ಬೆಂಗಳೂರು: ಕಾಲ್ತುಳಿತ ದುರಂತದ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಕಂಟಕ ಶುರುವಾಗಿದ್ದು, ಈಗ ಅದು ಶಿಫ್ಟ್ ಆಗಬಹುದು ಎನ್ನಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ್ನು ಸುಮಾರು 99 ವರ್ಷಗಳಿಗೆ ಲೀಸ್ ಹಾಕಿಕೊಳ್ಳಲಾಗಿತ್ತು. ಲೀಸ್ ಅವಧಿ 2068ರ ವರೆಗೆ ಇದೆ. ಅನುಮತಿ ನೀಡಿರುವ ಅವಧಿ ಹೆಚ್ಚಿದ್ದರೂ ಅದನ್ನು ಶಿಫ್ಟ್ ಮಾಡಲು ಬಿಬಿಎಂಪಿ ನಿರ್ಧಾರ ಕೈಗೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ನಗರದ ಮಧ್ಯಭಾಗದಲ್ಲಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದಾಗಿ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದರೆ, ಇನ್ನೊಂದೆಡೆ ಅಕ್ಕಪಕ್ಕದ ನಿವಾಸಿಗಳಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಸ್ಟೇಡಿಯಂ ಸ್ಥಳಾಂತರಿಸುವಂತೆ ಸೂಕಷ್ಟು ದೂರುಗಳು ಬಂದಿವೆ.
ಈಗ ಸ್ಟೇಡಿಯಂ ಹೊರಗೆ ಕಾಲ್ತುಳಿತ ಉಂಟಾಗಿ 11 ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಶಿಫ್ಟ್ ಮಾಡುವ ಗುಮಾನಿ ಕೇಳಿ ಬರುತ್ತಿದೆ. ಏರ್ಪೋರ್ಟ್ ಮಾದರಿಯಂತೆ ನಗರದ ಹೊರ ವಲಯಕ್ಕೆ ಶಿಫ್ಟ್ ಮಾಡಲು ಚಿಂತನೆ ಕೂಡ ನಡೆದಿದೆ ಎನ್ನಲಾಗಿದೆ.