ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಐದನೇ ಪಂದ್ಯಕ್ಕೂ ಅವರು ಲಭ್ಯರಾಗುವುದು ಬಹುತೇಕ ಅನುಮಾನ. ಹಾಗಾಗಿ ಸಂಜು ಸ್ಯಾಮ್ಸನ್ ಅವರು, ಅಭಿಷೇಕ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಬಹುದು. ಮತ್ತೊಂದು ಕಡೆ ಜಸ್ಪ್ರೀತ್ ಬುಮ್ರಾ ಕೂಡ ಲಭ್ಯರಾಗುವುದು ಅನುಮಾನ. ಹಾಗಾಗಿ ನಾಯಕ ಸೂರ್ಯಕುಮಾರ್ ಯಾದವ್ ಬೆಂಚ್ ಕಾಯುತ್ತಿರುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
ಐದನೇ ಟಿ20ಐ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಅವರು ವೈಯಕ್ತಿಕ ಕಾರಣಗಳಿಂದ ಮೂರನೇ ಟಿ20ಐ ಪಂದ್ಯಕ್ಕೆ ಅಲಭ್ಯರಾಗಿದ್ದರು. ನಾಲ್ಕನೇ ಟಿ20ಐ ಪಂದ್ಯದಲ್ಲಿ ಆಡುವ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಇವರಿಗೆ ಆಲ್ರೌಂಡರ್ಗಳಾದ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದರು. ಭಾರತ ತಂಡ ಅದೇ ಪ್ಲೇಯಿಂಗ್ XIನಲ್ಲಿ ಅದೇ ವೇಗದ ಬೌಲಿಂಗ್ ವಿಭಾಗವನ್ನು ಉಳಿಸಿಕೊಂಡರೂ ಯಾವುದೇ ಅಚ್ಚರಿ ಇಲ್ಲ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಅಭಿಷೇಕ್ ಶರ್ಮಾ (ಓಪನರ್)
2.ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್, ಓಪನರ್)
3.ತಿಲಕ್ ವರ್ಮಾ (ಬ್ಯಾಟ್ಸ್ಮನ್)
4.ಸೂರ್ಯಕುಮಾರ್ ಯಾದವ್ (ನಾಯಕ, ಬ್ಯಾಟ್ಸ್ಮನ್)
5.ಹಾರ್ದಿಕ್ ಪಾಂಡ್ಯ (ಆಲ್ರೌಂಡರ್)
6.ಶಿವಂ ದುಬೆ (ಆಲ್ರೌಂಡರ್)
7.ಜಿತೇಶ್ ಶರ್ಮಾ (ವಿಕೆಟ್ ಕೀಪರ್/ಬ್ಯಾಟ್ಸ್ಮನ್)
8.ಹರ್ಷಿತ್ ರಾಣಾ (ವೇಗದ ಬೌಲರ್)
9.ಅರ್ಷದೀಪ್ ಸಿಂಗ್ (ವೇಗದ ಬೌಲರ್)
10.ಕುಲ್ದೀಪ್ ಯಾದವ್ (ಸ್ಪಿನ್ನರ್)
11.ವರುಣ್ ಚಕ್ರವರ್ತಿ (ಸ್ಪಿನ್ನರ್)
ಇದನ್ನೂ ಓದಿ : ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ಸಾವು



















