ಮೊದಲ ದಿನವೇ ರಜತ್ ಮತ್ತು ಉಗ್ರಂ ಮಂಜು ಅವರಿಂದ ಖಡಕ್ ವಾರ್ನಿಂಗ್ ಅನ್ನು ಗಿಲ್ಲಿ ನಟ ಪಡೆದುಕೊಂಡಿದ್ದರು. ಮದುವೆ ಬಗ್ಗೆ ತಮಾಷೆ ಮಾಡಿದ್ದಕ್ಕೆ ಉಗ್ರಂ ಮಂಜು ಗರಂ ಆದರೆ, ಬಿಟ್ಟಿ ಊಟ ಪದ ಬಳಕೆ ಮಾಡಿದ್ದಕ್ಕೆ ರಜತ್ ಅವರು ಗರಂ ಆಗಿದ್ದರು. ಇಬ್ಬರು ಕೂಡ ಗಿಲ್ಲಿ ನಟನಿಗೆ ಇನ್ಮುಂದೆ ಈ ಥರ ಮಾಡಬೇಡ ಎಂದು ಎಚ್ಚರಿಸಿದ್ದಲ್ಲದೇ, ಒಂದಷ್ಟು ಶಿಕ್ಷೆಯನ್ನು ಕೂಡ ನೀಡಿದ್ದರು. ಆದರೂ ಕಾಲೆಳೆಯುವ ತಮ್ಮ ನಡೆಯನ್ನು ಗಿಲ್ಲಿ ಬಿಟ್ಟಿಲ್ಲ. ಇದೀಗ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಮನೆ ಈಗ ಬಿಗ್ ಬಾಸ್ ಪ್ಯಾಲೇಸ್ ಆಗಿದೆ. ಹಾಲಿ ಸ್ಪರ್ಧಿಗಳನ್ನು ಈಗಾಗಲೇ ಒಂದೊಂದು ಕೆಲಸಕ್ಕೆ ನಿಯೋಜಿಸಲಾಗಿದೆ. ಆದರೆ ವೇಯ್ಟರ್ ಕೆಲಸ ಮಾಡುತ್ತಿರುವ ಗಿಲ್ಲಿ ನಟ ಮಾತ್ರ ಬಂದಿರುವ ಅತಿಥಿಗಳಿಗೆ ಟಾಂಗ್ ಕೊಡುವುದನ್ನ ಮುಂದುವರಿಸಿದ್ದಾರೆ.
“ಇಲ್ಲಿಗೆ ವಾವ್ ಅನ್ನೋ ಥರ ಯಾರಾದರೂ ಬರ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ವ್ಯಾ ಥೂ ಅನ್ನೋ ಥರ ಆಗೋಯ್ತು. ಐದು ಜನ ನೆಂಟರು ಬಂದ್ರು. ತಿಂದ್ರು ತಿಂದ್ರು, ತಿಂದಮೇಲೆ ದೌಲತ್ತು. ತಿನ್ನೋ ಅವರಿಗೆ ಇಷ್ಟು ಇರಬೇಕಾದರೆ, ತಂದಾಕುವ ನಮಗೆ ಎಷ್ಟಿರಬೇಡ” ಎಂದು ಆವಾಜ್ ಹಾಕಿದ್ದಾರೆ ಗಿಲ್ಲಿ. ಆದರೆ ಈ ಮಾತುಗಳನ್ನು ಕೇಳುತ್ತಲೇ ಕುರ್ಚಿಯಿಂದ ಮೇಲೆದ್ದ ರಜತ್, ಗಿಲ್ಲಿ ನಟನಿಗೆ ಆವಾಜ್ ಹಾಕಿದ್ದಾರೆ.
“ಏನ್ ಮಾತಾಡಬೇಕು ಅಂತ ಮಾತಾಡ್ತಾ ಇದ್ದೀಯಾ ಗಿಲ್ಲಿ ನೀನು? ಒಳ್ಳೆಯ ಕ್ಷಣಗಳನ್ನು ಯಾಕೆ ಹಾಳು ಮಾಡುತ್ತಿದ್ದೀಯಾ? ಎಲ್ಲದಕ್ಕೂ ಒಂದು ತಾಳ್ಮೆ ಅಂತ ಇದೆ ಗಿಲ್ಲಿ. ಆದರೆ ನೀನು ತುಂಬಾ ಇರಿಟೇಟ್ ಮಾಡ್ತಾ ಇದ್ದೀಯಾ? ಮನುಷ್ಯನ ಜಾತಿಗೆ ಸೇರಿದವನು ಒಂದು ಸಲ ಹೇಳಿದ್ರೆ ಅರ್ಥ ಮಾಡ್ಕೋಬೇಕು” ಎಂದು ರಜತ್ ಆವಾಜ್ ಹಾಕಿದ್ದಾರೆ. ಮುಂದೆ ಏನಾಯಿತು ಎಂಬುದು ರಾತ್ರಿಯ ಹೊಸ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ : ಉದ್ಯಮಿ ಮನೋಜ್ ಕಿಡ್ನ್ಯಾಪ್ ಕೇಸ್ | ರೌಡಿ ಶೀಟರ್ ಗ್ಯಾಂಗ್ನ ಬೇಕರಿ ರಘು ಅರೆಸ್ಟ್!



















