ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಸಂಚು ಕಾರಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ಹೊಸ ವಿಪಕ್ಷ ನಾಯಕನ ಆಯ್ಕೆ ಮಾಡುವ ಸಂದರ್ಭ ಬಂದಿದೆ. ಕಳೆದ ಬಜೆಟ್ ನಲ್ಲಿ ಚರ್ಚೆ ವೇಳೆ ಬಿಜೆಪಿ ನಾಯಕರು ಅಂಬೇಡ್ಕರ್ ಹಾಗೂ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾಗ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂಬ ವಿಚಾರ ಸದನದಲ್ಲಿ ಬಂದಿತು.
ನಾನು ಆಗ ಬಿಜೆಪಿಯವರಿಗೆ ಅಂಬೇಡ್ಕರ್ ಇತಿಹಾಸ ಗೊತ್ತಿಲ್ಲ. ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣ ಅಂತ ಹೇಳಿದೆ. ಆಗ ಬಿಜೆಪಿಗರು ನನ್ನ ಮೇಲೆ ಮುಗಿ ಬಿದ್ದರು. ನಾನು ಕೂಡಲೇ ಪ್ರಿಂಟ್ ತರಿಸಿ ಕೊಟ್ಟೆ. ಅಂಬೇಡ್ಕರ್ ತಮ್ಮ ಕೈನಲ್ಲಿ ಬರೆದ ಪತ್ರವನ್ನೇ ಬಿಡುಗಡೆ ಮಾಡಿದೆ. ಸೋಲಿಗೆ ಸಾವರ್ಕರ್ ಸಂಚು ಕಾರಣ ಎಂದು ಅಂಬೇಡ್ಕರ್ ಬರೆದಿದ್ದ ದಾಖಲೆ ತೋರಿಸಿದ್ದೆ. ಇದಕ್ಕೂ ಮೊದಲು ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಿದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಹಾಗೂ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದರು. ಹೀಗಾಗಿ ಈಗ ನಾನು ದಾಖಲೆ ಬಿಡುಗಡೆ ಮಾಡಿದ್ದೇನೆ. ಛಲವಾದಿ ನಾರಾಯಣಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಡೀ ಬಿಜೆಪಿ ನಾಯಕರು ದೆಹಲಿ ಪ್ರವಾಸ ಮಾಡಿ. ಖರ್ಚು ವೆಚ್ಚ ನಾವೇ ನೋಡಿಕೊಳ್ಳುತ್ತೇವೆ. ಜನ್ ಪತ್ ರೋಡ್ ನಲ್ಲಿ ಮೂಲ ಪ್ರತಿಗಳು ಇವೆ. ಅಲ್ಲಿಗೆ ಹೋಗಿ ದಾಖಲೆಗಳನ್ನು ತೆಗೆದುಕೊಂಡು ಬನ್ನಿ. ಮೋದಿ ಡಿಜಿಟಲ್ ಮೀಡಿಯಾ ಮಾಡಿದ್ದಾರಲ್ಲ. ಅದರಲ್ಲೇ NIC.IN ನಲ್ಲೇ ಮಾಹಿತಿ ಪಡೆಯಿರಿ. ಅಲ್ಲೇ ಸೂಕ್ತ ಮಾಹಿತಿಗಳು ಸಿಗುತ್ತವೆ ಎಂದು ಲೇವಡಿ ಮಾಡಿದ್ದಾರೆ.
ಇಂಡಿಯಾ ಕಲ್ಚರ್ ಅಂತ ಮತ್ತೊಂದು ವೆಬ್ ಸೈಟ್ ಇದೆ. ಮೋದಿ ಸರ್ಕಾರ ಇದಕ್ಕೆ ಫಂಡ್ ಮಾಡುತ್ತೆ. 300ಕ್ಕಿಂತ ಹೆಚ್ಚು ಅಂಬೇಡ್ಕರ್ ಬರೆದ ಪತ್ರಗಳು ಅಲ್ಲಿ ಸಿಗುತ್ತವೆ. ಡಾ. ಬಿ.ಆರ್. ಅಂಬೇಡ್ಕರ್ ಪೇಪರ್ಸ್ ಅಂತ ಇರುತ್ತೆ. ಅಲ್ಲಿ ಹೋಗಿ ಬಿಜೆಪಿಯವರು ಪರಿಶೀಲನೆ ಮಾಡಬಹುದು. 300 ಪೇಪರ್ ಬಿಜೆಪಿಯವರಿಗೆ ಓದಲು ಆಗಲ್ಲ. ಡೈರೆಸ್ಟ್ 236,237,238,239 ಪುಟಸಂಖ್ಯೆಗೆ ಹೋಗಿ ನೋಡಿಕೊಳ್ಳಿ. ಅಂಬೇಡ್ಕರ್ ಬರೆದ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಪ್ರಿಯಾಂಕ್ ಖರ್ಗೆ ಅವರು ಅಂಬೇಡ್ಕರ್ ಬರೆದ ತಮ್ಮ ಸೋಲಿಗೆ ಯಾರು ಕಾರಣ ಎಂಬ ಪತ್ರ ಬಿಡುಗಡೆ ಮಾಡಿದರು.