ರಾಂಚಿ: ಜಾರ್ಖಂಡ್ನ ರಾಜಕೀಯದಲ್ಲಿ ನಾಲ್ಕು ದಶಕಗಳ ಕಾಲ ತಮ್ಮದೇ ಆದ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಶಿಬು ಸೋರೆನ್(81) ಇಂದು ಮುಂಜಾನೆ ನಿಧನರಾದರು. ಅವರು ಕಳೆದ ಒಂದು ತಿಂಗಳಿಂದ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ನಿಧನದ ಸುದ್ದಿಯನ್ನು ಅವರ ಪುತ್ರ ಹಾಗೂ ಹಾಲಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ದೃಢಪಡಿಸಿದ್ದು, “ನನ್ನ ಪ್ರೀತಿಯ ದಿಶೋಮ್ ಗುರೂಜಿ ಇಂದು ನಮ್ಮನ್ನು ಅಗಲಿದ್ದಾರೆ. ಇಂದು ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಶಿಬು ಸೋರೆನ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ. ಅವರು 8 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರ ಎರಡನೇ ರಾಜ್ಯಸಭಾ ಅವಧಿ ಇನ್ನೂ ಮುಂದುವರಿದಿತ್ತು.

1972ರಲ್ಲಿ ಎಕೆ ರಾಯ್ ಮತ್ತು ಬಿನೋದ್ ಬಿಹಾರಿ ಮಹತೋ ಅವರೊಂದಿಗೆ ಸೇರಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವನ್ನು ಸ್ಥಾಪಿಸುವುದರ ಮೂಲಕ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಜಾರ್ಖಂಡ್ ರಾಜ್ಯ ರಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರದಲ್ಲಿ ಶಿಬು ಸೊರೇನ್ ಕೂಡ ಒಬ್ಬರು. 2000ನೇ ಇಸವಿಯಲ್ಲಿ ಜಾರ್ಖಂಡ್ ಪ್ರತ್ಯೇಕ ರಾಜ್ಯವಾದ ನಂತರ, ಅಲ್ಲಿನ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವುದನ್ನು ಮುಂದುವರಿಸಿದರು.
ಅವರು ಮೊದಲ ಬಾರಿಗೆ 1980ರಲ್ಲಿ ದುಮ್ಕಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ ಈ ಕ್ಷೇತ್ರವನ್ನು ಜೆಎಂಎಂನ ಭದ್ರಕೋಟೆಯಾಗಿ ಪರಿವರ್ತಿಸಿದರು. ಆದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ನಲಿನ್ ಸೋರೆನ್ ಅವರಿಂದ 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದು, ಅವರಿಗಾದ ಅತಿದೊಡ್ಡ ಆಘಾತವಾಗಿತ್ತು.
3 ಬಾರಿ ಮುಖ್ಯಮಂತ್ರಿ
ಶಿಬು ಸೋರೆನ್ ಅವರು 3 ಬಾರಿ ಜಾರ್ಖಂಡ್ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು, ಆದರೆ ಯಾವುದೇ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರ ಮೊದಲ ಮುಖ್ಯಮಂತ್ರಿ ಅವಧಿ 2005ರಲ್ಲಿ ಕೇವಲ ಒಂಬತ್ತು ದಿನಗಳಿಗೆ ಸೀಮಿತವಾಗಿತ್ತು. ನಂತರದ ಎರಡು ಅವಧಿಗಳೂ ಸಹ ಅಲ್ಪಾವಧಿಯದಾಗಿದ್ದವು. ಕೇಂದ್ರ ಸರ್ಕಾರದ ಮಟ್ಟದಲ್ಲೂ ಅವರ ರಾಜಕೀಯ ಪ್ರಯಾಣ ಸವಾಲುಗಳಿಂದ ಕೂಡಿತ್ತು.
2004ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾದರು, ಆದರೆ ಹಳೆಯ ಕ್ರಿಮಿನಲ್ ಪ್ರಕರಣವೊಂದರ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ನಂತರ, ಕಲ್ಲಿದ್ದಲು ಸಚಿವರಾಗಿದ್ದಾಗ ಹತ್ಯೆ ಪ್ರಕರಣವೊಂದರಲ್ಲಿ ದೋಷಿಯೆಂದು ಸಾಬೀತಾದ ನಂತರ ಮತ್ತೆ ರಾಜೀನಾಮೆ ನೀಡಬೇಕಾಯಿತು. ಈ ಪ್ರಕರಣದಲ್ಲಿ ನಂತರ ದೆಹಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು.
ನಿಧನಕ್ಕೆ ಗಣ್ಯರ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಶಿಬು ಸೋರೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಎಕ್ಸ್’ ನಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಧಾನಿ ಮೋದಿ, “ಬೇರುಮಟ್ಟದ ನಾಯಕರಾಗಿದ್ದ ಶಿಬು ಸೋರೆನ್ ಅವರು ಅಪಾರ ಸಮರ್ಪಣಾ ಭಾವದಿಂದ ಬೆಳೆದು, ತಮ್ಮ ಬದುಕನ್ನು ಸಾರ್ವಜನಿಕರ ಸೇವೆಗೆ ಮುಡುಪಾಗಿಟ್ಟಿದ್ದರು. ಅವರು ಬುಡಕಟ್ಟು ಸಮುದಾಯ, ಬಡವರು ಮತ್ತು ದಲಿತರನ್ನು ಸಬಲೀಕರಣಗೊಳಿಸುವಲ್ಲಿ ವಿಶೇಷ ಉತ್ಸಾಹವನ್ನು ಹೊಂದಿದ್ದರು.
ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.ಶಿಬು ಸೋರೆನ್ ಅವರ ನಿಧನವು ಜಾರ್ಖಂಡ್ ರಾಜಕೀಯದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ.



















