ಬಾಗಲಕೋಟೆ: ದೀಪಾವಳಿ ಹಿನ್ನೆಲೆ ಮನೆ ಬಾಗಿಲಿನ ಬಳಿ ಹಚ್ಚಿದ ದೀಪದಿಂದ ಸಂಭವಿಸಿದ ಅಗ್ನಿ ಅವಘಡದಿಂದ 7 ಮಂದಿ ಗಾಯಗೊಂಡ ಘಟನೆ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ ಎದುರು ದೀಪ ಹಚ್ಚಲಾಗಿತ್ತು. ದೀಪದಿಂದ ಮನೆ ಎದುರಿಗೆ ಚೆಲ್ಲಿದ್ದ ಆಯಿಲ್ಗೆ ತಗುಲಿ ಬೆಂಕಿ ಹೊತ್ತಿದೆ. ಇದರಿಂದ ಮನೆ ಮುಂದೆ ಇದ್ದ 3 ಬೈಕ್ ಸುಟ್ಟು ಕರಕಲಾಗಿವೆ. ಬಳಿಕ ಮನೆಗೆ ಬೆಂಕಿ ತಗುಲಿದ್ದು, ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿಕೆಯಾಗಿದೆ. ಇದರಿಂದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.
ತಪಶೆಟ್ಟಿ ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಬಂದು ಬಚಾವ್ ಆಗಿದ್ದಾರೆ. ಮೇಲ್ಮಹಡಿಯಲ್ಲಿದ್ದ 7 ಮಂದಿಗೆ ಬೆಂಕಿಯ ಜಳದಿಂದ ಸಣ್ಣಪುಟ್ಟಗಾಯಗಳಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜೇಂದ್ರ ತಪಶೆಟ್ಟಿ ಬೋರ್ವೆಲ್ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬೇಕಾದ ಆಯಿಲ್ ಸಂಗ್ರಹಿಸಿದ್ದರು. ಅದಕ್ಕೆ ದೀಪದ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.