ಮಂಡ್ಯ : ‘ನಾನು ಮತ್ತು ಪ್ರತಾಪ ಸಿಂಹ ಹಿಂದೂಗಳ ಪರವಾಗಿ ಗಟ್ಟಿಯಾಗಿ ಮಾತನಾಡುತ್ತೇವೆ. ನಾವೆಲ್ಲ ಒಂದಾಗಿ ರಾಜ್ಯದಲ್ಲಿ ‘ಕರ್ನಾಟಕ ಹಿಂದೂ ಪಾರ್ಟಿ’ ಕಟ್ಟುತ್ತೇವೆ. ಆ ಪಕ್ಷದ ಗುರುತು ಜೆಸಿಬಿ. ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ, ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನು ನೆಲಸಮಗೊಳಿಸುತ್ತೇವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮದ್ದೂರು ಕಲ್ಲು ತೂರಾಟ ಘಟನೆಯಲ್ಲಿ ಗಾಯಗೊಂಡವರ ಮನೆಗಳಿಗೆ ಇಂದು(ಗುರುವಾರ) ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಹಿಂದುತ್ವಪರ ಕಾರ್ಯಕರ್ತರನ್ನು ಉದ್ದೇಶಿಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ರಾಜ್ಯದ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಗೌರವಯುತವಾಗಿ ತೆಗೆದುಕೊಳ್ಳದಿದ್ದರೆ, ರಾಜ್ಯದಲ್ಲಿ ಹೊಸ ಸರ್ಕಾರ ತರುತ್ತೇವೆ. ‘ಪಾಕಿಸ್ತಾನಕ್ಕೆ ಜೈ’ ಎಂದು ಧ್ವಜ ಹಾರಿಸಿದರೆ ಅಲ್ಲೇ ಎನ್ಕೌಂಟರ್ ಮಾಡುತ್ತೇವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಆಡಳಿತ ಕರ್ನಾಟಕದಲ್ಲಿ ಬರಲಿದೆ. ನಮ್ಮ ಸರ್ಕಾರ ಇದ್ದಾಗ ನನ್ನನ್ನು ಮಂತ್ರಿ ಮಾಡಲಿಲ್ಲ. ನಾನು ಗೃಹಮಂತ್ರಿ ಆಗಿದ್ದರೆ ಇವರ ಬಾಯಲ್ಲಿ ಗುಂಡು ಹಾಕುತ್ತಿದ್ದೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
‘ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರು ಢಮಾರ್, ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ಮೃತರ ಮೆರವಣಿಗೆಯ ಸಂದರ್ಭದಲ್ಲಿ ತಮಟೆ ಬಾರಿಸಲು ಮದ್ದೂರಿನ ಮಸೀದಿ ಮುಂದೆ ಬಿಡುತ್ತಿಲ್ಲವಂತೆ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ. 2028ಕ್ಕೆ ಎಲ್ಲರೂ ವಿಧಾನಸೌಧದ ಮುಂದೆ ಭಗವಧ್ವಜ ತರುತ್ತೀರಾ ? ನನ್ನನ್ನು ಕರ್ನಾಟಕ ಸಿಎಂ ಮಾಡುತ್ತೀರಾ ? ಎಂದು ಕಾರ್ಯಕರ್ತರನ್ನು ಕೇಳುವುದರ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
‘ಮಂಡ್ಯ ಜಿಲ್ಲೆಯ ಜನರು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಯಾರಿಗೂ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯಿಂದಲೇ ನನ್ನ ಯುದ್ಧ ಪ್ರಾರಂಭ. ಹಿಂದುತ್ವಪರ ಕಾರ್ಯಕರ್ತರಿಗೆ ಕಲ್ಲು ಹೊಡೆದವರಿಗೆ ಸರಿಯಾದ ಶಿಕ್ಷೆ ಆಗಬೇಕು’ ಎಂದು ಅವರು ಒತ್ತಾಯಿಸಿದರು.
“ಮುಸ್ಲಿಂ ಏಜೆಂಟರಂತೆ ಕೆಲಸ ಮಾಡಬೇಡಿ:”
‘ಗಣೇಶ ಮೆರವಣಿಗೆಯಲ್ಲಿ ಡಿ.ಜೆ ಹಾಕಬೇಡಿ ಅಂತ ಸರ್ಕಾರ ನಿರ್ಬಂಧ ಹಾಕುತ್ತದೆ. ಆದರೆ, ಅವರು ದಿನಕ್ಕೆ ಐದು ಬಾರಿ ಮೈಕ್ ಹಾಕುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರೇ ನಿಮಗೆ ತಾಕತ್ ಇದ್ದರೆ ಮಸೀದಿ ಮೈಕ್ ಅನ್ನು ನಿಲ್ಲಿಸಿ. ಮುಸ್ಲಿಂ ಏಜೆಂಟಗಳಂತೆ ಕೆಲಸ ಮಾಡಬೇಡಿ. ಹಾಲುಮತದಲ್ಲಿ ಹುಟ್ಟಿದ ಸಿದ್ದರಾಮಯ್ಯನವರು ಕುಂಕುಮ, ಪೇಟಾ ಬೇಡ ಎಂದು ಹೇಳುತ್ತಾರೆ. ಸಾಬರ ಟೋಪಿ ಹಾಕಿಕೊಳ್ಳುತ್ತಾರೆ. ನೇಪಾಳದ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳಿ’ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ದ ಕೆಂಡಾಮಂಡಲರಾಗಿದ್ದಾರೆ.