ಬೆಂಗಳೂರು: ಆಂಧ್ರಕ್ಕೆ ಕುಮ್ಕಿ ಆನೆಗಳ ಹಸ್ತಾಂತರ ಮಾಡುವ ಕಾರ್ಯಕ್ರಮ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಾಡಗೀತೆಯ ಸಾಲುಗಳನ್ನು ಹೇಳುವುದರ ಮೂಲಕ ತಮ್ಮ ಮಾತು ಮುಂದುವರೆಸಿದ್ದಾರೆ.

ಅಲ್ಲದೇ, ಈ ವೇಳೆ ಕುವೆಂಪು ಅವರ ಕವನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅರಣ್ಯದ ಬಗ್ಗೆ ಕುವೆಂಪು ಅವರಿಗೆ ಮಮಕಾರವಿತ್ತು. ಹೀಗಾಗಿ ಹೆಚ್ಚಿನ ಮಹತ್ವವನ್ನು ಕವನದ ಮೂಲಕ ಹೇಳಿದ್ದಾರೆ. ಅವರನ್ನ ನಾವು ನೆನೆಯಬೇಕಿದೆ. ಇವತ್ತು ವಿಧಾನಸೌಧದಲ್ಲಿ ನಾನು ನಿಂತಿದ್ದೇನೆ. ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಕನ್ನಡದಲ್ಲಿಯೇ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಈಕ್ವಿಟಿ, ಎಕಾಲಜಿ, ಡೆವಲಪ್ ಮೆಂಟ್ ಸೂತ್ರ. ಇದು ಸಿದ್ದರಾಮಯ್ಯನವರ ಸೂತ್ರಗಳು. ನಮ್ಮದು ಇದೇ ರೀತಿಯ ಸೂತ್ರಗಳಾಗಿವೆ. ಎರಡು ಡಿಫರೆಂಟ್ ಪೊಲಿಟಿಕಲ್ ಗ್ರೂಪ್ ಗಳಿವೆ. ಒಂದು ಇಂಡಿಯಾ ಅಲೆಯನ್ಸ್ ಮತ್ತೊಂದು ಎನ್ ಡಿಎ. ಆದರೆ ಎಲ್ಲರ ಹಿತಾಸಕ್ತಿಯು ಸಮಾಜದ ಕಲ್ಯಾಣ. ಆನಿಟ್ಟಿನಲ್ಲೇ ನಾವು ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕ, ಆಂಧ್ರ ಸಹೋದರ ರಾಜ್ಯಗಳು. ವೈಲ್ಡ್ ಲೈಫ್ನಲ್ಲಿ ಎರಡು ರಾಜ್ಯ ಪ್ರಬಲವಾಗಿವೆ. ಅರಣ್ಯ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹಿತಾಸಕ್ತಿ. ಕರ್ನಾಟಕ ನಮಗೆ ಉದಾತ್ತ ಉಡುಗೊರೆ ಕೊಟ್ಟಿದೆ. ಅದಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ.

ಸಹಕಾರದಿಂದ ಎರಡು ರಾಜ್ಯದ ಅರಣ್ಯ ಸುರಕ್ಷಿತವಾಗಿವೆ. ನಮಗೆ ಇವತ್ತು ಕುಮ್ಕಿ ಆನೆಗಳನ್ನು ಕರ್ನಾಟಕ ನೀಡಿದೆ. ಇದರಿಂದ ನಮಗೆ ಸಂತೋಷವಾಗಿದೆ. ಪದೇ ಪದೇ ನಾನು ಇಲ್ಲಿಗೆ ಬರುತ್ತೇನೆ. ಆಂಧ್ರದಲ್ಲೂ ಅನೆಗಳ ಸಂರಕ್ಷಣೆ ಮಾಡುತ್ತೇವೆ. ತರಬೇತಿ ಕ್ಯಾಂಪ್ ಗಳನ್ನು ಪ್ರಾರಂಭಿಸುತ್ತೇವೆ. ಇದಕ್ಕೆ ಕರ್ನಾಟಕದ ಸಹಕಾರವನ್ನ ಪಡೆಯುತ್ತೇವೆ. ಆಂಧ್ರದಲ್ಲಿ ಅರಣ್ಯ ಕಳ್ಳತನಕ್ಕೆ ಕಡಿವಾಣ ಹಾಕುತ್ತೇವೆ. ಇಲ್ಲಿನ ಮಾದರಿಯಲ್ಲೇ ಆನೆಗಳ ಸಂರಕ್ಷಣೆ ಮಾಡುತ್ತೇವೆ. ಕುಮ್ಕಿ ಆನೆಗಳಿಗೆ ತರಬೇತಿ ನೀಡುತ್ತೇವೆ. ಈ ಎಲ್ಲ ಸಹಕಾರಕ್ಕೆ ಸಿದ್ದರಾಮಯ್ಯ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಾರಣ ಎಂದು ಹೇಳಿದ್ದಾರೆ.

ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಕೆ.ಜೆ. ಜಾರ್ಜ್, ಎಂ.ಸಿ ಸುಧಾಕರ್ ಸೇರಿದಂತೆ ಹಲವರು ಇದ್ದರು.