ಡೆಹ್ರಾಡೂನ್ : ಉತ್ತರಾಖಂಡದ ಪ್ರಸಿದ್ದ ಬದರಿನಾಥ ದೇವಸ್ಥಾನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭೇಟಿ ನೀಡಿ, ದರ್ಶನ ಪಡೆದಿದ್ದಾರೆ. ಸೋಮವಾರ (ಅ.6) ದೇಗುಲಕ್ಕೆ ಆಗಮಿಸಿದ ನಟನನ್ನು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆದರದಿಂದ ಬರ ಮಾಡಿಕೊಂಡರು.
ಜೊತೆಗೆ ತುಳಸಿ ಮಾಲೆ ಹಾಗೂ ದೇವರ ಪ್ರಸಾದವನ್ನು ರಜನಿಕಾಂತ್ಗೆ ನೀಡಿದರು. ಚಳಿಗಾಲದ ಹಿನ್ನೆಲೆ ದೇಗುಲದ ಬಾಗಿಲುಗಳನ್ನು ಇನ್ನು ಕೆಲ ದಿನಗಳಲ್ಲಿ ಮುಚ್ಚಲಾಗುತ್ತಿದ್ದು, ಅದಕ್ಕೂ ಮುನ್ನವೇ ರಜನಿಕಾಂತ್ ದರ್ಶನ ಪಡೆದುಕೊಂಡಂತಾಗಿದೆ.
ಬೆಚ್ಚಗಿನ ಉಡುಪು ಧರಿಸಿ, ರಜನಿಕಾಂತ್ ಅವರು ಯಾತ್ರಾ ಮಾರ್ಗದಲ್ಲಿ ಸಾಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದಕ್ಕೂ ಮುನ್ನ ಶನಿವಾರ (ಟ.4) ಋಷಿಕೇಶದ ಗಂಗಾ ನದಿಯ ದಡದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು.
ಕೇದಾರನಾಥಕ್ಕೂ ಭೇಟಿ ನೀಡಿದ ನಟ : ಇದಕ್ಕೂ ಮೊದಲು ನಟ ರಜನಿಕಾಂತ್ ಅವರು ಕೇದಾರನಾಥ ಧಾಮಕ್ಕೂ ಭೇಟಿ ನೀಡಿ ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದಾರಿ ಮಧ್ಯೆ ರಸ್ತೆ ಪಕ್ಕದಲ್ಲಿ ನಿಂತುಕೊಂಡು ಊಟ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಹಿರಿಯ ನಟನ ಸರಳತೆಯನ್ನು ಅಭಿಮಾನಿಗಳು, ನೆಟ್ಟಿಗರು ಕೊಂಡಾಡಿದ್ದರು.



















