ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲೀನ ಸಂಘರ್ಷದ ಇತಿಹಾಸದಲ್ಲಿ 2019ರ ಬಾಲಾಕೋಟ್ ವೈಮಾನಿಕ ದಾಳಿ ಮತ್ತು 2025ರ ‘ಆಪರೇಷನ್ ಸಿಂದೂರ’ ನಿರ್ಣಾಯಕ ಘಟನೆಗಳು. ಈ ಎರಡೂ ಸಂದರ್ಭಗಳಲ್ಲಿ, ಭಾರತವು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡೇ ದಾಳಿಗಳನ್ನು ನಡೆಸಿದೆ. ಈ ಘಟನೆಗಳ ನಂತರ ಪಾಕಿಸ್ತಾನದ ಪ್ರತಿಕ್ರಿಯೆಗಳು ಮತ್ತು ಅದಕ್ಕೆ ಅಮೆರಿಕ (ಯುಎಸ್) ನೀಡಿದ ಎಚ್ಚರಿಕೆಗಳು ಭದ್ರತಾ ಸನ್ನಿವೇಶದ ಸಂಕೀರ್ಣತೆಯನ್ನು ಹೆಚ್ಚಿಸಿವೆ. ವಿಶೇಷವಾಗಿ ಯುಎಸ್ನಿಂದ ಒದಗಿಸಲಾದ ಎಫ್-16 ಜೆಟ್ಗಳ ಬಳಕೆ ಮತ್ತು ಅವುಗಳ ಗೌರವಕ್ಕೆ ಕುಂದು ತಂದಿರುವ ಪಾಕಿಸ್ತಾನದ ನಡೆಯು ಮತ್ತೆ ಚರ್ಚೆಗೆ ಬಂದಿದೆ. ಯಾಕೆಂದರೆ ಅನುಮತಿ ಇಲ್ಲದೇ ಈ ಹಿಂದೆ ಎಫ್-16 ವಿಮಾನ ಬಳಸಿದ್ದ ಪಾಕಿಸ್ತಾನ ಭಾರತದ ಕ್ಷಿಪಣಿಯೇಟಿಗೆ ಮಕಾಡೆ ಮಲಗಿತ್ತು. ಇದೀಗ ಮತ್ತೆ ಎಫ್-16 ಬಳಸಲು ಮಾತನಾಡಿದ ಅಮೆರಿಕದಿಂದ ಬೈಸಿಕೊಳ್ಳುವುದಕ್ಕೆ ಸಜ್ಜಾಗಿದೆ.
2019ರ ಬಾಲಾಕೋಟ್ ದಾಳಿ ಮತ್ತು ಎಫ್-16 ವಿವಾದ
2019ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್-ಎ-ಮೊಹಮ್ಮದ್ (JeM) ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್ಪಿಎಫ್ (CRPF) ಯೋಧರು ಹುತಾತ್ಮರಾದರು. ಇದಕ್ಕೆ ಪ್ರತೀಕಾರವಾಗಿ, ಭಾರತೀಯ ವಾಯುಪಡೆಯು ಫೆಬ್ರವರಿ 26, 2019 ರಂದು ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ಬಾಲಾಕೋಟ್ನಲ್ಲಿರುವ ಜೈಶ್ ತರಬೇತಿ ಶಿಬಿರದ ಮೇಲೆ ವಾಯು ದಾಳಿ ನಡೆಸಿತು. ಈ ‘ಸರ್ಜಿಕಲ್ ಸ್ಟ್ರೈಕ್’ ಭಯೋತ್ಪಾದಕ ಮೂಲಸೌಕರ್ಯಕ್ಕೆ ಹಾನಿ ಉಂಟುಮಾಡುವ ಉದ್ದೇಶ ಹೊಂದಿತ್ತು.
ಮಾರನೆಯ ದಿನ, ಫೆಬ್ರವರಿ 27, 2019 ರಂದು, ಪಾಕಿಸ್ತಾನ ವಾಯುಪಡೆಯು (PAF) ಭಾರತದ ಸೇನಾ ಮೂಲ ಸೌಕರ್ಯಗಳನ್ನು ಗುರಿಯಾಗಿಸಲು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿತ್ತು. ಈ ವೈಮಾನಿಕ ಕಾದಾಟದ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯ ಮಿಗ್-21 ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಪಾಕ್ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಪಾಕಿಸ್ತಾನವು ತಾನು ಯಾವುದೇ ಎಫ್-16 ವಿಮಾನವನ್ನು ಕಳೆದುಕೊಂಡಿಲ್ಲ ಎಂದು ವಾದಿಸಿತ್ತು.
ಈ ಘಟನೆಯು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಕಿಸ್ತಾನವನ್ನು ಅಮೆರಿಕ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಮೆರಿಕವು ಎಫ್-16 ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ಒದಗಿಸುವಾಗಲೇ, ಅದನ್ನು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳು ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕೆಂದು ಒಪ್ಪಂದ ಮಾಡಿಕೊಂಡಿತ್ತು. ಪಾಕಿಸ್ತಾನವು ಈ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿತ್ತು. ಅಮೆರಿಕ ರಕ್ಷಣಾ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಾಕಿಸ್ತಾನಕ್ಕೆ ತನ್ನ ಎಫ್-16 ವಿಮಾನಗಳ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಅಲ್ಲದೇ, ಪಾಕಿಸ್ತಾನದ ಹೇಳಿಕೆ ನಿಜವೇ ಸುಳ್ಳೇ ಎಂದು ತಿಳಿಯಲು ಅಮೆರಿಕದ ಅಧಿಕಾರಿಗಳು ಪಾಕಿಸ್ತಾನದ ಎಫ್-16 ವಿಮಾನಗಳ ಸಂಖ್ಯೆಯನ್ನೂ ಲೆಕ್ಕ ಹಾಕಿದ್ದರು. ಇದು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿತ್ತು.
ಆಪರೇಷನ್ ಸಿಂದೂರದಲ್ಲೂ ಮುಖಭಂಗ
ಈಗ ಅಂದರೆ 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಮತ್ತು 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಮೇ 7ರಂದು ಭಾರತವು ‘ಆಪರೇಷನ್ ಸಿಂದೂರ’ ಎಂಬ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ದಲ್ಲಿರುವ 9 ಉಗ್ರ ಶಿಬಿರಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿತು.
ಈ ದಾಳಿಗಳು ಮುಖ್ಯವಾಗಿ ಲಷ್ಕರ್-ಎ-ತೊಯ್ಬಾ (LeT), ಜೈಷ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದೀನ್ (HM) ನಂತಹ ಗುಂಪುಗಳಿಗೆ ಸೇರಿದ ತರಬೇತಿ ಶಿಬಿರಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದವು. ಬಹವಲ್ಪುರ್ನಲ್ಲಿರುವ ಜೈಶ್ ಮುಖ್ಯ ಕಚೇರಿ ಮತ್ತು ಮುರಿದ್ಕೆಯಲ್ಲಿರುವ ಲಷ್ಕರ್ ಕೇಂದ್ರಸ್ಥಾನವೂ ಧ್ವಂಸಗೊಂಡವು. ಭಾರತವು ಈ ಕಾರ್ಯಾಚರಣೆಯನ್ನು ನಾಗರಿಕರಿಗೆ ಹಾನಿಯಾಗದಂತೆ ಎಚ್ಚರಿಕೆಯಿಂದ ನಡೆಸಿದ “ಗುರಿಯಿಟ್ಟ ಮತ್ತು ಉದ್ದೇಶಿತ” ದಾಳಿ ಎಂದು ಬಣ್ಣಿಸಿತು.
ಪಾಕಿಸ್ತಾನದ ಪ್ರತಿಕ್ರಿಯೆ ಮತ್ತು ಅಮೆರಿಕದ ಒತ್ತಡ
ಆಪರೇಷನ್ ಸಿಂದೂರಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಭಾರತದ ವಿರುದ್ಧ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ವೈಮಾನಿಕ ದಾಳಿಗಳನ್ನು ನಡೆಸಲು ಪ್ರಯತ್ನಿಸಿದೆ. ಈ ದಾಳಿಗಳು ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ನ 26 ಸ್ಥಳಗಳಲ್ಲಿನ ನಾಗರಿಕರು ಮತ್ತು ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದವು. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಈ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯು ಒಂದು ಎಫ್-16 ಮತ್ತು ಎರಡು ಜೆಎಫ್-17 ಯುದ್ಧ ವಿಮಾನಗಳನ್ನು ಗುಂಡಿಕ್ಕಿ ಕೆಡವಿತು ಎಂದು ಕೆಲವು ವರದಿಗಳು ಹೇಳಿಕೊಂಡಿವೆ. ಆದರೆ, ಪಾಕಿಸ್ತಾನ ಮತ್ತೆ ಅದನ್ನು ನಿರಾಕರಿಸಿದೆ.
ಇದೀಗ ಅಮೆರಿಕ ಮತ್ತೊಮ್ಮೆ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, 2019ರ ತಪ್ಪನ್ನೇ ಮತ್ತೆ ಮಾಡಿದ್ದಕ್ಕೆ ಪಾಕ್ ವಿರುದ್ಧ ಕೆಂಡಾಮಂಡಲವಾಗಿದೆ ಎಂದು ವರದಿಗಳು ಹೇಳಿವೆ. ಕೆಲವು ವರದಿಗಳು ಅಮೆರಿಕ ಅಧಿಕಾರಿಗಳು ಭಾರತದ ‘ಆಪರೇಷನ್ ಸಿಂದೂರ’ವನ್ನು “ನಿಯಂತ್ರಿತ ಮತ್ತು ಜವಾಬ್ದಾರಿಯುತ” ಪ್ರತಿಕ್ರಿಯೆ ಎಂದು ಪರಿಗಣಿಸಿದರೆ, ಪಾಕಿಸ್ತಾನದ ಪ್ರತಿಕ್ರಿಯೆಯನ್ನು “ಆಕ್ರಮಣಕಾರಿ” ಎಂದು ಟೀಕಿಸಿದೆ.
ಅಮೆರಿಕದ ಒತ್ತಡದ ರಾಜತಾಂತ್ರಿಕ ಪರಿಣಾಮ
ಈ ಹಿಂದೆಯೇ ಅಮೆರಿಕದ ಹಸ್ತಕ್ಷೇಪ ಮತ್ತು ಒತ್ತಡವು ಪಾಕಿಸ್ತಾನದ ಮೇಲೆ ಗಮನಾರ್ಹ ರಾಜತಾಂತ್ರಿಕ ಮತ್ತು ಮಿಲಿಟರಿ ಪರಿಣಾಮಗಳನ್ನು ಬೀರಿತ್ತು. 2019ರಲ್ಲಿ, ಅಮೆರಿಕ ನೀಡಿದ ಎಚ್ಚರಿಕೆಯಿಂದಾಗಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ತನ್ನ ವಾಯುಪಡೆಯ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಈಗಲೂ ಅಮೆರಿಕದ ಒತ್ತಡದಿಂದಾಗಿ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ಬಳಸಲು ಸಾಧ್ಯವಾಗದಂಥ ಸ್ಥಿತಿ ಸೃಷ್ಟಿಸಿದೆ. ಕೈಯ್ಯಲ್ಲಿ ಅಸ್ತ್ರವಿದ್ದರೂ ಬಳಸಲಾಗದೇ ಪಾಕ್ ಅತಂತ್ರವಾಗಿದೆ. ಅಲ್ಲದೇ ಅಮೆರಿಕದ ರಾಜತಾಂತ್ರಿಕ ವಿಶ್ಲೇಷಕರು, ಪಾಕಿಸ್ತಾನವನ್ನು “ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ” ಎಂದು ಅಧಿಕೃತವಾಗಿ ಘೋಷಿಸಲು ಒತ್ತಾಯಿಸುತ್ತಿದ್ದಾರೆ. ಇದು ಪಾಕಿಸ್ತಾನದ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೆ ದೊಡ್ಡ ಸವಾಲನ್ನು ಒಡ್ಡಿದೆ. ಇನ್ನೊಂದೆಡೆ ಅಮೆರಿಕದ ಈ ಹಸ್ತಕ್ಷೇಪವು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಎರಡು ದೇಶಗಳ ನಡುವಿನ ಸಂಘರ್ಷವು ಅನಿಯಂತ್ರಿತವಾಗಿ ಹೆಚ್ಚಾಗುವುದನ್ನು ತಡೆಯುವಲ್ಲಿ ಒಂದು ರೀತಿಯಲ್ಲಿ ಸಂಧಾನಕಾರನ ಪಾತ್ರ ವಹಿಸಿದೆ ಎಂದು ಹೇಳಬಹುದು.