ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಕೇಸ್ಗೆ ಸಂಬಂಧಿಸಿದಂತೆ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ಏರ್ಪೋರ್ಟ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಕಾಲ್ತುಳಿತ ಕೇಸ್ನಲ್ಲಿ ಆರೋಪಿಯಾಗಿದ್ದ ನಿಖಿಲ್ ಸೋಸಲೆ ಮುಂಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖಿಲ್ ಸೋಸಲೆ ಬಂಧನಕ್ಕೆ ಮುಖ್ಯ ಕಾರಣಗಳು
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಲು ನಿಖಿಲ್ ಸೋಸಲೆ ಹಾಕಿದ್ದ ಪೋಸ್ಟ್ವೊಂದು ಕಾರಣವಾಗಿತ್ತು. ಆರ್ಸಿಬಿ ಕಪ್ ಗೆದ್ದ ಬಳಿಕ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಯಲಿದೆ ಎಂದು ನಿಖಿಲ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಜೊತೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಕ್ಟರಿ ಪರೇಡ್ ನಡೆಯಲಿದೆ ಅಂತಾ ತಿಳಿಸಿದ್ದ. ವಿಕ್ಟರಿ ಪರೇಡ್ ಗೆ ಪೊಲೀಸರ ಅನುಮತಿ ಪಡೆಯದೆ ಪೋಸ್ಟ್ ಶೇರ್ ಮಾಡಿದ್ದ. ಜೊತೆಗೆ ಪೊಲೀಸರು ಅನುಮತಿ ನಿರಾಕರಿಸಿದ ಬಳಿಕವೂ ಪೋಸ್ಟ್ ಡಿಲೀಟ್ ಮಾಡದೆ ಬೇಜವಾಬ್ದಾರಿ ತೋರಿದ್ದ ಎಂಬ ಆರೋಪ ಕೇಳಿ ಬಂದಿದೆ.
ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ಗೆ ಫ್ರೀ ಟಿಕೆಟ್ ಅಂತ ಡಿಕ್ಲೇರ್ ಮಾಡಿದ್ದ. ಗೇಟ್ 9 ಮತ್ತು 10 ರ ಬಳಿ ಮಧ್ಯಾಹ್ನ 1 ಗಂಟೆಗೆ ಟಿಕೆಟ್ ಸಿಗತ್ತೆ ಅಂತಾ ಪೋಸ್ಟ್ನಲ್ಲಿ ತಿಳಿಸಿದ್ದ. ಆದರೆ ಮಧ್ಯಾಹ್ನ 1 ಗಂಟೆ ಕಳೆದರೂ ಟಿಕೆಟ್ ವಿತರಣೆ ಆಗಿರಲಿಲ್ಲ. ನಂತರ ಮಧ್ಯಾಹ್ನ 3 ಕ್ಕೆ ಸ್ಟೇಡಿಯಂಗೆ ಅಭಿಮಾನಿಗಳ ಪ್ರವೇಶ ಅಂತ ಪೋಸ್ಟ್ ಮಾಡಿದ್ದರು. ಇದನ್ನೆಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಫಿಷಿಯಲ್ ಪೇಜ್ನಲ್ಲಿ ಬರೆದು ಯಡವಟ್ಟು ಮಾಡಿದ್ದರು.
RCB ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ಆಗಿರುವ ನಿಖಿಲ್ ಸೋಸಲೆ ಸೂಚನೆಯಂತೆ DNA ಸಂಸ್ಥೆ ವರ್ತಿಸಿತ್ತು. ಇದೆಲ್ಲಾ ಆದ ಬಳಿಕ ಕ್ರೀಡಾಂಗಣಕ್ಕಿದ್ದ 22 ಗೇಟ್ಗಳ ಪೈಕಿ ಏಕಕಾಲಕ್ಕೆ ಕೇವಲ 19, 20, 22 ಮೂರು ಗೇಟ್ ಮಾತ್ರ ಒಪನ್ ಮಾಡಲಾಗಿತ್ತು. ಇದರಿಂದ ಕಾಲ್ತುಳಿತ ದುರಂತ ಸಂಭವಿಸಿತ್ತು. ಲಕ್ಷಾಂತರ ಆರ್ಸಿಬಿ ಅಭಿಮಾನಿಗಳು ಸೇರಲಿಕ್ಕೆ ಕಾರಣವಾಗಿದ್ದೇ ಸೋಷಿಯಲ್ ಮೀಡಿಯಾದಲ್ಲಿ RCB ಹಾಕಿದ್ದ ಪೋಸ್ಟ್. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.