ವಿಜಯಪುರ : ಬೆಳ್ಳಂಬೆಳಗ್ಗೆ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಮೇಲೆ ಗುಂಡು ಹಾರಿಸಿ, ತಲವಾರ್ನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಕೊಲೆಯಾದ ವ್ಯಕ್ತಿ.
ಭೀಮನಗೌಡ ಬಿರಾದಾರ ಅವರು ಭೀಮಾತೀರದ ಮಹಾದೇವ ಸಾಹುಕಾರ್ ಭೈರಗೊಂಡ ಅವರ ಪರಮಾಪ್ತ, ಬಲಗೈ ಬಂಟನಾಗಿದ್ದರು ಎಂದು ತಿಳಿದುಬಂದಿದೆ.
ಬುಧವಾರ (ಸೆ.3) ಬೆಳಗ್ಗೆ ಮೃತ ಭೀಮನಗೌಡ ಅವರು ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ಗೆ ಆಗಮಿಸಿದ್ದರು. ಈ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಬಂದು ಕಟಿಂಗ್ ಮಾಡುವವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಭೀಮನಗೌಡ ಅವರ ಮೇಲೆ ಫೈರಿಂಗ್ ನಡೆಸಿ, ತಲವಾರ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸದ್ಯ ಭೀಮನಗೌಡ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹಳೆಯ ವೈಷಮ್ಯದ ಹಿನ್ನೆಲೆ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಆಪ್ತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಹಾದೇವ ಭೈರಗೊಂಡ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.