ಚಿಕ್ಕಬಳ್ಳಾಪುರ: ಜಮೀನು ಉಳುಮೆ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ, ಚಿಂತಾಮಣಿ ತಾಲ್ಲೂಕಿನ ಬಂಡಮಿಂದಪಲ್ಲಿ ಗ್ರಾಮದಲ್ಲಿ ನಡೆದಿದೆ.
ಈರಪ್ಪ ಮತ್ತು ವೆಂಕಟರೆಡ್ಡಿ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದ್ದು, ಗಲಾಟೆಯಲ್ಲಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕನರಸಿಂಹಪ್ಪ, ವೆಂಕಟರಾಯಪ್ಪ, ರವಣಪ್ಪ, ವೆಂಟಕಮ್ಮನಿಗೆ ಗಂಭೀರ ಗಾಯಗಳಾಗಿದ್ದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಸಳಹಳ್ಳಿ ಸರ್ವೇ ನಂ 104 ರಲ್ಲಿರುವ ಜಮೀನಿಗಾಗಿ ಗಲಾಟೆಯಾಗಿದೆ. ಈರಪ್ಪ ಕುಟುಂಬಸ್ಥರು ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಲು ಮುಂದಾಗಿದ್ದರು. ಆಗ ಪಕ್ಕದ ಜಮೀನಿನಲ್ಲಿದ್ದ ವೆಂಕಟರೆಡ್ಡಿ ಕುಟುಂಬಸ್ಥರು ಅಡ್ಡಿಪಡಿಸಿದಾಗ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರಿ ಹೆಂಗಸರು ಹಾಗೂ ಗಂಡಸರು ನಡುವೆ ಮಾರಾಮರಿಯಾಗಿದ್ದು, ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.