ದಾವಣಗೆರೆ: ಜನರ ಸಮಾಧಿ ಮೇಲೆ ತರಾತುರಿಯಲ್ಲಿ ಕಾರ್ಯಕ್ರಮ ಮಾಡಬೇಕಿತ್ತಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ದಾವಣಗೆರೆಯಲ್ಲಿ RCB ಸಂಭ್ರಮಾಚರಣೆ ವೇಳೆ ದುರಂತದಲ್ಲಿ 11 ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಬಳಿ ಕಾರ್ಯಕ್ರಮ ನಡೆಯುತ್ತಿರುವಾಗ 4 ಜನ ಮೃತಪಟ್ಟ ಮಾಹಿತಿ ಇತ್ತು. ಈ ಮಾಹಿತಿ ಇದ್ದರೂ ಅಲ್ಲಿ ಹೋಗಿ ಕಪ್ಗೆ ಮುತ್ತಿಕ್ಕೋ ಅವಶ್ಯಕತೆ ಇತ್ತಾ? ಡಿ.ಕೆ.ಶಿವಕುಮಾರ್ ಕಣ್ಣೀರಿಟ್ರು ಅಂತಾ ಮಾಧ್ಯಮಗಳಲ್ಲಿ ನೋಡಿದೆ. ನಿನ್ನೆ ಕಪ್ಗೆ ಮುತ್ತಿಕ್ಕುವಾಗ ಕಣ್ಣೀರು ಬರಲಿಲ್ವಾ? ಇವರು ಬ್ಯಾಟಿಂಗ್ ಮಾಡಿದ್ರಾ, ಬೌಲಿಂಗ್ ಮಾಡಿದ್ರಾ, ಸಿಕ್ಸರ್ ಎತ್ತಿದ್ರಾ? 11 ಜನರ ಶವದ ಮೇಲೆ ಕಾರ್ಯಕ್ರಮ ಮಾಡಿದ್ದು, ಕರ್ನಾಟಕಕ್ಕೆ ಅಪಮಾನ. ಕೊಹ್ಲಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ, ಇವರಿಗೆ ಗೊತ್ತಾಗಲ್ವಾ? ಎಂದು ಗುಡುಗಿದ್ದಾರೆ.
ಗೃಹಸಚಿವರು ಈ ವಿಚಾರದಲ್ಲಿ ಟೋಟಲಿ ಫೇಲ್ಯೂರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಪೂರ್ವಭಾವಿ ಸಭೆ ಮಾಡದೇ ತರಾತುರಿಯಲ್ಲಿ ತಂಡಕ್ಕೆ ಆಹ್ವಾನ ಮಾಡಿದ್ದಾರೆ. ವಿಧಾನಸೌಧ ಮೆಟ್ಟಿಲುಗಳ ಬಳಿ ಕೇವಲ 10 ನಿಮಿಷ ಸಭೆ ಮಾಡಿದ್ರು. ಸಿಎಂ, ಸಚಿವರು, ಶಾಸಕರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು ಎಂದಿದ್ದಾರೆ.