ಕೇಂದ್ರ ಸರ್ಕಾರದ ತುರ್ತು ನಿರ್ದೇಶನದ ಮೇರೆಗೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಾಳೆಯ ನಾಗರಿಕ ಸ್ವರಕ್ಷಣೆ ತಾಲೀಮಿಗೆ(Civil Defence Mock drill) ಸಜ್ಜಾಗಿವೆ. ಅರ್ಧ ಶತಮಾನದ ಬಳಿಕ ಇಂಥದ್ದೊಂದು ಮಾಕ್ ಡ್ರಿಲ್ಗೆ ದೇಶವು ಸಾಕ್ಷಿಯಾಗಲಿದೆ. ಈ ಕುರಿತು ಈಗಾಗಲೇ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದೆ. ಆದರೆ, ಈ ಸುತ್ತೋಲೆಯಲ್ಲಿ ಪಾಕಿಸ್ತಾನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಭಾರತೀಯರ ಹತ್ಯೆಯ ಬೆನ್ನಲ್ಲೇ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿ ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವಂತೆಯೇ ಕೇಂದ್ರ ಸರ್ಕಾರ ನೀಡಿರುವ ಈ ಸೂಚನೆಯ ಮಹತ್ವ ಪಡೆದಿದೆ. ತನ್ನ ನೆಲವನ್ನು ಉಗ್ರರ ಸ್ವರ್ಗವಾಗಿಸಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಜ್ಜಾಗುತ್ತಿರುವ ಸುಳಿವನ್ನೂ ನೀಡಿದೆ. ಅಂದ ಹಾಗೆ, ಈ ಸ್ವರಕ್ಷಣೆ ತಾಲೀಮು ಹೇಗೆ, ಯಾಕೆ, ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ:
ಪಹಲ್ಗಾಮ್ ಭಯೋತ್ಪಾದಕ ದಾಳಿ
2025ರ ಏಪ್ರಿಲ್ 22ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ವ್ಯಾಲಿಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಹತ್ಯೆಯಾದರು. ಇದು ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫೋರ್ಸ್ (TRF) ಎಂಬ ಭಯೋತ್ಪಾದಕ ಸಂಘಟನೆ ನಡೆಸಿದ ದಾಳಿಯಾಗಿತ್ತು. ಈ ಅಮಾನುಷ ಕೃತ್ಯಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸುವುದಾಗಿ ಭಾರತವು ಘೋಷಿಸಿದ್ದು, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಹಲವು ಕಠಿಣಾತಿಕಠಿಣ ಕ್ರಮಗಳನ್ನು ಕೈಗೊಂಡಿತು. ಸಿಂಧೂ ನದಿ ಒಪ್ಪಂದ ಅಮಾನತು, ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಸ್ಥಗಿತ, ಪಾಕಿಸ್ತಾನೀಯರ ಗಡಿಪಾರು, ವೀಸಾ ವಿತರಣೆ ಸ್ಥಗಿತ, ಯೂಟ್ಯೂಬ್ ಚಾನೆಲ್ಗಳಿಗೆ ನಿರ್ಬಂಧ ಸೇರಿದಂತೆ ಹಲವಾರು ಕ್ರಮಗಳನ್ನು ಭಾರತ ಕೈಗೊಂಡಿದ್ದು, ಈಗ ಪಾಕ್ ಜತೆ ನೇರ ಯುದ್ಧಕ್ಕೆ ಸಜ್ಜಾಗುತ್ತಿರುವ ಲಕ್ಷಣಗಳೂ ಗೋಚರಿಸತೊಡಗಿವೆ.

ಏನಿದು ನಾಗರಿಕ ಸ್ವರಕ್ಷಣೆ ತಾಲೀಮು?
ದೇಶದ ಮೇಲೆ ಯಾವುದೇ ರೀತಿಯ ದಾಳಿ ನಡೆದರೆ ಅಂತಹ ಸಂದರ್ಭದಲ್ಲಿ ನಾಗರಿಕರು ತಮ್ಮ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಕೆಲವೊಂದು ಸ್ವರಕ್ಷಣೆಯ ತಂತ್ರಗಳನ್ನು ಅರಿತಿರಬೇಕಾಗುತ್ತದೆ. ಅದಕ್ಕೆ ನಾಗರಿಕರನ್ನು ಸಜ್ಜುಗೊಳಿಸುವ ತಾಲೀಮಿಗೆ “ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್” ಎಂದು ಕರೆಯಲಾಗುತ್ತದೆ. ಈಗ ಎರಡೂ ದೇಶಗಳ ಸಂಬಂಧ ಹದಗೆಟ್ಟಿರುವ ಕಾರಣ ಯಾವುದೇ ಸನ್ನಿವೇಶವನ್ನು ಎದುರಿಸಲು ದೇಶದ ನಾಗರಿಕರು ರೆಡಿಯಾಗಿರಲಿ ಎಂಬ ಉದ್ದೇಶದಿಂದ ಭಾರತದಲ್ಲಿ 2025ರ ಮೇ 7ರ ಬುಧವಾರದಂದು ದೇಶಾದ್ಯಂತ ಈ ತಾಲೀಮು ನಡೆಸಲು ನಿರ್ಧರಿಸಲಾಗಿದೆ.
1971ರ ಬಳಿಕ ಮೊದಲ ಬಾರಿ
ಇಂತಹ ಸಿವಿಲ್ ಡಿಫೆನ್ಸ್ ಡ್ರಿಲ್ಗಳು ಭಾರತದಲ್ಲಿ ಕೊನೆಯ ಬಾರಿಗೆ ನಡೆದಿದ್ದು 1971ರಲ್ಲಿ. ಅಂದು ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆದಿತ್ತು. ಅದಕ್ಕೂ ಮುನ್ನ ಕ್ರಾಶ್ ಬ್ಲಾಕ್ಔಟ್ ಕ್ರಮಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು.
224 ಜಿಲ್ಲೆಗಳಲ್ಲಿ ತಾಲೀಮು
ರಾಜ್ಯಗಳಿಗೆ ಗೃಹ ಸಚಿವಾಲಯ ನೀಡಿರುವ ಸೂಚನೆಯ ಪ್ರಕಾರ, ಈ ಡ್ರಿಲ್ ದೇಶದ 244 ಜಿಲ್ಲೆಗಳಲ್ಲಿ ನಡೆಯಲಿದೆ. ಈ ತಾಲೀಮನ್ನು ಗ್ರಾಮ ಮಟ್ಟದವರೆಗೆ ನಡೆಸಲು ಯೋಜಿಸಲಾಗಿದೆ. ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆಯನ್ನು ನಿರ್ಣಯಿಸುವ ಉದ್ದೇಶವನ್ನು ಹೊಂದಿದೆ. ಈ ತಾಲೀಮಿನಲ್ಲಿ ಜಿಲ್ಲಾಧಿಕಾರಿಗಳು, ನಾಗರಿಕ ರಕ್ಷಣಾ ವಾರ್ಡನ್ಗಳು/ಸ್ವಯಂಸೇವಕರು, ಹೋಮ್ ಗಾರ್ಡ್ (ಸಕ್ರಿಯ/ಮೀಸಲು ಸ್ವಯಂಸೇವಕರು)ಗಳು, ಎನ್ಸಿಸಿ, ಎನ್ಎಸ್ಎಸ್, ಎನ್ವೈಕೆಎಸ್, ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. “ಪ್ರತಿಕೂಲ ದಾಳಿಗೆ” ಪ್ರತಿಕ್ರಿಯಿಸಲು ನಾಗರಿಕರಿಗೆ ತರಬೇತಿ ನೀಡುವ ಕೆಲಸವೂ ಈ ಮೂಲಕ ನಡೆಯುತ್ತದೆ.

ಸ್ವರಕ್ಷಣಾ ತಾಲೀಮಿನ ಉದ್ದೇಶಗಳು
ಕೇಂದ್ರ ಗೃಹ ಸಚಿವಾಲಯವು 1968ರ ನಾಗರಿಕರ ರಕ್ಷಣಾ ನಿಯಮಗಳ ಅಡಿಯಲ್ಲಿ ಈ ಡ್ರಿಲ್ಗಳನ್ನು ಆಯೋಜಿಸುತ್ತಿದೆ. ಇದು ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ:
ವಾಯುದಾಳಿಯ ಎಚ್ಚರಿಕೆ ಸೈರನ್ಗಳ ಪರೀಕ್ಷೆ: ವೈಮಾನಿಕ ದಾಳಿ ಅಥವಾ ಕ್ಷಿಪಣಿ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಜನರಿಗೆ ಎಚ್ಚರಿಕೆ ನೀಡಲು ಸೈರನ್ಗಳನ್ನು ಸಕ್ರಿಯಗೊಳಿಸಲಾಗುವುದು. ಹಾಟ್ ಲೈನ್ ಅಥವಾ ರೇಡಿಯೋ ಸಂವಾದ ಲಿಂಕ್ ಗಳನ್ನೂ ಪರೀಕ್ಷಿಸಲಾಗುವುದು. ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದು ಈ ಡ್ರಿಲ್ನ ಮುಖ್ಯ ಗುರಿಯಾಗಿದೆ.
ಕ್ರಾಶ್ ಬ್ಲಾಕ್ಔಟ್ ಕ್ರಮಗಳ ಅನುಷ್ಠಾನ: ರಾತ್ರಿಯ ಸಮಯದಲ್ಲಿ ಶತ್ರು ದೇಶದ ವೈಮಾನಿಕ ದಾಳಿಗಳಿಂದ ರಕ್ಷಣೆ ಪಡೆಯಲು ನಗರಗಳಲ್ಲಿ ದೀಪಗಳನ್ನು ಆರಿಸುವ ಅಭ್ಯಾಸವನ್ನು ನಡೆಸಲಾಗುವುದು. ಇದನ್ನು ಕೊನೆಯ ಬಾರಿಗೆ 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಳಸಲಾಗಿತ್ತು.
ಬಣ್ಣ ಬಳಿಯುವ ಕಾರ್ಯ: ದೇಶದ ಪ್ರಮುಖ ಕಟ್ಟಡಗಳು, ಸೂಕ್ಷ್ಮ ಘಟಕಗಳು ಥಟ್ಟನೆ ಶತ್ರುಗಳ ಕಣ್ಣಿಗೆ, ಶತ್ರುಗಳ ವಿಮಾನಗಳ ಕಣ್ಣಿಗೆ ಕಾಣಿಸದಂತೆ ಹಸಿರು(ಮರ-ಗಿಡಗಳಂತೆ ಕಾಣಿಸುವಂಥ) ಬಣ್ಣವನ್ನು ಬಳಿಯಲಾಗುತ್ತದೆ.
ನಾಗರಿಕರಿಗೆ ತರಬೇತಿ: ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರಿಗೆ ಸಿವಿಲ್ ಡಿಫೆನ್ಸ್ ಕುರಿತು ತರಬೇತಿ ನೀಡಲಾಗುವುದು. ಇದರಲ್ಲಿ ದಾಳಿಯ ಸಂದರ್ಭದಲ್ಲಿ ನಾಗರಿಕರು ಆಶ್ರಯ ಪಡೆಯುವ ವಿಧಾನ, ಮೂಲಭೂತ ಪ್ರಥಮ ಚಿಕಿತ್ಸೆ ಮತ್ತು ಒತ್ತಡದ ಸಂದರ್ಭದಲ್ಲಿ ಶಾಂತವಾಗಿರುವ ಕೌಶಲಗಳನ್ನು ಕಲಿಸಲಾಗುವುದು.
ಸ್ಥಳಾಂತರ ಯೋಜನೆಯ ಪರಿಷ್ಕರಣೆ: ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಯೋಜನೆಗಳನ್ನು ನವೀಕರಿಸಿ, ಅವುಗಳನ್ನು ಅಭ್ಯಾಸ ಮಾಡಿಸಲಾಗುವುದು. ಇದರಿಂದ ತುರ್ತು ಸಂದರ್ಭದಲ್ಲಿ ಆಗುವಂಥ ಗೊಂದಲವನ್ನು ತಪ್ಪಿಸಬಹುದು. ಅಲ್ಲದೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವೂ ಸುಲಭವಾಗಬಹುದು.
ಬಂಕರ್ಗಳು ಮತ್ತು ಕಂದಕಗಳ ಸ್ವಚ್ಛತೆ: ಯುದ್ಧದ ಸಂದರ್ಭದಲ್ಲಿ ಜನರು ಆಶ್ರಯ ಪಡೆಯಲು ಬಳಸುವ ಬಂಕರ್ಗಳು ಮತ್ತು ಕಂದಕಗಳನ್ನು ಸ್ವಚ್ಛಗೊಳಿಸಿ, ಸಿದ್ಧಗೊಳಿಸಲಾಗುವುದು.
ನಿಯಂತ್ರಣ ಕೊಠಡಿಗಳ ಕಾರ್ಯಾಚರಣೆ: ಭಾರತೀಯ ವಾಯುಸೇನೆಯೊಂದಿಗೆ ಸೂಕ್ತ ಸಂಪರ್ಕವನ್ನು ಸ್ಥಾಪಿಸುವ ಮತ್ತು ನಿಯಂತ್ರಣ ಕೊಠಡಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಕೆಲಸವೂ ಈ ಡ್ರಿಲ್ನ ಭಾಗವಾಗಿದೆ.
ಜನರ ಮೇಲಾಗುವ ಪರಿಣಾಮಗಳು
ಈ ಮಾಕ್ ಡ್ರಿಲ್ನ ಸಮಯದಲ್ಲಿ ಜನರು ಕೆಲವು ತಾತ್ಕಾಲಿಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರವು ಮುಂಚಿತವಾಗಿಯೇ ಜನಸಾಮಾನ್ಯರಿಗೆ ಈ ನಾಗರಿಕ ಸ್ವರಕ್ಷಣಾ ತಾಲೀಮಿನ ಬಗ್ಗೆ ಮಾಹಿತಿ ನೀಡುತ್ತದೆ. ಮಾಕ್ ಡ್ರಿಲ್ನ ಸಂದರ್ಭದಲ್ಲಿ ಜನರು ಈ ಕೆಳಗಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು
ತಾತ್ಕಾಲಿಕ ವಿದ್ಯುತ್ ಕಡಿತ: ಕ್ರಾಶ್ ಬ್ಲಾಕ್ಔಟ್ ಅಭ್ಯಾಸದ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಬಹುದು.
ಸೈರನ್ ಶಬ್ದ: ವೈಮಾನಿಕ ದಾಳಿಯ ಎಚ್ಚರಿಕೆ ಸೈರನ್ಗಳನ್ನು ಸಕ್ರಿಯಗೊಳಿಸುವುದರಿಂದ ಹಲವು ಪ್ರದೇಶಗಳಲ್ಲಿ ಏಕಾಏಕಿ ಸೈರನ್ಗಳು ಮೊಳಗಲು ಆರಂಭವಾಗುತ್ತದೆ. ಇದರಿಂದ ಜನರಿಗೆ ತಾತ್ಕಾಲಿಕ ಗೊಂದಲವಾಗಬಹುದು. ಹೀಗಾಗಿ, ಜನರು ಯಾವುದೇ ಗೊಂದಲಕ್ಕೊಳಗಾಗದಂತೆ ಸೂಚನೆ ನೀಡಲಾಗಿದೆ.
ಸಂಚಾರದಲ್ಲಿ ಅಡೆತಡೆ: ಕೆಲವು ನಗರಗಳಲ್ಲಿ ತಾತ್ಕಾಲಿಕವಾಗಿ ಸಂಚಾರದಲ್ಲಿ ಅಡೆತಡೆ ಉಂಟಾಗಬಹುದು.
ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ: ಕೆಲವು ಸಾರ್ವಜನಿಕ ಪ್ರದೇಶಗಳಿಗೆ ಜನಸಾಮಾನ್ಯರು, ನಾಗರಿಕರ ಪ್ರವೇಶವನ್ನು ನಿರ್ಬಂಧಿಸಬಹುದು.
ಈ ಎಲ್ಲ ಪ್ರಕ್ರಿಯೆಗಳೂ ನಿಯಂತ್ರಿತ ಅಭ್ಯಾಸದ ಭಾಗವಾಗಿರುತ್ತದೆ. ಇದು ಯಾವುದೇ ನೈಜ ಬೆದರಿಕೆಯ ಸೂಚನೆಯಲ್ಲ. ಹೀಗಾಗಿ ಜನರು ವಿನಾಕಾರಣ ಗೊಂದಲಕ್ಕೀಡಾಗಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಾಗರಿಕರು ಏನು ಮಾಡಬೇಕು?
- ಶಾಂತವಾಗಿರಿ. ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿರಿ.
- ನೀರು, ಔಷಧಗಳು ಮತ್ತು ಫ್ಲ್ಯಾಷ್ ಲೈಟ್ ಗಳಂಥ ಮೂಲಭೂತ ಪೂರೈಕೆಗಳನ್ನು ಜತೆಗೆ ಇರಿಸಿಕೊಳ್ಳಿ
- ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು, ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ
- ವಿದ್ಯುತ್ ಸಂಪರ್ಕ ಕಡಿತಗೊಂಡರೆ ಅಥವಾ ಏಕಾಏಕಿ ಅಂತರ್ಜಾಲ ಸೇವೆ ಸ್ಥಗಿತಗೊಂಡರೆ ಉದ್ವೇಗಕ್ಕೊಳಗಾಗಬೇಡಿ
- ಅಧಿಕೃತ ಮಾಹಿತಿಗಾಗಿ ಸರ್ಕಾರದ ಸೂಚನೆ, ಸರ್ಕಾರಿ ಚಾನೆಲ್ಗಳನ್ನು ಆಲಿಸಿ.
ಭಾರತ-ಪಾಕಿಸ್ತಾನ ಉದ್ವಿಗ್ನತೆ
ಪಹಲ್ಗಾಮ್ ದಾಳಿಯ ನಂತರ, ಭಾರತ-ಪಾಕ್ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಈಗಾಗಲೇ ಭಾರತವು ಪಾಕ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಲಾಗಿದ್ದು, ಇದನ್ನು ಪಾಕಿಸ್ತಾನವು “ಯುದ್ಧದ ಕೃತ್ಯ” ಎಂದು ಕರೆದಿದೆ. ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶವನ್ನು ನಿಷೇಧಿಸಿದೆ. ಪಾಕಿಸ್ತಾನದ ನಾಗರಿಕರಿಗೆ ವೀಸಾ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನವೂ ತನ್ನ ಕಡೆಯಿಂದ ಶಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸಿದ್ದು, ಗಡಿಯಲ್ಲಿ ರಕ್ಷಣಾ ಸಿದ್ಧತೆಯನ್ನು ತೀವ್ರಗೊಳಿಸಿದೆ. ಖೈಬರ್ ಪಖ್ತುಂಖ್ವಾದಲ್ಲಿ ಯುದ್ಧ ಸೈರನ್ಗಳನ್ನು ಸ್ಥಾಪಿಸಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ಯುವಕರಿಗೆ ಗನ್ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ, ಪಾಕಿಸ್ತಾನವು ತನ್ನ ಸಮುದ್ರತೀರದಲ್ಲಿ ನೌಕಾಯಾನ ಅಭ್ಯಾಸಗಳನ್ನು ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ.
ಪ್ರಧಾನಿ ಮೋದಿ ನಿರಂತರ ಸಭೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಹಲ್ಗಾಮ್ ದಾಳಿಯ ದುಷ್ಕರ್ಮಿಗಳನ್ನು ಎಲ್ಲೇ ಇದ್ದರೂ ಅಟ್ಟಾಡಿಸಿ ಬೇಟೆಯಾಡುವುದಾಗಿ ಶಪಥ ಮಾಡಿದ್ದಾರೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ಸೇನೆಗೆ “ಪೂರ್ಣ ಕಾರ್ಯಾಚರಣಾ ಸ್ವಾತಂತ್ರ್ಯ”ವನ್ನುೂ ನೀಡಿದ್ದಾರೆ. ಜೊತೆಗೆ, ಪಹಲ್ಗಾಮ್ ದಾಳಿ ನಡೆದಾಗಿನಿಂದ ಇಂದಿನವರೆಗೂ ಪ್ರಧಾನಿ ಮೋದಿ ವಿವಿಧ ಉನ್ನತ ನಾಯಕರೊಂದಿಗೆ, ಪರಿಣತರೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಸಿವಿಲ್ ಡಿಫೆನ್ಸ್ ಡ್ರಿಲ್ ಕೂಡ ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ನಾಗರಿಕರ ಸಿದ್ಧತೆಯನ್ನು ಖಚಿತಪಡಿಸುವ ಒಂದು ಕ್ರಮವಾಗಿದೆ.
ನಾಳೆಯ ಡ್ರಿಲ್ಗೆ ಎಲ್ಲರೂ ಸಿದ್ಧರಾಗಿ, ಗೊಂದಲ ಬೇಡ:
ಮೇ 7, 2025ರಂದು ಭಾರತದಲ್ಲಿ ನಡೆಯಲಿರುವ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್(ನಾಗರಿಕರ ಸ್ವರಕ್ಷಣೆ ತಾಲೀಮು) ಒಂದು ತುರ್ತು ಸಿದ್ಧತೆಯ ಕ್ರಮವಾಗಿದ್ದು, ಇದು ದೇಶದ ನಾಗರಿಕರನ್ನು ಯುದ್ಧದಂತಹ ಸಂದರ್ಭಗಳಿಗೆ ಸಿದ್ಧಗೊಳಿಸುವ ಗುರಿಯನ್ನು ಹೊಂದಿದೆ. ಪಹಲ್ಗಾಮ್ ದಾಳಿಯಿಂದ ಉಂಟಾದ ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಈ ಡ್ರಿಲ್ಗಳು ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ನಾಗರಿಕರ ಪಾತ್ರವನ್ನು ಬಲಪಡಿಸುವ ಒಂದು ಮಹತ್ವದ ಕ್ರಮವಾಗಿದೆ. ಜನರು ಈ ಅಭ್ಯಾಸದ ಸಂದರ್ಭದಲ್ಲಿ ಕೆಲವು ತಾತ್ಕಾಲಿಕ ತೊಂದರೆಗಳನ್ನು ಎದುರಿಸಬಹುದಾದರೂ, ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯವಾದ ಕ್ರಮವಾಗಿದೆ.