ಬೆಂಗಳೂರು : ನಕ್ಸಲ್ ಚಳವಳಿಯಲ್ಲಿ ಭಾಗಿಯಾಗಿ, ಸಮಾಜದ ಮುಖ್ಯವಾಹಿನಿಗೆ ಹಿಂದಿರುಗುವವರಿಗೆ ಪರಿಹಾರ ನೀಡುವ ಎಡಪಂಥೀಯ ತೀವ್ರಗಾಮಿಗಳ ಪುನರ್ವಸತಿ ಯೋಜನೆಯಲ್ಲಿ ಪರಿಹಾರ ಘೋಷಣೆ ಮಾಡಿದ್ದರೂ, ಜಾಮೀನು ನೀಡುವುದಕ್ಕೆ ವಿರೋಧಿಸಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್, ನಕ್ಸಲ್ ಚಳವಳಿಯಲ್ಲಿದ್ದು, ಶರಣಾಗಿದ್ದ ಮಹಿಳೆಯೊಬ್ಬರಿಗೆ ಜಾಮೀನು ಮಂಜೂರು ಮಾಡಿದೆ.
ನಕ್ಸಲ್ ಚಳವಳಿಯಿಂದ ಶರಣಾದ ಬಳಿಕ ಜಾಮೀನು ನೀರಾಕರಿಸಿದ್ದ ಉಡುಪಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಆಂಧ್ರ ಪ್ರದೇಶದ ಅನಂತಪುರ ಮೂಲದ ಲಕ್ಷ್ಮೀ ಪೂಜಾರ್ತಿ ಅಲಿಯಾಸ್ ತೊಂಬಟ್ಟು ಲಕ್ಷ್ಮೀ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ್ ಅವರಿದ್ದ ನ್ಯಾಯಪೀಠ ಈ ಮೇಲಿನ ಆದೇಶ ನೀಡಿದೆ. ಅಲ್ಲದೆ, ಲಕ್ಷ್ಮೀ ಅವರಿಗೆ ಜಾಮೀನು ನಿರಾಕರಿಸಿದ್ದ ಉಡುಪಿಯ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಜೊತೆಗೆ, ಅರ್ಜಿದಾರರು 50 ಸಾವಿರ ರೂ. ಮೊತ್ತದ ವೈಯಕ್ತಿಕ ಬಾಂಡ್, ಅದೇ ಪ್ರಮಾಣದಲ್ಲಿ ಇಬ್ಬರ ಶ್ಯೂರಿಟಿ, ಅಗತ್ಯವಿದ್ದಾಗ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಮತ್ತು ಸಾಕ್ಷ್ಯ ನಾಶ ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಷರತ್ತುಗಳನ್ನು ವಿಧಿಸಿದೆ.
ಇದನ್ನೂ ಓದಿ : ಭೂತಾನ್ನಿಂದ ಬರ್ತಿದ್ದಂತೆ ಆಸ್ಪತ್ರೆಗೆ ‘ನಮೋ’ ಭೇಟಿ | ದೆಹಲಿ ಸ್ಫೋಟದ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!



















