ನವದೆಹಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ (36) ಎಂಬ ನರ್ಸ್ನ ಭವಿಷ್ಯವು ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. 2017ರಲ್ಲಿ ಯೆಮನ್ನಲ್ಲಿ ತಲಾಲ್ ಅಬ್ದೊ ಮೆಹದಿ ಎಂಬುವವರ ಕೊಲೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾಳನ್ನು ರಕ್ಷಿಸಲು, ಭಾರತದ ಪ್ರಮುಖ ಸುನ್ನಿ ಮುಸ್ಲಿಂ ಧಾರ್ಮಿಕ ನಾಯಕ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್ನಲ್ಲಿ ತುರ್ತು ಮಾತುಕತೆಗಳನ್ನು ಆರಂಭಿಸಿದ್ದಾರೆ. ಜುಲೈ 16ರ ಬುಧವಾರ ನಿಮಿಷಾಳ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ಯೆಮನ್ನ ಹೌತಿ ಆಡಳಿತವು ಒಪ್ಪಿಗೆ ನೀಡಿದ ಬೆನ್ನಲ್ಲೇ, ಈ ಮಾತುಕತೆ ನಡೆಯುತ್ತಿದ್ದು, ನಿಮಿಷಾಗೆ ಕೊನೇ ನಿಮಿಷದಲ್ಲಾದರೂ ಬದುಕುವ ಭರವಸೆ ಸಿಗಬಹುದೇ ಎಂದು ಆಕೆಯ ಕುಟುಂಬಸ್ಥರು ಕಾಯುತ್ತಿದ್ದಾರೆ.
ನಿಮಿಷಾ ಪ್ರಿಯಾ 2008ರಲ್ಲಿ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಕೇರಳದಿಂದ ಯೆಮನ್ಗೆ ತೆರಳಿದ್ದರು. ಸಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿದ ನಂತರ, 2015ರಲ್ಲಿ ಯೆಮನ್ ಕಾನೂನಿನ ಪ್ರಕಾರ ಸ್ಥಳೀಯ ಪಾಲುದಾರನೊಂದಿಗೆ ತಮ್ಮದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಈ ಪಾಲುದಾರ ತಲಾಲ್ ಅಬ್ದೊ ಮೆಹದಿ. ಆದರೆ, ತಲಾಲ್ನೊಂದಿಗೆ ಹಣಕಾಸಿನ ಮತ್ತು ವೈಯಕ್ತಿಕ ವಿವಾದಗಳು ಶುರುವಾದವು. ನಿಮಿಷಾ ಅವರು ತಲಾಲ್ನ ಮೇಲೆ ಹಣ ದುರುಪಯೋಗ ಮತ್ತು ತಮ್ಮ ಪಾಸ್ಪೋರ್ಟ್ ಕಸಿದುಕೊಂಡ ಆರೋಪ ಹೊರಿಸಿದ್ದರು.
ಈ ವಿವಾದದ ನಡುವೆ, 2017ರ ಜುಲೈನಲ್ಲಿ ನಿಮಿಷಾ ತಮ್ಮ ಪಾಸ್ಪೋರ್ಟ್ ಮರಳಿ ಪಡೆಯಲು ತಲಾಲ್ಗೆ ಕೀಟಾಮಿನ್ ಎಂಬ ಇಂಜೆಕ್ಷನ್ ಚುಚ್ಚಿದರು. ಆದರೆ, ಅದು ಓವರ್ ಡೋಸ್ ಆಗಿ ಅವನ ಸಾವಿಗೆ ಕಾರಣವಾಯಿತು. ಬಳಿಕ ಆಕೆ ತನ್ನ ಸ್ನೇಹಿತೆಯ ಸಹಾಯ ಪಡೆದು, ತಲಾಲ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಟ್ಯಾಂಕ್ ವೊಂದರಲ್ಲಿ ಹಾಕಿ ಅಲ್ಲಿಂದ ಕಾಲ್ಕಿತ್ತಳು. ಯೆಮನ್ನಿಂದ ಪರಾರಿಯಾಗಲು ಯತ್ನಿಸುವಾಗ ನಿಮಿಷಾಳನ್ನು ಬಂಧಿಸಲಾಯಿತು ಮತ್ತು 2020ರಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. 2023ರಲ್ಲಿ ಯೆಮನ್ನ ಸರ್ವೋಚ್ಚ ನ್ಯಾಯಾಲಯವು ಈ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಜು.16ರ ಬುಧವಾರ ಆಕೆಯನ್ನು ಗಲ್ಲಿಗೇರಿಸಲು ತೀರ್ಮಾನಿಸಲಾಯಿತು.
ಕಾಂತಪುರಂ ಅವರ ಆಶಾದಾಯಕ ಮಧ್ಯಸ್ಥಿಕೆ
ಭಾರತದ ಸುನ್ನಿ ಧಾರ್ಮಿಕ ಗುರು ಮತ್ತು ಸುನ್ನಿ ಜಮೀಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್ನ ಪ್ರಮುಖ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಮೂಲಕ ತಲಾಲ್ನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಯೆಮನ್ನ ಧಮಾರ್ ಪ್ರದೇಶದಲ್ಲಿ ಇಂದು (ಜುಲೈ 15) ನಡೆಯುತ್ತಿರುವ ಈ ಮಾತುಕತೆಗಳಲ್ಲಿ ತಲಾಲ್ನ ಸಹೋದರ, ಯೆಮನ್ ಸರ್ಕಾರದ ಪ್ರತಿನಿಧಿಗಳು, ಜಿನಾಯತ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಸ್ಥಳೀಯ ಬುಡಕಟ್ಟು ನಾಯಕರು ಭಾಗವಹಿಸಿದ್ದಾರೆ.
ಕಾಂತಪುರಂ ಅವರ ಕಚೇರಿಯ ಪ್ರಕಾರ, ನಿಮಿಷಾ ಪ್ರಿಯಾಗೆ ಕ್ಷಮೆ ನೀಡುವಂತೆ ತಲಾಲ್ನ ಕುಟುಂಬವನ್ನು ಅವರು ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದಾರೆ. ಇದಕ್ಕಾಗಿ ಶರಿಯಾ ಕಾನೂನಿನಡಿ “ದಿಯಾ” (ರಕ್ತದ ಹಣ) ಅಂದರೆ, ಸುಮಾರು 1 ಮಿಲಿಯನ್ ಯುಎಸ್ ಡಾಲರ್ (ಅಂದಾಜು 11 ಕೋಟಿ ರೂಪಾಯಿಗಳು) ಪರಿಹಾರವನ್ನು ನೀಡುವ ಭರವಸೆ ನೀಡಲಾಗಿದೆ.
ಶರಿಯಾ ಕಾನೂನು ಮತ್ತು ಬ್ಲಡ್ ಮನಿ
ಯೆಮನ್ನ ಹೌತಿ-ನಿಯಂತ್ರಿತ ಪ್ರದೇಶಗಳಲ್ಲಿ ಶರಿಯಾ ಕಾನೂನಿನಡಿಯಲ್ಲಿ, ಕೊಲೆ ಆರೋಪಿಯನ್ನು ಗಲ್ಲಿಗೇರಿಸುವ ಬದಲು, ಸಂತ್ರಸ್ತನ ಕುಟುಂಬವು “ದಿಯಾ” ಎಂಬ ಆರ್ಥಿಕ ಪರಿಹಾರವನ್ನು ಸ್ವೀಕರಿಸಿ ಕ್ಷಮೆ ನೀಡಬಹುದು. ಈ ಹಣಕ್ಕೆ ಬ್ಲಡ್ ಮನಿ ಎನ್ನಲಾಗುತ್ತದೆ. “ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್” ಈ ಬ್ಲಡ್ ಮನಿಗಾಗಿ ಕ್ರೌಡ್ಫಂಡಿಂಗ್ ಮೂಲಕ 2024ರ ಜೂನ್ವರೆಗೆ 40,000 ಯುಎಸ್ ಡಾಲರ್ಗಳನ್ನು ಸಂಗ್ರಹಿಸಿತ್ತು.
ಆದರೆ, ತಲಾಲ್ನ ಕುಟುಂಬ ಮತ್ತು ಧಮಾರ್ ಪ್ರದೇಶದ ಬುಡಕಟ್ಟು ಸಮುದಾಯಗಳಿಗೆ ಈ ಕೊಲೆ ಒಂದು ಭಾವನಾತ್ಮಕ ಮತ್ತು ಗೌರವದ ವಿಷಯವಾಗಿದ್ದರಿಂದ, ಈವರೆಗೆ ಯಾವುದೇ ಸಂಪರ್ಕ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಂತಪುರಂ ಅವರ ಮಧ್ಯಸ್ಥಿಕೆಯಿಂದ ಇದೀಗ ಮೊದಲ ಬಾರಿಗೆ ತಲಾಲ್ನ ಕುಟುಂಬದೊಂದಿಗೆ ನೇರ ಮಾತುಕತೆ ಸಾಧ್ಯವಾಗಿದೆ. ಆದರೆ, ಅವರು ಬ್ಲಡ್ ಮನಿ ಸ್ವೀಕರಿಸಲು ಒಪ್ಪುತ್ತಾರೋ, ಇಲ್ಲವೋ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಕೈಚೆಲ್ಲಿದ ಭಾರತ ಸರ್ಕಾರ
ಭಾರತ ಸರ್ಕಾರವು ಈ ಪ್ರಕರಣದಲ್ಲಿ ಸಾಧ್ಯವಾದಷ್ಟು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಆದರೆ, ಯೆಮನ್ನಲ್ಲಿ ಭಾರತದ ರಾಜತಾಂತ್ರಿಕ ಉಪಸ್ಥಿತಿಯ ಕೊರತೆ ಮತ್ತು ಹೌತಿ ಆಡಳಿತವನ್ನು ಅಧಿಕೃತವಾಗಿ ಗುರುತಿಸದಿರುವುದು ಸರ್ಕಾರದ ಕೈಗೆ ಸೀಮಿತ ಆಯ್ಕೆಗಳನ್ನು ನೀಡಿದೆ. ಅಟಾರ್ನಿ ಜನರಲ್ ಆರ್. ವೆಂಕಟರಾಮನಿ ಅವರು ಸೋಮವಾರವಷ್ಟೇ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿ, “ಯೆಮನ್ ಒಂದು ಸಾಮಾನ್ಯ ದೇಶವಲ್ಲ, ರಾಜತಾಂತ್ರಿಕವಾಗಿ ಗುರುತಿಸಲ್ಪಡದ ಪ್ರದೇಶವಾಗಿದೆ, ಆದ್ದರಿಂದ ಸರ್ಕಾರವು ಕೆಲವು ಶೇಖ್ಗಳ ಮೂಲಕ ಖಾಸಗಿಯಾಗಿ ಪ್ರಯತ್ನಿಸಿದೆ. ಇನ್ನೇನೂ ಮಾಡಲು ನಮ್ಮಿಂದ ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ನಿಮಿಷಾ ಪ್ರಿಯಾಳ ಜೀವ ಉಳಿಸುವ ಈ ಕೊನೆಯ ಪ್ರಯತ್ನ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕು.


















