ಬೆಂಗಳೂರು: ಜಾನಪದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮತ್ತು ನಗರದ ಜನತೆಗೆ ಜಾನಪದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಜೂನ್ 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ, ಜಿಲ್ಲಾಧ್ಯಕ್ಷ ಡಾ. ರಿಯಾಜ್ ಪಾಷ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಅಶ್ವಥ್ ನಾರಾಯಣ, ಕೇಶವರಾಜ್, ಆನಿತಾ, ವಾಣಿ, ಮುರಳೀಧರ, ರಾಮಾಂಜನೇಯ, ಕಣ್ಣಯ್ಯ ಸೇರಿದಂತೆ ಹಲವರು ಇದ್ದರು.
ಜಾನಪದ ಎಸ್.ಬಾಲಾಜಿ ಮಾತನಾಡಿ, ಜಾನಪದ ಕಲ,. ಪರಂಪರೆ ನಗರದ ಪ್ರದೇಶದ ಜನರಿಗೆ ತಿಳಿಸಲು 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜ, ರಾಜ್ಯ ಧ್ವಜ ಮತ್ತು ಪರಿಷತ್ತಿನ ಧ್ವಜರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿವಿಧ ಕಲಾ ತಂಡಗಳ ಪ್ರದರ್ಶನ, ನಂತರ ಉದ್ಘಾಟನೆ, ‘ಸೋಬಾನ” ಸ್ಮರಣ ಸಂಚಿಕೆ ಬಿಡುಗಡೆ, ಪ್ರಶಸ್ತಿ ಪ್ರಧಾನ ಹಾಗೂ ಜಾನಪದ ಗೋಷ್ಠಿ, ಮಹಿಳಾ ಜಾನಪದ ಗೋಷ್ಠಿ, ಬಹಿರಂಗ ಅಧಿವೇಶನ, ಕೃತಿ ಬಿಡುಗಡೆ ಸಮಾರೋಪ ಸಮಾರಂಭ ಬೆಳಗ್ಗೆಯಿಂದ ಸಂಜೆಯವರಗೆ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 100 ಯುವಕ ಯುವತಿಯರಿಗೆ ರಾಜ್ಯ ಯುವ ಸಿರಿ ಪ್ರಶಸ್ತಿ, 60ವಿದ್ವಾಂಸರಿಗೆ, ಜೀ.ಶಂ.ಪ, ನಾಡೋಜ ಎಸ್ ಕೆ ಕರೀಂಖಾನ್, ಮಧುರಚೆನ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಜಾನಪದ ಸಮ್ಮೇಳನ ನಾಡಿನ ಹೆಸರಾಂತ ಮಠದ ಪೀಠಾಧಿಪತಿಗಳು, ಸಚಿವರು, ಶಾಸಕರು, ಸಾಹಿತಿಗಳು ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಿಯಾಜ್ ಪಾಷ ಮಾತನಾಡಿ, ಬೆಂಗಳೂರು ನಗರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ. ಮೊಬೈಲ್ ಸಂಸ್ಕೃತಿಯಿಂದ ಹೊರ ಬರಬೇಕು, ಜಾನಪದ ಕಲೆಯ ಕುರಿತು ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿಯೂ ಸಹ ಜಾನಪದ ಕುರಿತು ತಿಳಿಯಬೇಕು ಮತ್ತು ಜಾನಪದ ಕಲಾವಿದರಿಗೆ ಅವಕಾಶ ಸಿಗಬೇಕು ಎಂದು ಜಾನಪದ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.