ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಘೇರಾವ್ ಹಾಕಿದ್ದಕ್ಕೆ ವಿಪ ಸದಸ್ಯ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಚಿತ್ತಾಪುರದಲ್ಲಿ ಹಲ್ಲೆ ನಡೆಸಲಾಗಿದೆ. ವಿಪಕ್ಷ ನಾಯಕರಿಗೆ 4 ಗಂಟೆ ದಿಗ್ಬಂಧನ ಹೇರಿ, ವಾಹನಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಘಟನೆ ಖಂಡಿಸಿ ಸಭಾಪತಿಗಳಿಗೆ ಅಟ್ರಾಸಿಟಿ, ಹಕ್ಕುಚ್ಯುತಿ ಮನವಿಗೆ ಸಲ್ಲಿಕೆ ಮಾಡಲಾಗುವುದು ಎಂದಿದ್ದಾರೆ.
ಅಟ್ರಾಸಿಟಿ ಕೇಸ್ ನಲ್ಲಿ A 1 ಆರೋಪಿಯಾಗಿದ್ದಾರೆ. A2 ಡಿಸಿಎಂ, A3 ಪರಮೇಶ್ವರ್, A4 ಪ್ರಿಯಾಂಕ್ ಖರ್ಗೆ ಆಗಿದ್ದಾರೆ. ಇವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಬೇಕು. ಕಾಂಗ್ರೆಸ್ ನವರು ಸಿ.ಟಿ ರವಿ ವಿಚಾರದಲ್ಲೂ ಕಾನೂನು ಉಲ್ಲಂಘನೆ ಮಾಡಿದ್ದರು. ಈ ಸರ್ಕಾರದಲ್ಲಿ ಶಾಸಕರಿಗೆ ಸ್ವಾತಂತ್ರ್ಯವಿಲ್ಲ. ಇದು ಗುಂಡಾ ಸರ್ಕಾರವಾಗಿದೆ. ಕಾಂಗ್ರೆಸ್ ಗೂಂಡಾಗಳನ್ನು ತಡೆಯುವ ಕೆಲಸವಾಗುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಸಂಪೂರ್ಣ ಬೆಂಬಲ ನೀಡುತ್ತಿದೆ. ಪೊಲೀಸ್ ನವರು ಹಲ್ಲೆ ಮಾಡದೆ ಘಟನೆಗೆ ಸಹಾಯ ಮಡಿದ್ದಾರೆ. ಆನಂತರ ಕಾಟಾಚಾರಕ್ಕೆ ನಾರಾಯಣಸ್ವಾಮಿ ಅವರನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಛಲವಾದಿ ನಾರಾಯಣಸ್ವಾಮಿಯವರನ್ನು ಸಂಪೂರ್ಣ ದಮನ ಮಾಡಲು ಖರ್ಗೆ ಕುಟುಂಬ ನಿಂತಿದೆ. ತಮ್ಮ ಸ್ಥಾನಕ್ಕೆ ಚ್ಯುತಿ ಬರತ್ತೆ ಅಂತ ಈ ರೀತಿ ಮಾಡಿದ್ದಾರೆ. ಹಿಂದೆ ಮೋದಿಯವರಿಗೆ ಖರ್ಗೆ ವಿಷಸರ್ಪ ಅಂತಾ ಹೇಳಿದ್ದರು. ನಮ್ಮ ಕಾರ್ಯಕರ್ತರು ಈ ರೀತಿ ಹಲ್ಲೆ ಮಾಡಿದ್ರಾ? ಇದೇನಾ ಮಗನಿಗೆ ಕಲಿಸಿರುವ ಬುದ್ಧಿ? ಇಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ಆಗಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಘಟನೆ ಖಂಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿಧಾನಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಸುಜಾ ಕುಶಲಪ್ಪ, ಕೇಶವ ಪ್ರಸಾದ್, ಕಿಶೋರ್ ಕುಮಾರ್ ಪುತ್ತೂರು ಸುದ್ದಿಗೋಷ್ಠಿಯಲ್ಲಿದ್ದರು.