ಜಮ್ಮು: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ(J&K Encounter) ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ತ್ರಾಲ್ ಪ್ರದೇಶದ ನಾದಿರ್ ಎಂಬ ಗ್ರಾಮದಲ್ಲಿ ಈ ಎನ್ಕೌಂಟರ್ ನಡೆದಿದೆ. ಈ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಸಾಧ್ಯತೆಯಿದ್ದು, ಎನ್ಕೌಂಟರ್ ಇನ್ನೂ ಮುಕ್ತಾಯವಾಗಿಲ್ಲ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಹತ ಉಗ್ರರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಾಜಿರ್ ವಾನಿ ಮತ್ತು ಯವಾರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು ಎಂದೂ ತಿಳಿದುಬಂದಿದೆ.
ಇದು ಕೇಂದ್ರಾಡಳಿತ ಪ್ರದೇಶದಲ್ಲಿ 48 ಗಂಟೆಗಳ ಅವಧಿಯೊಳಗೆ ನಡೆದ ಎರಡನೇ ಎನ್ಕೌಂಟರ್ ಆಗಿದೆ. 2 ದಿನಗಳ ಹಿಂದಷ್ಟೇ ಶೋಪಿಯಾನ್ ಜಿಲ್ಲೆಯ ಕೆಲ್ಲೆರ್ ಎಂಬ ಪ್ರದೇಶದಲ್ಲಿ ಮೂವರು ಲಷ್ಕರ್ ಎ ತೆಯ್ಬಾ ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿದ್ದವು.
ಮಂಗಳವಾರ ಹತರಾದ ಮೂವರು ಭಯೋತ್ಪಾದಕರ ಪೈಕಿ ಇಬ್ಬರಾದ ಶಾಹಿದ್ ಕುಟ್ಟೆ ಮತ್ತು ಅದ್ನಾನ್ ಶಾಫಿ ಶೋಪಿಯಾನ್ ಜಿಲ್ಲೆಯವರಾಗಿದ್ದಾರೆ. ಕುಟ್ಟೆ 2023ರಲ್ಲಿ ಲಷ್ಕರ್ಗೆ ಸೇರ್ಪಡೆಯಾಗಿದ್ದ. ಕಳೆದ ವರ್ಷದ ಏಪ್ರಿಲ್ 8ರಂದು ಡ್ಯಾನಿಶ್ ರೆಸಾರ್ಟ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈತ ಭಾಗಿಯಾಗಿದ್ದ. ಈ ದಾಳಿಯಲ್ಲಿ ಇಬ್ಬರು ಜರ್ಮನಿ ಪ್ರವಾಸಿಗರು ಮತ್ತು ಚಾಲಕ ಗಾಯಗೊಂಡಿದ್ದರು. ಕಳೆದ ವರ್ಷದ ಮೇ ತಿಂಗಳಲ್ಲಿ ಶೋಪಿಯಾನ್ನ ಹೀರ್ಪೋರಾದಲ್ಲಿ ನಡೆದಿದ್ದ ಬಿಜೆಪಿ ಸರಪಂಚ್ ಹತ್ಯೆಯಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಮತ್ತೊಬ್ಬ ಉಗ್ರ ಶಾಫಿ 2024ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದ. ಶೋಪಿಯಾನ್ನ ವಾಚಿ ಎಂಬಲ್ಲಿ ವಲಸೆ ಕಾರ್ಮಿಕನೊಬ್ಬನ ಹತ್ಯೆಯಲ್ಲಿ ಈಗ ಭಾಗಿಯಾಗಿದ್ದ. ಶೋಪಿಯಾನ್ ಎನ್ಕೌಂಟರ್ ವೇಳೆ ಉಗ್ರರ ಬಳಿಯಿದ್ದ ಮೂರು ಎಕೆ-47 ರೈಫಲ್ ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.