ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಥಗ್ ಲೈಫ್ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಭಯಭೀತನಾದ ಕಮಲ್ ಹಾಸನ್, ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಹೋರಾಟಗಾರರಿಗೆ ಬೇಸರವಾಗಿದೆ.
ಕನ್ನಡದ ಬಗ್ಗೆ ಕಮಲ್ ಹಾಸನ್ ಕೆಟ್ಟದಾಗಿ ಮಾತನಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಲು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಸಹ ವಿರೋಧ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಕಮಲ್ ಹೈಕೋರ್ಟ್ ಕದ ತಟ್ಟಿದ್ದರು. ಮೊದಲಿಗೆ ಕಮಲ್ ವಿರುದ್ಧ ಛಾಟಿ ಬೀಸಿದ್ದ ಕೋರ್ಟ್ ವಿಚಾರಣೆ ಮುಂದೂಡಿತ್ತು. ಇದೀಗ ಥಗ್ ಲೈಫ್ ರಿಲೀಸ್ ಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಆದರೆ, ಕನ್ನಡ ಪರ ಸಂಘಟನೆಗಳು ಮತ್ತೆ ರೋಚ್ಚಿಗೆದ್ದಿದ್ದು, ಸ್ವಾಬಿಮಾನಿ ಕನ್ನಡಿಗರು ಚಿತ್ರಕ್ಕೆ ಛೀಮಾರಿ ಹಾಕಿದ್ದಾರೆ. ಕೋರ್ಟ್ ತೀರ್ಪಿನ ನಂತರ ಈಗ ಹೋರಾಟಗಾರರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರಿಗೂ ನೋಟಿಸ್ ನೀಡಲಾಗಿದೆ.
ಈ ವಿಷಯವಾಗಿ ಮಾತನಾಡಿರುವ ಪ್ರವೀಣ್ ಶೆಟ್ಟಿ, ಇದು ಕನ್ನಡ ಚಿತ್ರರಂಗದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಥಗ್ ಲೈಫ್ ಚಿತ್ರ ಬಿಡುಗಡೆಗೆ ಸುಪ್ರಿಂ ಕೋರ್ಟ್ ಅವಕಾಶ ನೀಡಿದೆ. ಆದರೆ ಕನ್ನಡ ಪರ ಹೋರಾಟಗಾರರು ಸಿನಿಮಾವನ್ನು ತಡೆಯಬೇಕಾ? ಅಥವಾ ಬಿಡಬೇಕಾ? ಎಂಬುವುದನ್ನು ನಿರ್ಧಾರ ಮಾಡಿಲ್ಲ. ಅದಕ್ಕೂ ಮೊದಲೇ ರಾತ್ರೋ ರಾತ್ರಿ ಪೊಲೀಸರು ಮನೆ ಬಳಿ ಬಂದಿದ್ದಾರೆ. ಈ ಬೆಳವಣಿಗೆ ನೋಡಿದರೆ ಮುಂದೆ ಹೋರಾಟ ಮಾಡುವುದು ಸಹ ಸಾಕಷ್ಟು ಕಷ್ಟಕರವಾಗಲಿದೆ. ಈ ರೀತಿ ನಮ್ಮನ್ನು ತಡೆಯುವುದರಿಂದ ನಮಗೆ ಕಾನೂನಿನಲ್ಲಿ ಸ್ವಾತಂತ್ರ ಇಲ್ಲವಾ? ಅನಿಸುತ್ತದೆ.
ನಾನೂ ಕನ್ನಡಿಗರಲ್ಲಿ ಮನವಿ ಮಾಡುತ್ತೇನೆ. ಇವತ್ತು ಥಗ್ ಲೈಫ್ ಸಿನಿಮಾವನ್ನು ಎಲ್ಲರೂ ಬಹಿಷ್ಕಾರ ಮಾಡಿದ್ದಾರೆ. ಒಂದು ಪಕ್ಷ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕನ್ನಡ ಹೋರಾಟಗಾರರು ಎಲ್ಲಾರೂ ಟಿಕೆಟ್ ಖರೀದಿಸಿ ಸಿನಿಮಾವನ್ನು ನೋಡುತ್ತೇವೆ ಎಂಬ ಸಂದೇಶವನ್ನು ನೀಡುತ್ತಿದ್ದೇವೆ. ನಮ್ಮ ಸ್ಥಳೀಯ ಭಾಷೆಗಳ ಸಿನಿಮಾಗಳನ್ನು ತೆಗೆದು ಹಾಕಿ ಪರಭಾಷಿಕ ಚಿತ್ರಗಳಿಗೆ ಅವಕಾಶವನ್ನು ನೀಡಿದ್ದಾರೆ.
ಆದರೆ ಕನ್ನಡದ ಬಗ್ಗೆ ಕನಿಷ್ಠ ಗೌರವವಿಲ್ಲದ ಕಮಲ್ ಹಾಸನ್ ಗೆ ಅವಕಾಶ ನೀಡುತ್ತಿದ್ದಾರೆ. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದರೆ, ನಮ್ಮ ಕನ್ನಡಪರ ಹೋರಾಟಗಾರರು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇವೆ. ಆ ಮೂಲಕ ಚಿತ್ರಮಂದಿರದ ಒಳಗೆ ಏನು ನಡೆಯುತ್ತದೆಯೋ? ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಪರೋಕ್ಷ ಸಂದೇಶ ನೀಡಿದ್ದಾರೆ.